ಶಶಿಧರ ಮೇಟಿ, ಬಳ್ಳಾರಿ
ರಾಜ್ಯದ ಎಲ್ಲ ಜಿಲ್ಲೆಗಳ ಅಂಚೆ ಕಚೇರಿಗಳಿಗೆ ಹೊಸ ತಂತ್ರಾಂಶ ಅಳವಡಿಸಲು ಅಂಚೆ ಇಲಾಖೆ ಮುಂದಾಗಿದ್ದು, ಅಂಚೆ ಕಚೇರಿಗಳು ಶೀಘ್ರವೇ ಅತ್ಯಾಧುನಿಕ ಸ್ಪರ್ಶ ಹೊಂದಲಿವೆ.
ಈ ಮೂಲಕ ಕೋರಿಯರ್, ನೆಟ್ ಬ್ಯಾಂಕಿಂಗ್ ಸೇರಿ ಸರಕಾರಿ ಮತ್ತು ಖಾಸಗಿ ಕಂಪನಿಗಳ ಜತೆ ತುರುಸಿನ ಸ್ಪರ್ಧೆ ನೀಡಲು ಅಂಚೆ ಇಲಾಖೆಯನ್ನು ಅಣಿಗೊಳಿಸಲು ಯೋಜಿಸಲಾಗಿದೆ. ಕೇಂದ್ರ ಸರಕಾರದ ಐಟಿ ಮಾಡರ್ನೈಜೇಷನ್ ಪ್ರಾಜೆಕ್ಟ್ ಮುಂದುವರಿದ ಭಾಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಅಂಚೆ ಕಚೇರಿಗಳಲ್ಲಿ ಕೋರ್ ಸಿಸ್ಟ್ಂ ಇಂಟಿಗ್ರೇಷನ್ (ಸಿಎಸ್ಇ) ತಂತ್ರಾಂಶ ಅಳವಡಿಸಲಾಗುತ್ತಿದೆ.
ಬೆಂಗಳೂರು, ಮಂಡ್ಯ, ಮೈಸೂರು, ಬೀದರ್, ಗದಗ, ಧಾರವಾಡ, ಕೊಪ್ಪಳ, ಉತ್ತರ ಕನ್ನಡ ಮತ್ತು ಬಾಗಲಕೋಟ ಜಿಲ್ಲೆಗಳ ಅಂಚೆ ಕಚೇರಿಗಳಲ್ಲಿ ಈಗಾಗಲೇ ನೂತನ ತಂತ್ರಾಂಶ ಅಳವಡಿಸಲಾಗಿದೆ. ಬಳ್ಳಾರಿ ಮತ್ತು ಪುತ್ತೂರು ಅಂಚೆ ವಿಭಾಗಗಳಲ್ಲಿ ಹೊಸ ತಂತ್ರಾಂಶ ಅಳವಡಿಕೆ ಪ್ರಗತಿಯಲ್ಲಿದೆ. ಬಳ್ಳಾರಿ ಅಂಚೆ ವಿಭಾಗದಲ್ಲಿ ಜ.20ರಿಂದ 22ರವರೆಗೆ ಸ್ಥಗಿತವಾಗುವ ಗ್ರಾಹಕರ ಸೇವೆಗಳು, ಜ.23ರಿಂದ ನೂತನ ತಂತ್ರಾಂಶದೊಂದಿಗೆ ಲಭ್ಯವಾಗಲಿವೆ.
ಏನೇನು ಉಪಯೋಗ?: ಸಿಎಸ್ಇ ಪದ್ಧತಿಯಿಂದ ಅಂಚೆ ಇಲಾಖೆಯ ಪತ್ರಗಳ ವಿಲೇವಾರಿಗೆ ಸಂಬಂಧಿಸಿ, ವಿಲೇವಾರಿಯ ನಾನಾ ಹಂತಗಳನ್ನು ಗ್ರಾಹಕರಿಗೆ ತುರ್ತಾಗಿ ತಿಳಿಯಲಿದೆ. ಲಾಜಿಸ್ಟಿಕ್ ಪೋಸ್ಟಲ್ ಸೇವೆ, ಫ್ಲಿಪ್ಕಾರ್ಟ್ ಮಾದರಿ ಸೇರಿ ಹಲವು ಸೇವೆಗಳು ಅಂಚೆ ಇಲಾಖೆಯಲ್ಲಿ ಲಭ್ಯವಾಗಲಿವೆ. ಅಂಚೆ ಕಚೇರಿಯ ಕೌಂಟರ್ಗಳಲ್ಲಿ ಕಾಲ್ಸೆಂಟರ್, ವೆಬ್ಪೋರ್ಟಲ್, ಮೊಬೈಲ್ ಡಿವೈಸ್ ಬಳಕೆ ಸೇವೆ ದೊರೆಯಲಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ.
ಹಲವು ಸೇವೆಗಳಿಗೆ ಏಕ ಗವಾಕ್ಷಿ: ಹೊಸ ತಂತ್ರಜ್ಞಾನ ಮೂಲಕ ಅಂಚೆ ಇಲಾಖೆಯ ಹಣಕಾಸು ವಿಭಾಗ, ಆರ್ಥಿಕ ಸೇವೆ ಏಕ ಗವಾಕ್ಷಿಯಡಿ ತರಲಾಗುತ್ತಿದೆ. ಬ್ಯಾಂಕಿಂಗ್, ವಿಮೆ ಸೇರಿ ಇತರ ಸೇವೆಗಳಿಗೂ ಹೊಸ ತಂತ್ರಜ್ಞಾನದ ಸ್ಪರ್ಶವಾಗಲಿದೆ. ಸಿಬ್ಬಂದಿಯ ಸಂಬಳ, ಮುಂಬಡ್ತಿ, ಸೇವೆ, ಕಾರ್ಯತತ್ಪರತೆ, ಮಾನವ ಸಂಪನ್ಮೂಲದಂತಹ ವಿಷಯಗಳೂ ಹೊಸ ಪದ್ಧತಿಯ ವ್ಯಾಪ್ತಿಗೆ ಒಳಪಡಲಿವೆ. ಗ್ರಾಮೀಣ ಭಾಗದ 'ದರ್ಪಣ ತಂತ್ರಾಂಶ'ದ ಸೇವೆಯನ್ನೂ ಹೊಸ ಕೋರ್ ಸಿಸ್ಟ್ಂ ಇಂಟಿಗ್ರೇಷನ್ ಪದ್ಧತಿಗೆ ಲಿಂಕ್ ಮಾಡುವುದರಿಂದ ಗ್ರಾಮೀಣ ಅಂಚೆ ಕಚೇರಿಗಳಿಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶವಾಗಲಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಅಂಚೆ ಕಚೇರಿಗಳು ಈ ತಂತ್ರಾಂಶಕ್ಕೆ ಒಳಪಡಲಿವೆ.
..............
ಸಾರ್ವಜನಿಕರು ಮತ್ತು ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ಹೊಸ ತಂತ್ರಾಂಶ ಅಳವಡಿಸಲಾಗುತ್ತಿದೆ.
-ಬಸವರಾಜ್, ಅಂಚೆ ಅಧೀಕ್ಷಕರು, ಅಂಚೆ ಇಲಾಖೆ, ಬಳ್ಳಾರಿ ವಿಭಾಗ, ಬಳ್ಳಾರಿ