ಆ್ಯಪ್ನಗರ

ಇ-ಹಾಜರಿ ತಪ್ಪಿದರೆ, ವೇತನಕ್ಕೇ ಕತ್ತರಿ

ರಾಜ್ಯದ ಹಲವು ಇಲಾಖೆಗಳು ಇ-ಹಾಜರಿ ಪದ್ಧತಿಗೆ ಒಳಪಟ್ಟರೂ ಪಾಲನೆ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬ ದೂರುಗಳು ಮಧ್ಯೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇ-ಹಾಜರಾತಿಯನ್ನು ಹಳಿಗೆ ತರಲು ಸಿಬ್ಬಂದಿಯ ವೇತನಕ್ಕೇ ಕತ್ತರಿ ಪ್ರಯೋಗಿಸಲು ಮುಂದಾಗಿದೆ.

Vijaya Karnataka 16 Sep 2018, 12:00 am
ಯಮನಪ್ಪ ಪವಾರ, ಬಳ್ಳಾರಿ
Vijaya Karnataka Web if e attendance fails scissors are payment
ಇ-ಹಾಜರಿ ತಪ್ಪಿದರೆ, ವೇತನಕ್ಕೇ ಕತ್ತರಿ


ರಾಜ್ಯದ ಹಲವು ಇಲಾಖೆಗಳು ಇ-ಹಾಜರಿ ಪದ್ಧತಿಗೆ ಒಳಪಟ್ಟರೂ ಪಾಲನೆ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬ ದೂರುಗಳು ಮಧ್ಯೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇ-ಹಾಜರಾತಿಯನ್ನು ಹಳಿಗೆ ತರಲು ಸಿಬ್ಬಂದಿಯ ವೇತನಕ್ಕೇ ಕತ್ತರಿ ಪ್ರಯೋಗಿಸಲು ಮುಂದಾಗಿದೆ.

ಕಳೆದ ವರ್ಷವೇ ಇ-ಹಾಜರಾತಿ ಪದ್ಧತಿ ಜಾರಿಗೆ ಬಂದರೂ ಬಳಕೆಯಲ್ಲಿ ಅಶಿಸ್ತು ಕಾಣಿಸಿದ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಮಾರ್ಗ ತುಳಿಯಲಾಗಿದೆ. ಕಚೇರಿಗೆ ಸರಿಯಾಗಿ ಸಿಬ್ಬಂದಿ ಬರುವುದಿಲ್ಲ. ಸ್ಥಳೀಯ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಡ್ಯೂಟಿಗೆ ಚಕ್ಕರ್ ಹಾಕುತ್ತಾರೆ. ಕಚೇರಿ ಸಮಯದಲ್ಲಿ ಜನರಿಗೆ ಲಭ್ಯವಾಗುವುದಿಲ್ಲವೆಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಿ ಕ್ರಮ ತರಲಾಗಿದೆ. ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹ ಈ ಪದ್ಧತಿಯನ್ನು ಕಳೆದ ವರ್ಷವೇ ಅಳವಡಿಸಿಕೊಂಡಿದೆ. ಪಾಲನೆಯಲ್ಲಿ ನಿರ್ಲಕ್ಷ್ಯ ಮುಂದುವರಿದ ಕಾರಣ ಈಗ ವೇತನ ತಡೆಯ ನಿರ್ಧಾರ ಕೈಗೊಳ್ಳಲಾಗಿದೆ. ಇಲಾಖೆ ಕಾರ್ಯದರ್ಶಿಯೇ ಈ ಕುರಿತು ಆಗಸ್ಟ್ ಕೊನೆಯಲ್ಲಿ ಸೂಚನೆ ರವಾನಿಸಿದ್ದಾರೆ.

ಪಾಲನೆಗೆ ಕ್ರಮ ಏನು?:ಗ್ರಾ.ಪಂ., ತಾ.ಪಂ., ಜಿ.ಪಂ.ಗಳಲ್ಲಿ ಈಗಾಗಲೇ ಇ-ಹಾಜರಾತಿ ಪರಿಚಯಿಸಲಾಗಿದೆ. ಆದರೂ, ಬಹುತೇಕ ಕಡೆಗಳಲ್ಲಿ ರಿಜಿಸ್ಟರ್ ಬುಕ್‌ಗಳಲ್ಲಿ ಸಹಿ ಮಾಡುವ ಪದ್ಧತಿ ಕೈ ಬಿಟ್ಟಿಲ್ಲ. ಪದೇ ಪದೆ ಹೇಳಿದಾಗಲೂ ಸುಧಾರಣೆ ಕಂಡಿಲ್ಲ. ಇದನ್ನು ಹಳಿಗೆ ತರಲು ಪ್ರತಿ ತಿಂಗಳ ವೇತನ ಪಾವತಿಗೆ ಇ-ಹಾಜರಾತಿಯನ್ನು ಪರಿಗಣಿಸಲು ಮುಂದಾಗಿದ್ದಾರೆ. ಗ್ರಾ.ಪಂ.ನಲ್ಲಿ ಪಿಡಿಒ, ತಾ.ಪಂ.ನಲ್ಲಿ ಇಒ, ಜಿ.ಪಂ.ನಲ್ಲಿ ಸಿಇಒ ಹಾಜರಾತಿ ಮೇಲ್ವಿಚಾರಣೆ ಮಾಡಬೇಕು. ಗ್ರಾ.ಪಂ.ಮಟ್ಟದಲ್ಲಿ ಪಾಲನೆಯಾಗದಿದ್ದಾಗ ಇಒ ಗಮನಿಸಿ ಪಿಡಿಒಗಳ ವೇತನ ತಡೆ ಹಿಡಿಯಬೇಕು. ಇಒಗಳು ವಿಫಲರಾದಾಗ ಅವರ ವೇತನಕ್ಕೆ ಸಿಇಒಗಳು ಕತ್ತರಿ ಹಾಕಬೇಕು ಎಂದು ಆದೇಶಿಸಲಾಗಿದೆ. ಅಧೀನ ಸಿಬ್ಬಂದಿಯ ವಿಷಯದಲ್ಲಿ ಆಯಾ ಕಚೇರಿ ಮುಖ್ಯಸ್ಥರು ಕ್ರಮ ಕೈಗೊಳ್ಳಲಿದ್ದಾರೆ. ಕ್ಷೇತ್ರ ಭೇಟಿ ಜವಾಬ್ದಾರಿ ಹೊಂದಿರುವ ಪಿಡಿಒ, ಇಒ, ಸಿಇಒಗೆ ಇದರಲ್ಲಿ ವಿನಾಯಿತಿಯುಂಟು.

ಆಧಾರ್ ಜೋಡಣೆ:ಹಾಜರಾತಿಯಲ್ಲಿ ಗೋಲ್‌ಮಾಲ್ ನಡೆಯದಂತೆ ನೋಡಿಕೊಳ್ಳಲು 2ನೇ ಹಂತದಲ್ಲಿ ಆಧಾರ್ ಆಧರಿತ ಇ-ತಂತ್ರಾಂಶ ರೂಪಿಸುವಂತೆ ನ್ಯಾಶನಲ್ ಇನ್‌ಫಾರ್ಮೆಟಿಕ್ ಸೆಂಟರ್ (ಎನ್‌ಐಸಿ)ಗೆ ಸಂದೇಶ ರವಾನಿಸಲಾಗಿದೆ. ಅಕ್ಟೋಬರ್ ಅಂತ್ಯದೊಳಗೆ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ರೂಪಿಸಿ, ನವೆಂಬರ್‌ನಿಂದಲೇ ಅನುಷ್ಠಾನಕ್ಕೆ ತರಲು ಗಡುವು ವಿಧಿಸಲಾಗಿದೆ. ಕಾರಣ ಕೇಳಿ ಹಲವು ನೋಟಿಸ್ ಜಾರಿ ಮಾಡಿದಾಗ ಸ್ಪಂದನೆ ಇಲ್ಲವಾಗಿದ್ದು, ಕಠಿಣ ನಿಲುವಿಗೆ ಆಸ್ಪದ ನೀಡಿದೆ. ನಾನಾ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ತಡೆಯಲು ವೇತನವನ್ನು ಲಿಂಕ್ ಮಾಡಬೇಕೆನ್ನುವ ಅಭಿಪ್ರಾಯಕ್ಕೆ ಕೊನೆಯಲ್ಲಿ ಇಲಾಖೆ ಸಹಮತಿ ಸೂಚಿಸಿದೆ. ಇ-ಆಡಳಿತ ನಿರ್ದೇಶಕರು ವ್ಯವಸ್ಥೆಯ ಮೇಲೆ ತಾಂತ್ರಿಕ ನಿಗಾವಹಿಸಿದ್ದು, ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಅಂಗೈನಲ್ಲೇ ದಿನವಹಿ ಚಿತ್ರಣ ದೊರಕಲಿದೆ.

ಟೆನ್‌ಪರ್ಸೆಂಟ್ ಕಾರಣ; ಆರ್‌ಡಿಪಿಆರ್ ಮುಖ್ಯಕಚೇರಿಯಲ್ಲಿ ಆಗಸ್ಟ್ ಕೊನೆಯಲ್ಲಿ ಇಲಾಖೆ ಕಾರ್ಯದರ್ಶಿ, ನಿರ್ದೇಶಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಜರಾತಿ ಪ್ರಮಾಣ ಅವಲೋಕಿಸಲಾಗಿದೆ. ಕಲಬುರಗಿ, ಯಾದಗಿರಿ, ಕೊಪ್ಪಳದಲ್ಲಿ ಸಿಬ್ಬಂದಿ ಇ-ಹಾಜರಿ ಶೇ.10 ರಷ್ಟು ಮೀರದ್ದನ್ನು ಪ್ರಸ್ತಾಪಿಸುತ್ತಿದ್ದಂತೆ ವೇತನಕ್ಕೆ ಹಾಜರಿ ಸಿಸ್ಟಂ ಜೋಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.

.....

ಎಷ್ಟು ಸಿಬ್ಬಂದಿಗೆ ಅನ್ವಯ ?

ಗ್ರಾ.ಪಂ.-74,834

ತಾ.ಪಂ.-3,039

ಜಿ.ಪಂ.-1823

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ