ಆ್ಯಪ್ನಗರ

ನರೇಗಾ ಕೆಲಸ ನೀಡಲು ಸೂಚನೆ

ಮಳೆಯಿಲ್ಲದೇ ಬರ ಆವರಿಸಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲು ಸೂಚನೆ, ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಮಿತಿ ಕ್ರೇಂದ್ರಕ್ಕೆ ತಾಕೀತು, ಶುದ್ಧ ಕುಡಿವ ನೀರಿನ ಘಟಕಗಳಿಗೆ ವಿದ್ಯುತ್‌ ಕಡಿತ ಮಾಡದಂತೆ ಜೆಸ್ಕಾಂಗೆ ಎಚ್ಚರಿಕೆ.

Vijaya Karnataka 7 Sep 2018, 5:00 am
ಸಂಡೂರು : ಮಳೆಯಿಲ್ಲದೇ ಬರ ಆವರಿಸಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲು ಸೂಚನೆ, ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಮಿತಿ ಕ್ರೇಂದ್ರಕ್ಕೆ ತಾಕೀತು, ಶುದ್ಧ ಕುಡಿವ ನೀರಿನ ಘಟಕಗಳಿಗೆ ವಿದ್ಯುತ್‌ ಕಡಿತ ಮಾಡದಂತೆ ಜೆಸ್ಕಾಂಗೆ ಎಚ್ಚರಿಕೆ.
Vijaya Karnataka Web BLR-BLY 6 SDR 1


ಇವು ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಫರ್ಜಾನಾ ಗೌಸ್‌ ಆಜಂ, ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರಾನಾಯ್ಕ ನೇತೃತ್ವದಲ್ಲಿ ಗುರುವಾರ ಜರುಗಿದ ತಿಂಗಳ ಪ್ರಗತಿ ಪರಿಶೀಲನೆ ಸಭೆಯ ಮುಖ್ಯಾಂಶಗಳು.

ತಾ.ಪಂ.ಪ್ರಭಾರಿ ಇಒ ಎಂ.ಬಸವರಾಜ ಮಾತನಾಡಿ, ಅಗತ್ಯ ಮುಂಗಾರು ಮಳೆಯಾಗದ ಕಾರಣ ರಾಜ್ಯದ 16 ಜಿಲ್ಲೆಗಳನ್ನು ಸರಕಾರ ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ. ಬರ ಪೀಡಿತ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಲ್ಲದೇ ಜನ ಗುಳೆ ಹೋಗುವ ಸಾಧ್ಯತೆಯಿದ್ದು, ನರೇಗಾ ಕಾಮಗಾರಿಗಳನ್ನು ಜನರಿಗೆ ಕೊಡುವ ಮೂಲಕ ಗುಳೆ ಹೋಗುವ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ತಾಲೂಕಿನ 26 ಗ್ರಾ.ಪಂ.ಗಳ ಜತೆಗೆ ಕೃಷಿ ಇಲಾಖೆಯಿಂದ ಕೃಷಿಹೊಂಡ, ಕ್ಷೇತ್ರ ಬದು ನಿರ್ಮಾಣ, ತೋಟಗಾರಿಕೆ ಇಲಾಖೆಯಡಿ ನಾನಾ ಕಾಮಗಾರಿ, ಅರಣ್ಯ ಇಲಾಖೆಯಿಂದ ರಸ್ತೆ ಬದಿ ಸಸಿ ನೆಡುವುದು ಸೇರಿ ನಾನಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಮುದಾಯದ ಆಸ್ತಿಯನ್ನಾಗಿ ಮಾಡುವ ಕೆರೆ ಹೂಳೆತ್ತುವುದು, ಶಾಲೆ ಮೈದಾನ ಅಭಿವೃದ್ಧಿ, ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಕುರಿ ಹಟ್ಟಿ, ಕೋಳಿ ಶೆಡ್‌ ನಿರ್ಮಾಣಕ್ಕೆ ಸರಕಾರ ಅನುದಾನ ನೀಡುತ್ತದೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ಮಾಡಿ ಎಂದು ಸೂಚಿಸಿದರು.

ಆದೇಶ: ತಾ.ಪಂ.ಅಧ್ಯಕ್ಷೆ ಮಾತನಾಡಿ, ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ಕೃಷ್ಣಾನಗರದ ಬಿಸಿಎಂ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವಸತಿ ನಿಲಯ, ಚೋರನೂರು ವಾಲ್ಮೀಕಿ ಭವನ, ಯರಯ್ಯನಹಳ್ಳಿಯ ಗ್ರಾ.ಪಂ.ಕಟ್ಟಡ ಸೇರಿ ಒಟ್ಟಾರೆ 17 ಕಾಮಗಾರಿಗಳು ಅರೆ ಬರೆಯಾಗಿವೆ. ಅನುದಾನವಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದಾರೆ. ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ ಎಂದು ನಿರ್ಮಿತಿ ಕೇಂದ್ರದ ಜೆಇ ಪ್ರಶಾಂತ್‌ಗೆ ಆದೇಶಿಸಿದರು. ಪ್ರತಿಕ್ರಿಯಿಸಿದ ಜೆಇ, ವಾರದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಇಒ ಮಾತನಾಡಿ, ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ, ಯರಯ್ಯನಹಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ ಶುದ್ಧ ಕುಡಿವ ನೀರಿನ ಘಟಕಗಳ ವಿದ್ಯುತ್‌ ಸಂಪರ್ಕ ಕಡಿತಮಾಡಿದ್ದಾರೆ ಎಂಬ ದೂರಿದೆ. ಬಿಲ್‌ ಪಾವತಿ ಮಾಡಲಿಲ್ಲ ಎಂಬ ಏಕೈಕ ಕಾರಣಕ್ಕೆ ಶುದ್ಧ ಕುಡಿವ ನೀರಿನ ಘಟಕಗಳ ಸಂಪರ್ಕ ಕಡಿತ ಮಾಡಕೂಡದು ಎಂದು ಜೆಸ್ಕಾಂ ಎಇಇ ಗೋಪಾಲ್‌ಗೆ ಎಚ್ಚರಿಕೆ ನೀಡಿದರು.

ಸಹಾಯ ಧನ: ಪಶು ಸಂಗೋಪನೆ ಇಲಾಖೆ ಎಡಿ ವಲಿಬಾಷಾ ಮಾತನಾಡಿ, ಪಶು ಭಾಗ್ಯ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರಕಾರ ಸೂಚಿಸಿದ್ದು, ಆಸಕ್ತ ಅರ್ಹ ರೈತರು ಸೂಕ್ತ ದಾಖಲೆಗಳೊಂದಿಗೆ ಇಲಾಖೆಗೆ ಅರ್ಜಿಸಲ್ಲಿಕೆ ಮಾಡಬಹುದು ಎಂದರು.

ತೋಟಗಾರಿಕೆ ಇಲಾಖೆ ಎಡಿ ಜೆ.ಶಂಕರ್‌ ಮಾತನಾಡಿ, ತೋಟಗಾರಿಕೆ ಇಲಾಖೆಯ 2018-19 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ನೆರಳು ಪರದೆ, ಪಾಲಿಹೌಸ್‌ ಘಟಕ ನಿರ್ಮಾಣಕ್ಕಾಗಿ ಎಸ್ಸಿ, ಎಸ್ಟಿ ಜನಾಂಗದ ರೈತರಿಗೆ ಶೇ.90 ರಷ್ಟು, ಇತರರಿಗೆ ಶೇ.50 ರಷ್ಟು ಸಹಾಯ ಧನ ಲಭ್ಯವಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಈರುಳ್ಳಿ ಶೇಖರಣೆ ಘಟಕ, ಹೊಸ ಪ್ರದೇಶ ವಿಸ್ತರಣೆ, ಕಾರ್ಯಕ್ರಮದಡಿ ಬಾಳೆ, ಪಪ್ಪಾಯ, ದಾಳಿಂಬೆ, ನಾನಾ ಹೂವಿನ ಬೆಳೆಗಳು ಹಾಗೂ ಸಮಗ್ರ ಪೋಷಕಾಂಶ, ಕೀಟ ನಿರ್ವಹಣೆ, 20 ಎಚ್‌.ಪಿ. ಒಳಗಿನ ಟ್ರ್ಯಾಕ್ಟರ್‌ ಸಹಾಯ ಧನ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಿನ ಟ್ಯಾಂಕ್‌, ಜೇನು ಸಾಕಣೆ, ಗೇರು ಬೆಳೆ, ಕೃಷಿ ಹೊಂಡ ನಿರ್ಮಾಣಕ್ಕೆ ಎಲ್ಲ ಜನಾಂಗದವರಿಗೆ ಶೇ.50 ರಷ್ಟು ಸಹಾಯ ಧನವಿದೆ ಎಂದರು.

ನಿರ್ಧಾರ:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಎಲ್ಲ ಜನಾಂಗದವರಿಗೆ ಶೇ.90 ರಷ್ಟು ಸಹಾಯ ಧನ ಲಭ್ಯವಿದ್ದು ಆಸಕ್ತ ರೈತರು ಸೆ.30 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಸಭೆಗೆ ತಿಳಿಸಿದರು.

ನರೇಗಾ ಕೆಲಸ ನಿರ್ವಹಿಸುವ 8,500 ಕಾರ್ಮಿಕರಿಗೆ ಈಗಾಗಲೇ ಸ್ಮಾರ್ಟ್‌ ಕಾರ್ಡ್‌ಗಳನ್ನು ಕಾರ್ಮಿಕ ಇಲಾಖೆಯಿಂದ ವಿತರಿಸಲಾಗಿದೆ. ಬಾಕಿ ಉಳಿದ 5 ಸಾವಿರ ಕಾರ್ಡ್‌ಗಳನ್ನು ಕೂಡಲೆ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಕಾರ್ಮಿಕ ನಿರೀಕ್ಷ ಕ ದಿವಾಕರ್‌ಗೆ ಸಭೆ ಸೂಚಿಸಿತು. 2018-19 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ತಾ.ಪಂ.ನ 3 ಸಾಮಾನ್ಯ ಸಭೆ ಮತ್ತು 4 ಕೆಡಿಪಿ ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುವ ಮೂಲಕ ಸಭೆಗೆ ಅಗೌರವ ತೋರಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದವರಿಗೆ ನೋಟಿಸ್‌ ಜಾರಿ ಮಾಡಲು ಸಭೆ ನಿರ್ಧರಿಸಿತು.

ತಾ.ಪಂ.ವ್ಯವಸ್ಥಾಪಕ ಶೇಖರಪ್ಪ ಮಡಿವಾಳರ, ಯೋಜನಾಧಿಕಾರಿ ಲೋಕೇಶಬಾಬು, ಸಹಾಯಕ ಲೆಕ್ಕಾಧಿಕಾರಿ ಬಸವರಾಜ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ