ಆ್ಯಪ್ನಗರ

ಮೆಕ್ಕೆಜೋಳ ಬೆಳೆಗೆ ಬೆಂಬತ್ತಿದ ಫಾಲ್‌ ಆರ್ಮಿ ವರ್ಮ್‌

ಕಳೆದ ಬಾರಿ ಮೆಕ್ಕೆಜೋಳ ಬೆಳೆಗೆ ಕಾಡಿ ಹಾನಿ ಮಾಡಿದ್ದ ಫಾಲ್‌ ಆರ್ಮಿ ವರ್ಮ್‌ ಕೀಟಗಳ ಕಾಟ, ಈ ವರ್ಷದಲ್ಲಿಯೂ ಮುಂದುವರಿದಿದ್ದು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೆ ದೂಡಿದೆ.

Vijaya Karnataka 22 Aug 2018, 5:00 am
ಕೊಟ್ಟೂರು : ಕಳೆದ ಬಾರಿ ಮೆಕ್ಕೆಜೋಳ ಬೆಳೆಗೆ ಕಾಡಿ ಹಾನಿ ಮಾಡಿದ್ದ ಫಾಲ್‌ ಆರ್ಮಿ ವರ್ಮ್‌ ಕೀಟಗಳ ಕಾಟ, ಈ ವರ್ಷದಲ್ಲಿಯೂ ಮುಂದುವರಿದಿದ್ದು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೆ ದೂಡಿದೆ.
Vijaya Karnataka Web BLR-BLY21KTR1


ತಾಲೂಕಿನಲ್ಲಿ ಮುಂಗಾರು ಆರಂಭದಲ್ಲಿ ಬಿದ್ದ ಮಳೆಯಿಂದ ಸಂತಸಗೊಂಡಿದ್ದ ರೈತರು 40ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ ನಂತರದಲ್ಲಿ ಮಳೆ ಕೊರತೆಯಿಂದ ಸೊರಗಲಾರಂಭಿಸಿದ್ದ ಬೆಳೆ ಕಂಡು ಮರುಗಿದ್ದ ರೈತರಿಗೆ, ಇದೀಗ ಬೆಳೆದು ನಿಂತಿರುವ ಮೆಕ್ಕೆಜೋಳದ ಸುಳಿಯೊಳಗೆ ಫಾಲ್‌ ಆರ್ಮಿ ವರ್ಮ್‌ ಕೀಟಗಳು ದಾಳಿ ಇಟ್ಟಿರುವುದರಿಂದ ರೈತರು ತತ್ತರಿಸುವಂತಾಗಿದೆ. ಮಳೆ ಕೊರತೆ ನಡುವೆಯೂ ಅಲ್ಪ-ಸ್ವಲ್ಪವಾದರೂ ಬೆಳೆ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ಹುಳುಗಳ ಕಾಟ: ಜೂನ್‌, ಜುಲೈನಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಡ ಬಿತ್ತಿದ್ದ ಕಡೆ ಮೆಕ್ಕೆಜೋಳ ಬೆಳೆದು ಸುಳಿ ಬಿಟ್ಟಿದೆ. ಕೆಲವೆಡೆ ಬೆಳೆಯುವ ಹಂತದಲ್ಲಿದೆ. ಇದೇ ಹೊತ್ತಿಗೆ ಮಳೆ ಕೈ ಕೊಟ್ಟಿದೆ. ಮೋಡ ಮುಸುಕಿದ ವಾತಾವರಣದಿಂದ ತೇವಾಂಶ ಕಾರಣಕ್ಕೆ ಬೆಳೆಗಳು ಉಳಿದಿದ್ದವು. ಕೆಲವೆಡೆ ಬಾಡಲಾರಂಭಿಸಿದ್ದ ಬೆಳೆಯನ್ನು ರೈತರು ಕಿತ್ತು ಹಾಕಿದ್ದರು. ಹಿಂದಿನ ವಾರದಲ್ಲಿ ಬಿದ್ದ ತುಂತುರು ಮಳೆಯೇ ಬೆಳೆಗೆ ಆಸರೆಯಾಗಿದೆ. ಹೇಗಾದರೂ ಸರಿ ಬೆಳೆ ಕೈಗೆ ಬಂದರೆ ಸಾಕು ಎನ್ನುತ್ತಿದ್ದ ರೈತರಿಗೆ ಹುಳುಗಳ ಕಾಟ ಎದುರಿಸುವುದೇ ಕೆಲಸವಾಗಿದೆ. ಹಿಂದಿನ ವರ್ಷದಲ್ಲಿಯೂ ಸಹ ತೆನೆ ಬಿಡುವ ಹಂತದಲ್ಲಿದ್ದ ಮೆಕ್ಕೆಜೋಳ ಬೆಳೆಗೆ ಇದೇ ರೀತಿ ಹುಳು ಬಾಧೆ ಕಾಣಿಸಿಕೊಂಡು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷವೂ ಮತ್ತೆ ಆರ್ಮಿ ಕೀಟದ ಕಾಟ ಮುಂದುವರೆದಿರುವುದು ನಷ್ಟದ ಭೀತಿಯಲ್ಲಿ ದೂಡಿದೆ.

ಹಾಳಾದ ಬೆಳೆ: ಇತ್ತ ಮಳೆ ಇಲ್ಲ, ಬಿಸಿಲೂ ಇಲ್ಲ. ಮೋಡ ಮುಸುಕಿದ ವಾತಾವರಣ, ಸಂಜೆಯಾಗುತ್ತಿದ್ದಂತೆ ಶೀತ ಗಾಳಿ. ಇಂತಹ ವಾತಾವರಣ ಇಂತಹ ಕೀಟ ದಾಳಿಯಿಡಲು ಅನುಕೂಲಕರವಾಗಿದೆ. ಮೆಕ್ಕೆಜೋಳದ ಸುಳಿಯೊಳಗೆ ಕೀಟಗಳಿರುವುದರಿಂದ ಪ್ರಾರಂಭದಲ್ಲಿ ಯಾವುದೂ ಗೊತ್ತಾಗುವುದಿಲ್ಲ. ಆದರೆ ಹಂತ ಹಂತವಾಗಿ ಹುಳುಗಳು ಎಲೆಯನ್ನು ತಿನ್ನಲಾರಂಭಿಸಿದಾಗಲೇ ಕೀಟ ಕಾಟದ ಅನುಭವ ತಿಳಿಯುತ್ತದೆ. ಅಷ್ಟು ಹೊತ್ತಿಗೆ ಕೀಟ ನಿಯಂತ್ರಣಕ್ಕೆ ಮುಂದಾದರೂ ಅರ್ಧದಷ್ಟು ಬೆಳೆಯನ್ನು ಹಾಳು ಮಾಡಿರುತ್ತದೆ.

ಎಲೆಗಳಿಗೆ ಕೀಟ ದಾಳಿ: ಫಾಲ್‌ ಆರ್ಮಿ ವರ್ಮ್‌ ಕೀಟ ಮಾಹಿತಿ ಅರಿತಿರುವ ರೈತರು ತಮ್ಮ ಬೆಳೆಗಳನ್ನೂ ಪರೀಕ್ಷಿಸಿದಾಗ ಸುಳಿಗಳಲ್ಲಿರುವುದು ಕಂಡ ಬಂದಿದೆ. ಕೆಲವೆಡೆ ಮೆಕ್ಕೆಜೋಳದ ಎಲೆಗಳನ್ನು ಹುಳುಗಳು ತಿಂದು ಹಾಕಿವೆ. ಮತ್ತೆ ಕೆಲವಡೆ ಸುಳಿಯೊಳಗೆ ಕಾಣಿಸಲಾರಂಭಿಸಿವೆ. ಬೆಳೆ ನಷ್ಟದ ಭೀತಿಯಲ್ಲಿರುವ ರೈತರು ಕೀಟಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದಿರುವ ರೈತರು ಆಳುಗಳ ಮೂಲಕ ಮೆಕ್ಕೆಜೋಳದ ಸುಳಿಯೊಳಗೆ ಫ್ಯುರಡಾನ್‌ ಹರಳು ಹಾಕಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಮೆಕ್ಕೆಜೋಳಕ್ಕೆ ಕಾಣಿಸಿಕೊಂಡಿರುವ ಸೈನಿಕ ಹುಳು ನಿಯಂಯತ್ರಣಕ್ಕೆ ಪ್ರತಿ ಲೀಟರ್‌ ನೀರಿನಲ್ಲಿ 0.3ಗ್ರಾಂ ಇಮಾಮ್ಯಾಕ್ವಿನ್‌ ಬೆಂಜೋಯೇಟ್‌ ಬೆರಸಿ ಬೆಳೆಗೆ ಸಿಂಪಡಿಸಬೇಕು. ಅಥವಾ ಸುಳಿಯಲ್ಲಿ ಹಸಿ ಇದ್ದಾಗ ಪ್ರತಿ ಬೆಳೆಯ ಸುಳಿಗೆ 2-3 ಫ್ಯುರಡಾನ್‌ ಹರಳು ಹಾಕಬೇಕು. ಇದರಿಂದ ಕೀಟ ನಿಯಂತ್ರಣಕ್ಕೆ ಬರುತ್ತದೆ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

...............

ತಾಲೂಕಿನಲ್ಲಿನ ಮೆಕ್ಕೆಜೋಳಕ್ಕೆ ಫಾಲ್‌ ಆರ್ಮಿ ವರ್ಮ್‌ ಕೀಟ ಬಾಧೆ ಕಾಣಿಸಿದೆ. ಸುಳಿಯೊಳಗೆ ಕಾಣಿಸುವ ಕೀಟಗಳು ಬೆಳೆಯನ್ನು ಹಾಳು ಮಾಡುತ್ತವೆ. ಮಳೆ ಕೊರತೆಯಾಗಿರುವುದು, ಶೀತ ವಾತಾವರಣ ಇರುವುದು ಕೀಟ ಹುಟ್ಟಲು ಕಾರಣವಾಗುತ್ತದೆ. ಸಿಂಪರಣೆ ಹಾಗೂ ಹರಳು ಹಾಕುವ ಮೂಲಕ ಹುಳು ನಿಯಂತ್ರಣ ಮಾಡಬಹುದು.

-ಎನ್‌.ಎಸ್‌.ಪ್ರಕಾಶ, ಸಹಾಯಕ ಕೃಷಿ ನಿರ್ದೇಶಕರು, ಕೂಡ್ಲಿಗಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ