ಹೊಸಪೇಟೆ: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ಜನ್ಮ ತಳೆದಿರುವ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ 25 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೆ.12ರ ಸಂಜೆ 5 ಗಂಟೆಗೆ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ ಹೇಳಿದರು.
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ವಿವಿ 1992ರಲ್ಲಿ ಜನ್ಮ ತಳೆದಿದೆ. ಈಗ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಹಬ್ಬ ವರ್ಷದುದ್ದಕ್ಕೂ ಆಚರಿಸಲಾಗುವುದು. ಬೆಳ್ಳಿ ಹಬ್ಬದ ನಿಮಿತ್ತ 25 ಪುಸ್ತಕಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. 2018ರ ಸೆ.12ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 500 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಸಚಿವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ವಾರವಿಡೀ ಕಾರ್ಯಕ್ರಮ: ಕನ್ನಡ ವಿವಿಯ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮ ಸೆ.12ರಿಂದ 18ರ ವರೆಗೆ ಒಂದು ಇಡೀ ವಾರ ನಡೆಯಲಿದೆ. ನಿರಂತರ ವಿಚಾರಣ ಸಂಕಿರಣಗಳು ಇರಲಿವೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಭಾಷೆ, ಸಂಸ್ಕೃತಿ, ಸಂಶೋಧನೆ ಕುರಿತು ಹೆಚ್ಚು ಚರ್ಚೆ ನಡೆಯಬೇಕಿದೆ. ಸಹಿಷ್ಣುತೆ, ಸೌಹಾರ್ದತೆ, ಸಾಂಸ್ಕೃತಿಕ ಸಿರಿವಂತಿಕೆ ಕುರಿತು ಚರ್ಚೆ ನಡೆಯಬೇಕಿದೆ. ಕನ್ನಡ ವಿವಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿದೆ. ಈಗಾಗಲೇ ಪ್ರಸಾರಾಂಗದಿಂದ 1846 ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದರು. ಬೆಳ್ಳಿಹಬ್ಬದ ನಿಮಿತ್ತ ವಿಶೇಷ ಅಂಚೆ ಲಕೋಟೆ ಕೂಡ ಬಿಡುಗಡೆ ಮಾಡಲಾಗುವುದು. ಕನ್ನಡ ವಿವಿ ಲಾಂಛನ ಬಳಸಿಕೊಂಡು ಈ ಲಕೋಟೆ ಹೊರತರಲಾಗುತ್ತಿದೆ. ಪುಸ್ತಕಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಕನ್ನಡ ವಿವಿಯ ಡಾ. ಮಂಜುನಾಥ್ ಬೇವಿನಕಟ್ಟಿ, ಡಾ. ಅಶೋಕ್ ಕುಮಾರ ರಂಜೇರೆ, ಡಾ. ಮೋಹನ್ ಕುಂಟಾರ್, ಡಾ. ಸಿದ್ದಗಂಗಮ್ಮ, ಡಾ. ಶಿವಾನಂದ ವಿರಕ್ತಮಠ, ಪ್ರಭಾ, ಡಾ. ಮೀನಾಕ್ಷಿ ಮತ್ತಿತರರಿದ್ದರು.