ಆ್ಯಪ್ನಗರ

ಮಿನಿ ವಿಧಾನಸೌಧ, ಗರಿಗೆದರಿದ ಆಶಾಭಾವ

ಆಡಳಿತ ಹಾಗೂ ಸೇವೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ತಾಲೂಕು ಕೇಂದ್ರದಲ್ಲಿರುವ ಸರಕಾರದ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಅವಶ್ಯ ಇರುವ ಮಿನಿವಿಧಾನಸೌಧ ನಿರ್ಮಾಣಕ್ಕೆ ಕಾಲ ಕೂಡಿಬರುವ ಆಶಾಭಾವ ಚಿಗುರಿದೆ.

Vijaya Karnataka 22 Jun 2018, 5:00 am
ಹಿ.ಮ.ಬಸವರಾಜ, ಕೂಡ್ಲಿಗಿ
Vijaya Karnataka Web mini vidyasudha hopeful of hope
ಮಿನಿ ವಿಧಾನಸೌಧ, ಗರಿಗೆದರಿದ ಆಶಾಭಾವ


ಆಡಳಿತ ಹಾಗೂ ಸೇವೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ತಾಲೂಕು ಕೇಂದ್ರದಲ್ಲಿರುವ ಸರಕಾರದ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಅವಶ್ಯ ಇರುವ ಮಿನಿವಿಧಾನಸೌಧ ನಿರ್ಮಾಣಕ್ಕೆ ಕಾಲ ಕೂಡಿಬರುವ ಆಶಾಭಾವ ಚಿಗುರಿದೆ.

ಕ್ಷೇತ್ರದಿಂದ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿರುವ ಎನ್‌.ವೈ.ಗೋಪಾಲಕೃಷ್ಣ ಆರಂಭದಲ್ಲೇ ಈ ಬಗ್ಗೆ ಪ್ರಯತ್ನ ಮುಂದುವರಿಸಿದ್ದು, ನನೆಗುದಿಗೆ ಬಿದ್ದ ಕೆಲಸಕ್ಕೆ ಮೋಕ್ಷ ದೊರೆಯುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಬಹುತೇಕ ಕಚೇರಿಗಳು ಹಲವು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿವೆ. ಇದುವರೆಗೆ ಖಾಸಗಿಯವರಿಗೆ ಪಾವತಿಸಿದ ಬಾಡಿಗೆಯಲ್ಲೇ ಈಗಾಗಲೇ ಎಲ್ಲ ತಾಲೂಕು ಕಚೇರಿಗಳ ಕಟ್ಟಡ ನಿರ್ಮಿಸಬಹುದಿತ್ತೆಂಬ ಮಾತು ಕೇಳಿಬರುತ್ತಿವೆ. ನಾನಾ ಕಡೆಗಳಲ್ಲಿ ಮಿನಿವಿಧಾನಸೌಧ ನಿರ್ಮಾಣ ಕೆಲಸ ಪೂರ್ಣಗೊಂಡರೂ ಸ್ಥಳೀಯವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯದ್ದರಿಂದ ಸ್ಥಳೀಯರಲ್ಲಿ ನಿರಾಸೆ ಮೂಡಿತ್ತು.

ಸರಕಾರಕ್ಕೆ ಪತ್ರ: ಹಿಂದಿನ ಜನಪ್ರತಿನಿಧಿಗಳು ಪಟ್ಟಣದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಮಾಡಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು. 2015 ರಲ್ಲಿ ನಡೆದ ಈ ಪ್ರಯತ್ನಕ್ಕೆ ಸ್ಪಂದನೆ ವ್ಯಕ್ತವಾಗಲಿಲ್ಲ. ಹಿಂದಿನ ಎಲ್ಲ ಮಾಹಿತಿ, ವಿಳಂಬ ಗಮನಿಸಿದ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು, ಜೂ.2 ರಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರ ಆಧರಿಸಿ ಸರಕಾರ ಉತ್ತರ ನೀಡಿದೆ. ತಾಲೂಕು ಕೇಂದ್ರದಲ್ಲಿ ವಿಧಾನಸೌಧ ನಿರ್ಮಾಣಕ್ಕೆ ಅಂದಾಜಪಟ್ಟಿ ರೂಪಿಸಿ, ನಕ್ಷೆಯೊಂದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಧಾನ ಕಾರ್ಯದರ್ಶಿ ಡಿಸಿಗೆ ಪತ್ರ ಬರೆದಿದ್ದಾರೆ. ಎಂಜಿನಿಯರ್‌ ನೀಲನಕ್ಷೆ ತಯಾರಿಸಿದ್ದು, ಬಳಿಕ ಶಾಸಕರು ಸ್ಥಳ ಪರಿಶೀಲನೆ ಮುಗಿಸಿದ್ದಾರೆ. ಶೀಘ್ರ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೀಗಿದೆ ಸ್ಥಿತಿ: ಇಲ್ಲಿನ ತಹಸೀಲ್ದಾರ್‌ ಕಚೇರಿ ಕಟ್ಟಡವನ್ನು ಆಗಿನ ಬ್ರಿಟಿಷ್‌ ಸರಕಾರ ನಿರ್ಮಾಣ ಮಾಡಿದೆ. ಅಂದಾಜು ನೂರಾರು ವರ್ಷದ ಹಳೆ ಕಟ್ಟಡ ಇದಾಗಿದ್ದು, ಮಳೆ ಬಂದರೆ, ಎಲ್ಲೆಂದರಲ್ಲಿ ನೀರು ಸೋರುತ್ತಿದೆ. ಕಚೇರಿಗೆ ಗಾಳಿ ಬೆಳಕು ಕೂಡ ಅಷ್ಟಕಷ್ಟೆ. ಅನೇಕ ಸಲ ಮಳೆಗಾಲದಲ್ಲಿ ಕಚೇರಿ ಸೋರಿಕೆಯಾಗಿ ಕೆಲ ದಾಖಲೆ ತೋಯ್ದ ನಿದರ್ಶನಗಳಿವೆ. ವಿದ್ಯುತ್‌ ವ್ಯತ್ಯಯವಾದಾಗ ಸೆಖೆಯಲ್ಲಿ ಕೆಲಸ ಮಾಡಬೇಕಾಗಿತ್ತು.

ಬಾಡಿಗೆಯೇ ಭಾರ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಸಣ್ಣ ನೀರಾವರಿ ಇಲಾಖೆ ಕಚೇರಿ, ಮೀನುಗಾರಿಕೆ ಇಲಾಖೆ ಕಚೇರಿ, ರೇಷ್ಮೆ ಇಲಾಖೆ ಕಚೇರಿ, ಕೃಷಿ ಇಲಾಖೆ ಕಚೇರಿ, ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿ ಇತರ ಇಲಾಖೆ ಕಚೇರಿಗಳು ಮಾಸಿಕ 5000 ರೂ.ಗೂ ಹೆಚ್ಚು ಬಾಡಿಗೆ ಭರಿಸುತ್ತಿವೆ. ಖಾಸಗಿಯಾಗಿ ಬಾಡಿಗೆ ನೀಡಲು ವಾರ್ಷಿಕ ಲಕ್ಷಾಂತರ ರೂ.ವ್ಯಯವಾಗುತ್ತಿದೆ. ಇದರಿಂದ, ಬೊಕ್ಕಸಕ್ಕೂ ಹೊರೆಯಾಗುತ್ತಿದೆ. ಸ್ವಂತ ಕಟ್ಟಡಗಳನ್ನು ಹೊಂದಿರುವ ಬಿಇಒ, ಸಮಾಜ ಕಲ್ಯಾಣ, ತಾಲೂಕು ಪಂಚಾಯಿತಿ ಕಚೇರಿ, ಕೃಷಿ, ತೋಟಗಾರಿಕೆ, ತೋಟಗಾರಿಕೆ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್‌ ಸೇರಿದಂತೆ ಇತರ ಇಲಾಖೆಗಳು ದಿಕ್ಕಿಗೊಂದರಂತೆ ಇರುವುದರಿಂದ ಜನ ಅಲೆದಾಡಬೇಕಿದೆ. ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯಲಾಗದೇ ಸಂಕಷ್ಟ ಎದುರಿಸುವಂತಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ