ಆ್ಯಪ್ನಗರ

ಅದಿರು ಲಾರಿಗಳ ಆಟಾಟೋಪ

ಗಣಿನಾಡಿನಲ್ಲಿ ಗಣಿಗಾರಿಕೆ ಕೊಂಚ ನಿಯಂತ್ರಣದಲ್ಲಿದ್ದರೂ, ಮಾಲಿನ್ಯ ಪ್ರಮಾಣ ತಗ್ಗಿಲ್ಲ. ಇಲ್ಲಿನ ರಸ್ತೆಯಲ್ಲಿ ದಟ್ಟವಾದ ಹೊಗೆಯುಗುಳುತ್ತಾ ಸಾಗುವ ಅದಿರು ಲಾರಿಗಳ ಹಿಂಡು ಇದಕ್ಕೆ ಸಾಕ್ಷಿಯಾಗಿದೆ.

ವಿಕ ಸುದ್ದಿಲೋಕ 5 Jul 2016, 9:00 am

ಸಂಡೂರು: ಗಣಿನಾಡಿನಲ್ಲಿ ಗಣಿಗಾರಿಕೆ ಕೊಂಚ ನಿಯಂತ್ರಣದಲ್ಲಿದ್ದರೂ, ಮಾಲಿನ್ಯ ಪ್ರಮಾಣ ತಗ್ಗಿಲ್ಲ. ಇಲ್ಲಿನ ರಸ್ತೆಯಲ್ಲಿ ದಟ್ಟವಾದ ಹೊಗೆಯುಗುಳುತ್ತಾ ಸಾಗುವ ಅದಿರು ಲಾರಿಗಳ ಹಿಂಡು ಇದಕ್ಕೆ ಸಾಕ್ಷಿಯಾಗಿದೆ.

ತಾಲೂಕಿನ ದೋಣಿಮಲೈ, ಸ್ವಾಮಿಮಲೈ, ರಾಮಗಢ, ಈಶಾನ್ಯವಲಯದ ಅರಣ್ಯದ ಗುಡ್ಡಗಳಲ್ಲಿನ ಗಣಿಗಳಿಂದ ಇ-ಟೆಂಡರ್‌ ಅದಿರು ಸಾಗಣೆ ಜೋರಾಗಿದೆ. ಇಲ್ಲಿನ ತೋರಣಗಲ್ಲು, ನರಸಿಂಗಪುರ, ಯಶವಂತನಗರ, ಹೊಸಪೇಟೆ ರಸ್ತೆಯಲ್ಲಿ ಪ್ರತಿನಿದಿನ 4 ಸಾವಿರಕ್ಕೂ ಹೆಚ್ಚು ಅದಿರು ಲಾರಿಗಳು ಸಂಚರಿಸುತ್ತವೆ. ಅದಿರು ಸಾಗಣೆಯ ಟ್ರಿಪ್‌ಗಳ ಭರದಲ್ಲಿ ಕೆಲ ಲಾರಿಗಳ ಮಾಲೀಕರು ಲಾರಿಗಳನ್ನು ಸುಸ್ಥಿತಿಯಲ್ಲಿಟ್ಟಿಲ್ಲ. ಅಬ್ಬರದಿಂದ ಓಡುವ ಅದಿರು ಲಾರಿಗಳು ಹೆಚ್ಚು ಹೊಗೆ (ಕಾರ್ಬನ್‌ ಮೊನಾಕ್ಸೈಡ್‌) ಉಗುಳುತ್ತಾ ಓಡುತ್ತಿದ್ದು, ಹಿಂಬದಿ ಬರುವ ವಾಹನಗಳಿಗೆ ದಾರಿ ಕಾಣದಷ್ಟು ದಟ್ಟತೆಯಿರುತ್ತದೆ. ವಾಹನಗಳಿಂದ ಹೊರಬರುವ ಕಾರ್ಬನ್‌ ಮೊನಾಕ್ಸೈಡ್‌ನ ಸೇವನೆಯಿಂದ ಉಸಿರಾಟ ಸಂಬಂಧಿ ಸಮಸ್ಯೆಗಳಾದ ಅಸ್ತಮಾ, ಪುಪ್ಪಸ ಕ್ಯಾನ್ಸರ್‌ ಸೇರಿ ನಾನಾ ರೋಗಳು ಬರುವ ಸಾಧ್ಯತೆ ಹೆಚ್ಚಿದೆ.

ಮಾನವನ ದೇಹ ಸೇರಿದ ಕಾರ್ಬನ್‌ ಮೊನಾಕ್ಸೈಡ್‌ ಕ್ರಮೇಣ ಜೀವ ಕೋಶಗಳನ್ನು ಕೊಲ್ಲುತ್ತದೆ. ಹೆಚ್ಚು ಹೊಗೆ ಸೂಸದಂತೆ ವಾಹನಗಳನ್ನು ಆಗಾಗ್ಗೆ ತಪಾಸಣೆ ಮಾಡಿಸಿ ದುರಸ್ತಿ ಮಾಡಬೇಕು ಎಂಬ ನಿಯಮ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು ಪ್ರಯಾಣಿಕರ ವಾಹನಗಳು, ಬೈಕ್‌ ಸವಾರರು ಹೊಗೆ ಕುಡಿದು ಕೆಮ್ಮುತ್ತಾ ಸಾಗುತ್ತಾರೆ. ಇನ್ನೂ ಕೆಲವರು ಲಾರಿಗಳ ಹೊಗೆಯಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹೋಗಿ ಬಿದ್ದು ಗಾಯಗೊಂಡಿದ್ದಾರೆ. ಲಾರಿಗಳಿಂದ ದಟ್ಟ ಹೊಗೆ ನಿಯಂತ್ರಣದ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಆರ್‌ಟಿಒ ಅಧಿಕಾರಿಗಳು ಪರಸ್ಪರ ಬೆರಳು ತೋರುತ್ತಾ ಕಾಲ ತಳ್ಳುತ್ತಿರುವುದು ಈ ಭಾಗದ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

--

Vijaya Karnataka Web mine lorries pose danger
ಅದಿರು ಲಾರಿಗಳ ಆಟಾಟೋಪ

ಲಾರಿಗಳು ದಟ್ಟ ಹೊಗೆಯುಗುಳುವ ಬಗ್ಗೆ ಆರ್‌ಟಿಒ ಇಲಾಖೆ ತಪಾಸಣೆ ನಡೆಸಬೇಕು. ಲಾರಿಗಳು ಉಗುಳುವ ದಟ್ಟಹೊಗೆ ಕುರಿತು ಕ್ರಮ ಕೈಗೊಳ್ಳಿ ಎಂದು ಆರ್‌ಟಿಒ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದೆ.

- ಗೋಪಾಕೃಷ್ಣ ಸಣತಂಗಿ, ಹಿರಿಯ ಪರಿಸರ ಅಧಿಕಾರಿ, ಬಳ್ಳಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ