ಆ್ಯಪ್ನಗರ

ಬಳ್ಳಾರಿಯಲ್ಲಿ ನಿರಂತರ ಮಳೆ, ಬೆಳೆ ರಕ್ಷಣೆಗೆ ಪರದಾಡುತ್ತಿರುವ ರೈತರು!

ಮಳೆ ಎದುರುನೋಡುತ್ತಿದ್ದ ರೈತರೀಗ, ಮಳೆಯ ವಾತಾವರಣ ಕಂಡು ಬೆಚ್ಚಿಬೀಳುವಂತಾಗಿದೆ. ಗಣಿನಾಡಿನಲ್ಲಿ ನಿರಂತರವಾಗಿ ಮೋಡಕವಿದ ವಾತಾವರಣ, ತುಂತುರು ಮಳೆಯಿಂದಾಗಿ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ.

Vijaya Karnataka 15 Nov 2021, 5:11 am

ಹೈಲೈಟ್ಸ್‌:

  • ನಿರಂತರ ಮಳೆ, ಬೆಳೆ ರಕ್ಷಣೆಗೆ ಸಂಕಷ್ಟ
  • ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ
  • ಮೊಡ ಕವಿದ ವಾತಾವರಣದಿಂದ ಕಂಗಲಾದ ರೈತರು
  • ಕಟಾವು ಹಂತಕ್ಕೆ ಬಂದಿರುವ ಭತ್ತ ಸೇರಿ ನಾನಾ ಬೆಳೆಗಳು
  • ಮಳೆಯಿಂದಾಗಿ ಬೆಳೆ ರಾಶಿ ಮಾಡಲು ತೊಂದರೆ, ಬೆಲೆ ಕುಸಿಯುವ ಆತಂಕ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web crop damage by rain
ಸಾಂದರ್ಭಿಕ ಚಿತ್ರ
ಮಾರುತಿ ಸುಣಗಾರ ಬಳ್ಳಾರಿ
ಬಿತ್ತನೆ ಸಂದರ್ಭದಲ್ಲಿ ಮಳೆಗಾಗಿ ಎದುರು ನೋಡುತ್ತಿದ್ದ ರೈತರು, ಈಗ ಮಳೆಯ ವಾತಾವರಣ ಕಂಡು ಬೆಚ್ಚಿಬೀಳುವಂತಾಗಿದೆ. ಗಣಿನಾಡಿನಲ್ಲಿ ನಿರಂತರವಾಗಿ ಮೋಡಕವಿದ ವಾತಾವರಣ, ತುಂತುರು ಮಳೆಯಿಂದಾಗಿ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಪರದಾಟ ನಡೆಸುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಿರುವ ಆತಂಕ ಅನ್ನದಾತರಿಗೆ ಎದುರಾಗಿದೆ.
ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಬಿತ್ತನೆ ಸಂದರ್ಭದಲ್ಲಿ ಮಳೆಗಾಗಿ ರೈತರು ಎದುರು ನೋಡುತ್ತಿದ್ದರು. ಮಳೆ ಸುರಿಯುತ್ತಿದ್ದಂತೆ ಬಿತ್ತನೆ ಕಾರ್ಯಚಟುವಟಿಕೆಗಳು ಎಲ್ಲೆಡೆ ಚುರುಕುಗೊಳ್ಳುತ್ತಿದ್ದವು. ಮುಂಗಾರಿನಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.

ಕೆ.ಆರ್‌. ಪೇಟೆಯಲ್ಲಿ ಮಳೆ ಅವಾಂತರ: ಒಡೆದ ಕೆರೆ ಏರಿ! ಅಪಾರ ಬೆಳೆ ನಷ್ಟ!

ಇದಕ್ಕಾಗಿ ಬೆಳೆಗಳನ್ನು ಕೀಟ, ರೋಗ ಬಾಧೆಯಿಂದ ರಕ್ಷಿಸಿಕೊಳ್ಳಲು ರೈತರು ಹಗಲಿರುಳು ಶ್ರಮಿಸಿದ್ದಾರೆ. ತಿಂಗಳಾನುಗಟ್ಟಲೇ ಬೆಳೆಸಿದ ಬೆಳೆಯಿಂದ ಉತ್ತಮ ಇಳುವರಿಯ ನಿರೀಕ್ಷೆಯನ್ನು ಹೊತ್ತಿದ್ದ ರೈತರಿಗೆ ಈಗ ಮಳೆರಾಯನಿಂದಲೇ ಸಂಕಷ್ಟ ಎದುರಿಸುವಂತಾಗಿದೆ. ಗಣಿಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಟ ನಡೆಸುವಂತಾಗಿದೆ.

ಕಟಾವು ಹಂತದಲ್ಲಿ ಭತ್ತ:
ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ, ಎಲ್‌ಎಲ್‌ಸಿ ವ್ಯಾಪ್ತಿಯಲ್ಲಿಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದು, ಈಗಾಗಲೇ ಬಹುತೇಕ ಕಟಾವು ಹಂತಕ್ಕೆ ಬಂದಿವೆ. ಆದರೆ ತುಂತುರು ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿರುವ ಭತ್ತದ ಬೆಳೆ ನೆಲಕಚ್ಚುತ್ತಿದೆ. ಇನ್ನೂ ಕೆಲವೆಡೆ ಕಟಾವು ಮಾಡಿದ ಭತ್ತ ರಾಶಿ ಹಾಕಿದ್ದು ಮಳೆಯಿಂದಾಗಿ ನೆನೆದು ಮೊಳಕೆ ಬರುವ ಮೂಲಕ ಭತ್ತದ ಕಾಳು ಕಂದು ಬಣ್ಣವಾಗುತ್ತಿದೆ.

ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಭತ್ತ ಬಿತ್ತನೆಯಿಂದ ಕಟಾವು ಹಂತದವರೆಗೂ ಪ್ರತಿ ಎಕರೆಗೆ ಸುಮಾರು 30ಸಾವಿರ ರೂ. ಖರ್ಚು ಮಾಡಿದ್ದು, ಕಟಾವು ವೇಳೆ ಸುರಿಯುತ್ತಿರುವ ಮಳೆಯಿಂದ ಭತ್ತದ ಬೆಲೆ ಕುಸಿಯುವ ಮೂಲಕ ಆತಂಕ ರೈತರು ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕ ನಿರ್ಮಾಣವಾಗಿದೆ.

ಇನ್ನೂ ನಾಲ್ಕು ದಿನ ಮಳೆ: ಶೀತ ಗಾಳಿ ಮೈಕೊರೆಯುವ ಚಳಿ; ಭತ್ತ, ಮೆಕ್ಕೆಜೋಳ ಒಣಗಿಸಲು ಸಮಸ್ಯೆ!

ದುಪ್ಪಟ್ಟಾದ ಖರ್ಚು:
ಮಳೆ ಸುರಿಯುತ್ತಿರುವುದರಿಂದ ಭತ್ತ ಕಟಾವಿಗೆ ದುಪ್ಪಟ್ಟು ಹಣ ಖರ್ಚು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತ ಕಟಾವಿಗೆ ಯಂತ್ರಗಳನ್ನು ಬಳಸುತ್ತಿದ್ದು, ಹೊಲದಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಕಟಾವಿಗೆ ಹೆಚ್ಚಿನ ಹಣವನ್ನು ಯಂತ್ರಕ್ಕೆ ನೀಡಬೇಕಿದೆ. ಇದಲ್ಲದೆ, ರಾಶಿ ಮಾಡಿದ ಸಂದರ್ಭದಲ್ಲಿ ಭತ್ತವನ್ನು ಒಣಗಿಸಲು ಕೂಲಿಗಳಿಗೆ ಸಹ ಹಣ ನೀಡಬೇಕಿದೆ. ಇದರಿಂದ ಗುತ್ತಿಗೆ ಆಧಾರದಲ್ಲಿ ಬೆಳೆದ ರೈತರು ನಷ್ಟದ ಸುಳಿಯಲ್ಲಿ ಸಿಲುಕುವಂತಾಗಿದೆ. ಹೀಗಾಗಿ ರೈತರು ಬೆಳೆಯನ್ನು ಮಳೆಯಿಂದ ಪಾರುಮಾಡಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದಾರೆ.

ಮೆಣಸಿನಕಾಯಿ, ಹತ್ತಿ ಬೆಳೆಗಾರರು ಸಂಕಷ್ಟದಲ್ಲಿ:
ಕಳೆದ ಸಾಲಿನಲ್ಲಿ ಮೆಣಸಿನಕಾಯಿ ಬೆಳೆಗೆ ಚಿನ್ನದ ಬೆಲೆ ಸಿಗುತ್ತಿದ್ದಂತೆ ಈ ಬಾರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸುಮಾರು 80ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಸಾವಿರಾರು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಸಹ ಬೆಳೆಯಲಾಗಿದೆ. ಆದರೆ ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗೆ ಕೀಟ, ರೋಗ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭವಾಗಿದೆ. ಇದರಿಂದ ರೈತರು ಸಾವಿರಾರು ರೂಪಾಯಿ ವ್ಯಹಿಸಿ ಬೆಳೆದ ಬೆಳೆ ಮಳೆಗೆ ತುತ್ತಾಗುತ್ತಿರುವುದು ರೈತರು ನಷ್ಟದ ಭೀತಿಯಲ್ಲಿ ಸಿಲುಕುವಂತೆ ಮಾಡಿದೆ.

ಬೆಳೆ ಬಂದರೂ ಕೊಯ್ಲಿಗೆ ಬಿಡದ ಮಳೆ; ಭತ್ತ, ಜೋಳ, ರಾಗಿ ಸೇರಿದಂತೆ ಎಲ್ಲ ಬೆಳೆಗಳಿಗೂ ಜಲಕಂಟಕ!

ಎಲ್ಲೆಲ್ಲಿ ಎಷ್ಟು ಮಳೆ:
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ನ.01ರಿಂದ 13ರವರೆಗೆ ಒಟ್ಟು 124.7ಮಿಮೀ ಮಳೆ ಸುರಿದಿದೆ. ಬಳ್ಳಾರಿ 17.4ಮಿಮೀ, ಹೂವಿನಹಡಗಲಿ 28.4ಮಿಮೀ, ಹಗರಿಬೊಮ್ಮನಹಳ್ಳಿ 20.4 ಮಿಮೀ, ಹೊಸಪೇಟೆ 13.2ಮಿಮೀ, ಕೂಡ್ಲಿಗಿ 7.6ಮಿಮೀ, ಸಂಡೂರು 8.2ಮಿಮೀ, ಸಿರುಗುಪ್ಪ 14.4ಮಿಮೀ, ಹರಪನಹಳ್ಳಿ 3.1 ಮಿಮೀ, ಕುರುಗೋಡು 13.4ಮಿಮೀ, ಕೊಟ್ಟೂರು 7.4ಮಿಮೀ, ಕಂಪ್ಲಿ 16ಮಿಮೀ ಮಳೆಯಾಗಿದೆ.

"ಕಳೆದೊಂದು ವಾರದಿಂದ ಸುರಿಯುವ ಮಳೆಯಿಂದ ಮೆಣಸಿನಕಾಯಿ ಬೆಳೆಗೆ ಕೀಟ ಬಾಧೆ ಹೆಚ್ಚಾಗಿದೆ. ಇದರಿಂದ ಇಳುವರಿ ಕುಂಠಿತಗೊಳ್ಳುವ ಆತಂಕ ನಿರ್ಮಾಣವಾಗಿದೆ. ಈಗಾಗಲೇ ಕಟಾವು ಹಂತಕ್ಕೆ ಬಂದ ಭತ್ತ ಮಳೆ, ಗಾಳಿಯಿಂದಾಗಿ ನೆಲಕಚ್ಚಿದೆ. ಇದರಿಂದ ಭತ್ತದ ಕಾಳು ನೆಲದ ಪಾಲಾಗಿದೆ. ಇದರಿಂದ ರೈತರು ಈ ಬಾರಿ ಮಳೆಯಿಂದ ನಷ್ಟದ ಸುಳಿಯಲ್ಲಿಸಿಲುಕುವಂತೆ ಮಾಡಿದೆ."
- ಪೂಜಾರಿ ಗಾದಿಲಿಂಗಪ್ಪ, ರೈತ ತಾಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ