ಆ್ಯಪ್ನಗರ

‘ಮಹಿಳಾ ಸಾಧಕರಿಗೆ ಯಾರೂ ಸಾಟಿಯಿಲ್ಲ’

ವಿಶ್ವದ ಮಹಾನ್‌ ಸಾಧಕರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಹಾಗಾಗಿ ಹೆಣ್ಣು ಎಂದರೆ ಕೀಳರಿಮೆ ಬೇಡ. ಪೂಜ್ಯನೀಯ ಭಾವನೆಯಿಂದ ಕಾಣುವ ಮೂಲಕ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಬಿ.ಹಂದ್ರಾಳ್‌ ಹೇಳಿದರು.

Vijaya Karnataka 13 Oct 2018, 5:00 am
ಬಳ್ಳಾರಿ : ವಿಶ್ವದ ಮಹಾನ್‌ ಸಾಧಕರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಹಾಗಾಗಿ ಹೆಣ್ಣು ಎಂದರೆ ಕೀಳರಿಮೆ ಬೇಡ. ಪೂಜ್ಯನೀಯ ಭಾವನೆಯಿಂದ ಕಾಣುವ ಮೂಲಕ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಬಿ.ಹಂದ್ರಾಳ್‌ ಹೇಳಿದರು.
Vijaya Karnataka Web BLR-BLY 11 MANJU 02


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯುನಿಸೆಫ್‌ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸವಾಲುಗಳನ್ನು ಗುರುತಿಸುವ ಮತ್ತು ನಿವಾರಿಸುವ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಪುರುಷನ ಸಕಲ ಅಭಿವೃದ್ಧಿಗೆ ಕಾರಣಳಾದ ಹೆಣ್ಣನ್ನು ಗೌರವಿಸಿದರೆ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂಬ ನಮ್ಮ ಹಿರಿಯರ ಮಾತು ಅಕ್ಷರಶಃ ಸತ್ಯ. ಇಂತಹ ಹೆಣ್ಣು ಮಕ್ಕಳ ಅಭಿವೃದ್ಧಿಯನ್ನು ಚಿವುಟಿ ಹಾಕದೇ ಪ್ರೋತ್ಸಾಹಿಸಿ ಬೆಳೆಸಬೇಕು. ಇಂದಿಗೂ ಕುಟುಂಬದಲ್ಲಿ ಹೆಣ್ಣು, ಗಂಡು ಎನ್ನುವ ಲಿಂಗ ತಾರತಮ್ಯ ಉಳಿದಿದೆ. ಗಂಡುಮಕ್ಕಳಿಗೆ ಉತ್ತಮ ಶಿಕ್ಷ ಣ ಕೊಡಿಸಲು ತೋರುವ ಆಸಕ್ತಿ ಹೆಣ್ಣುಮಕ್ಕಳಿಗೆ ತೋರುವುದಿಲ್ಲ. ಬಾಲ್ಯವಿವಾಹ, ವರದಕ್ಷಿಣೆ, ಹಿಂಸೆ, ಲೈಂಗಿಕ ಕಿರುಕುಳ ಇವೆಲ್ಲವಕ್ಕೂ ಕಡಿವಾಣ ಹಾಕಲು ಸರಕಾರ ಪ್ರಬಲ ಕಾನೂನು ಜಾರಿಗೆ ತಂದಿದೆ. ಮಹಿಳೆಯರು ಕಾನೂನಿನ ನೆರವು ಅಗತ್ಯವಿದ್ದಲ್ಲಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಉಚಿತ ನೆರವು ಪಡೆಯಬಹುದಾಗಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗೇಶ್‌ ಬಿಲ್ವ ಮಾತನಾಡಿ, ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಡುತ್ತಿದೆ. ಎಲ್ಲ ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಮಕ್ಕಳು ಸೇರಿ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ನೀಡುವ ಮೂಲಕ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಯುನಿಸೆಫ್‌ ರಾಜ್ಯ ಸಂಯೋಜಕ ಅಬೀದ್‌ ಅಹ್ಮದ್‌ ಮಾತನಾಡಿದರು. ನ್ಯಾಯಾಧೀಶ ಗಂಗಾಧರ್‌, ನಾಗೇಶ್‌, ವೈದ್ಯರಾದ ಡಾ.ಶಿವರಾಜ ಹೆಡೆ, ಡಾ.ಎಂ.ಎಸ್‌.ತಾರಾ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ