ಆ್ಯಪ್ನಗರ

ಜಿಂದಾಲ್‌ಗೆ ಭೂಮಿ ಪರಭಾರೆ ಖಂಡಿಸಿ ‘ಪತ್ರ ಚಳವಳಿ’

ಜಿಲ್ಲೆಯ ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆ ಮಾಡಿರುವುದರ ವಿರುದ್ಧ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಅಂಚೆ ಕೊಟ್ರೇಶ ಪತ್ರ ಚಳವಳಿ ಆರಂಭಿಸಿದ್ದಾರೆ.

Vijaya Karnataka 19 Jun 2019, 5:00 am
ವಿಶೇಷ ವರದಿ, ಕೊಟ್ಟೂರು
Vijaya Karnataka Web letter movement condemning land deeds to jindal
ಜಿಂದಾಲ್‌ಗೆ ಭೂಮಿ ಪರಭಾರೆ ಖಂಡಿಸಿ ‘ಪತ್ರ ಚಳವಳಿ’

ಜಿಲ್ಲೆಯ ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆ ಮಾಡಿರುವುದರ ವಿರುದ್ಧ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಅಂಚೆ ಕೊಟ್ರೇಶ ಪತ್ರ ಚಳವಳಿ ಆರಂಭಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, 'ಗಾಂಧಿ ಉಸಿರು ಹಸಿರಾಗಲಿ' ಎಂಬ ತಲೆಬರಹದಡಿ, ಜಿಂದಾಲ್‌ಗೆ ಭೂಮಿ ನೀಡಿರುವುದನ್ನು ಆಕ್ಷೇಪಿಸಿ, ಜಿಲ್ಲೆಯಲ್ಲಿನ ಜಲಾಶಯ, ಪರಿಸರ ಸಂಪತ್ತು ಹಾಗೂ ರೈತರು ಪಡುತ್ತಿರುವ ಪಾಡು ಸಂಕ್ಷಿಪ್ತವಾಗಿ ತಿಳಿಸಿ, ಪ್ರಕೃತಿ ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ, ನಿಮಗೂ ಇಲ್ಲ. ಜಿಂದಾಲ್‌ಗೆ ಭೂಮಿ ಮಾರಾಟ ಮಾಡಬೇಡಿ ಎಂದು ಬರೆದಿದ್ದಾರೆ. ತಮ್ಮ ಚಳವಳಿಗೆ ಕೈ ಜೋಡಿಸ ಬಂದವರಿಗೆ ಉಚಿತವಾಗಿ ನೀಡಲು ಒಂದು ಸಾವಿರ ಅಂಚೆ ಪತ್ರಗಳನ್ನು ವೈಯಕ್ತಿಕವಾಗಿ ಖರೀದಿಸಿದ್ದಾರೆ.

ಹಿಂದೆ ಡಾ.ಎಂ.ಎಂ.ಕಲಬುರಗಿ, ಕವಿತಾ ಲಂಕೇಶ್‌ ಹತ್ಯೆಯಾದಾಗ, ಹಂತಕರನ್ನು ಶೀಘ್ರ ಪತ್ತೆ ಹಚ್ಚಲು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆದು ಪ್ರತಿಭಟಿಸಿದ್ದರು. ಕಲಬುರಗಿ ಕೊಲೆ ಖಂಡಿಸಿ ಅಂಚೆ ಕಚೇರಿ ಮುಂದೆ ಅವರ ಕೃತಿಗಳನ್ನು ಇಡೀ ದಿನ ಓದಿ ಪ್ರತಿಭಟಿಸಿದ್ದರು. ಕೊಟ್ಟೂರು ಕೆರೆ ಸ್ವಚ್ಛತೆಗೆ ಆಂದೋಲನಕ್ಕೆ ಶ್ರಮಿಸಿದ್ದರು. 2018ರ ಹಂಪಿ ಉತ್ಸವ ನಡೆಸಲು ಒತ್ತಾಯಿಸಿ ಪತ್ರ ಚಳವಳಿ ಮಾಡಿದ್ದರು. ಇದೀಗ ಜಿಂದಾಲ್‌ಗೆ 3600 ಎಕರೆ ಭೂಮಿ ಪರಭಾರೆ ಆಕ್ಷೇಪಿಸಿ ತಮ್ಮದೇ ಮಿತಿಯಲ್ಲಿ ಪತ್ರ ಚಳವಳಿ ಆರಂಭಿಸಿದ್ದಾರೆ.

ಆರಂಭಿಸಿರುವ ಪತ್ರ ಚಳವಳಿಗೆ ಬೆಂಬಲ ನೀಡುವಂತೆ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ 'ಇಂದಿರಾ ಹಾಕಿದ ಅಡಿಗಲ್ಲು ಆಗಲಿಲ್ಲ, ಮೇಲ್ಗಲ್ಲು ಆಗಲಿಲ್ಲ' ಎಂಬ ಘೋಷಣೆ ಕೂಗುತ್ತಾ ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತಿಘಟನೆ ನಡೆಸಿ ಜೈಲು ವಾಸ ಅನುಭವಿಸಿದ್ದೆ. ಸಂಡೂರು ಸುತ್ತಲಿನ ಪರಿಸರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಗಾಂಧಿ ಮಾತಿಗೂ ಬೆಲೆ ಇಲ್ಲವಾಗಿದೆ. ದೈತ್ಯ ರೂಪದ ಜಿಂದಾಲ್‌ ನಮ್ಮ ಭಾಗದ ಹಸಿರು ನುಂಗಿ ವಿಶ್ವಕ್ಕೆ ಕಬ್ಬಿಣ ಹಂಚುತ್ತಿದೆ. ತುಂಗಭದ್ರಾ ಜಲಾಶಯದ ನೀರು ಪಡೆದು, ಜನರಿಗೆ ಉದ್ಯೋಗ ನೀಡುವ ಮಾತು ಹೇಳುತ್ತಾ, ಜಿಂದಾಲ್‌ ಎಲ್ಲ ರಾಜಕೀಯ ಪಕ್ಷ ದ ಸರಕಾರದ ಮಂತ್ರಿಗಳಿಗೆ ಮಿತ್ರವಾಗಿದೆ.ಇಂತಹ ಸಂದರ್ಭದಲ್ಲಿ ಮತ್ತೆ 3600 ಎಕರೆ ಭೂಮಿಯನ್ನು ಪರಿಸರ ಹಾಳು ಮಾಡಬೇಡಿ. ಅರಣ್ಯ ಸಂಪತ್ತು, ಪ್ರಾಣಿ ಪಶು ಪಕ್ಷಿಗಳ ಮಾರಣ ಹೋಮ ನಡೆಸಲು ಅವಕಾಶ ಕೊಡಬೇಡಿ ಎಂದು ವಿವರವಾಗಿ ಬರೆದಿದ್ದಾರೆ.

............................

ಕೋಟ್‌

ಪತ್ರ ಚಳವಳಿಗೆ ಕೈ ಜೋಡಿಲು ಕೇಳಿರುವೆ. ನ್ಯಾಯ ಸಿಗುವರೆಗೂ ಪತ್ರ ಬರೆಯುವೆ. ವಿಫಲವಾದರೆ ಸಾಂಕೇತಿಕವಾಗಿ ಕಪ್ಪು ಬಟ್ಟೆ ಧರಿಸಿ ಕಚೇರಿಯಲ್ಲಿ ಕೆಲಸ ಮಾಡುವೆ.

-ಅಂಚೆ ಕೊಟ್ರೇಶ, ಸಾಮಾಜಿಕ ಕಾರ್ಯಕರ್ತ, ಕೊಟ್ಟೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ