ಆ್ಯಪ್ನಗರ

ರೈಲ್ವೆ ಗೇಟ್‌ಗಳ ಮುಂದೆ ಪ್ರಯಾಣಿಕರ ವಾಹನಗಳ ಕಾಯುವ ಕಾಯಕ

ಅನುದಾನವಿದ್ದರೂ ಅನಾದರ, ಹಳೆ ಬೆಲೆಗೆ ಭೂಮಿ ಕೊಡಲು ಸಿದ್ಧರಿಲ್ಲದ ರೈತ ಸಮೂಹ, ದಶಕದ ಕನಸಿಗೆ ಕೊಕ್ಕೆ, ನಿತ್ಯ 6 ರೈಲ್ವೆ ಗೇಟ್‌ ಕಾದು ಸುಸ್ತಾಗುವ ಜನ. ಇವು ತಾಲೂಕಿನ ತೋರಣಗಲ್ಲು ಬೈಪಾಸ್‌ ರಸ್ತೆ ಕಾಮಗಾರಿಗೆ ಅಂಟಿದ ಶಾಪಗಳು.

Vijaya Karnataka 17 Oct 2018, 5:00 am
ಪಿ.ವೀರೇಂದ್ರಗೌಡ, ಸಂಡೂರು
Vijaya Karnataka Web BLR-BLY 16 SDR 1


ಅನುದಾನವಿದ್ದರೂ ಅನಾದರ, ಹಳೆ ಬೆಲೆಗೆ ಭೂಮಿ ಕೊಡಲು ಸಿದ್ಧರಿಲ್ಲದ ರೈತ ಸಮೂಹ, ದಶಕದ ಕನಸಿಗೆ ಕೊಕ್ಕೆ, ನಿತ್ಯ 6 ರೈಲ್ವೆ ಗೇಟ್‌ ಕಾದು ಸುಸ್ತಾಗುವ ಜನ. ಇವು ತಾಲೂಕಿನ ತೋರಣಗಲ್ಲು ಬೈಪಾಸ್‌ ರಸ್ತೆ ಕಾಮಗಾರಿಗೆ ಅಂಟಿದ ಶಾಪಗಳು.

ತಾಲೂಕಿನ ಕುಗ್ರಾಮದಂತಿದ್ದ ತೋರಣಗಲ್ಲುನಲ್ಲಿ 2 ದಶಕಗಳಿಂದ ಜಿಂದಾಲ್‌ ಕಾರ್ಖಾನೆ ಸೇರಿ ನಾನಾ ಕಾರ್ಖಾನೆಗಳು ಸ್ಥಾಪಿತವಾಗಿ ಬೃಹತ್‌ ಕೈಗಾರಿಕೆ ಪ್ರದೇಶವಾಗಿ ಮಾರ್ಪಟ್ಟಿದೆ. ವಲಸಿಗರ ಸಂಖ್ಯೆ ಹೆಚ್ಚಿದ್ದು ಸದಾ ಗಿಜಿಗುಡುವ ಪ್ರದೇಶವಾಗಿದೆ.

ನಿತ್ಯ ತೋರಣಗಲ್ಲು ಮಾರ್ಗವಾಗಿ ಸಂಡೂರು ಸೇರಿ ನಾನಾ ಪಟ್ಟಣ ಮತ್ತು ಗ್ರಾಮಗಳಿಗೆ ರಾಜ್ಯ ಹೆದ್ದಾರಿ 40 ಸಂಪರ್ಕ ಕಲ್ಪಿಸುತ್ತದೆ. ಕಾರ್ಖಾನೆಗಳಿಗೆ ಕಬ್ಬಿಣ, ಮ್ಯಾಂಗನೀಸ್‌ ಸೇರಿ ಕಚ್ಚಾ ವಸ್ತುಗಳ ಪೂರೈಕೆ, ಕಬ್ಬಿಣದ ಸರಳು, ತಗಡಿನ ಶೀಟ್‌ ಸೇರಿ ಸಿದ್ಧ ವಸ್ತುಗಳ ಸಾಗಣೆ ಸೇರಿ ನಾನಾ ಕಾರಣಗಳಿಗಾಗಿ ಈ ಮಾರ್ಗದಲ್ಲಿ ಬೃಹತ್‌ ಲಾರಿಗಳು ಇರುವೆ ಸಾಲಿನಂತೆ ಮುತ್ತಿಕೊಂಡಿರುತ್ತವೆ.

ಅರ್ಧಗಂಟೆಗೊಮ್ಮೆ ರೈಲು ಸಂಚಾರ; ತಾಲೂಕಿನ ಬನ್ನಿಹಟ್ಟಿ ಖನಿಜ ತನಿಖಾ ಠಾಣೆಯಿಂದ ತೋರಣಗಲ್ಲುವರೆಗಿನ 6.40 ಕಿ.ಮೀ. ರಸ್ತೆಯಲ್ಲಿ 6 ಕ್ಕೂ ಹೆಚ್ಚು ರೈಲ್ವೆ ಲೈನ್‌ಗಳು ಹಾದು ಹೋಗುತ್ತವೆ. ಜಿಂದಾಲ್‌ ಕಾರ್ಖಾನೆಯ ಕಚ್ಚಾ ವಸ್ತುಗಳು ಮತ್ತು ಸಿದ್ಧವಸ್ತುಗಳು ರೈಲ್ವೆ ಗೂಡ್ಸ್‌ ಬೋಗಿಗಳಲ್ಲಿ ಸಾಗಣೆಯಾಗುತ್ತವೆ. ಪ್ರತಿ ಅರ್ಧಗಂಟೆಗೂ ಕಡಿಮೆ ಅವಧಿಯಲ್ಲಿ ರೈಲುಗಳು ಸಂಚರಿಸುವುದರಿಂದ ಮಾರ್ಗದ ರಸ್ತೆಗೆ ಗೇಟ್‌ಗಳನ್ನು ಹಾಕಲಾಗುತ್ತದೆ. ಪ್ರತಿಬಾರಿ ಗೇಟ್‌ ಹಾಕಿದಾಗಲೂ ಕನಿಷ್ಠ 10-15 ನಿಮಿಷ ಕಾಯಬೇಕಾಗುತ್ತದೆ. ಗರ್ಭಿಣಿಯರನ್ನು ಹೆರಿಗೆಗಾಗಿ, ರೋಗಿಗಳನ್ನು, ಅಪಘಾತದಲ್ಲಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್‌ ಸೇರಿ ನಾನಾ ಆಸ್ಪತ್ರೆಗಳಿಗೆ ಸಾಗಣೆ ಮಾಡುವ ಆಂಬ್ಯುಲೆನ್ಸ್‌, ಸರಕಾರಿ ಬಸ್‌ ಸೇರಿ ಪ್ರಯಾಣಿಕರ ವಾಹನಗಳು, ಲಾರಿಗಳು ಕಾದು ನಿಲ್ಲುತ್ತವೆ. ನಿಗದಿತ ಸಮಯಕ್ಕೆ ಸ್ಥಳ ತಲುಪಲಾಗದೇ ಒದ್ದಾಡುತ್ತವೆ. ರೈಲ್ವೆ ಗೇಟ್‌ ಹಾಕಿದ ಪರಿಣಾಮ ಆಂಬ್ಯುಲೆನ್ಸ್‌ನಲ್ಲಿದ್ದ ಹೃದಯರೋಗಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟ ಉದಾಹರಣೆಗಳೂ ಸಾಕಷ್ಟಿವೆ.

30 ರೈತರ ಜಮೀನು ಸ್ವಾಧೀನ: ಇದೇ ಕಾರಣಕ್ಕೆ ರೈಲ್ವೆ ಲೈನ್‌ಗಳ ಹೊರಗೆ ಬೈಪಾಸ್‌ ರಸ್ತೆ ನಿರ್ಮಾಣಕ್ಕಾಗಿ ಸರಕಾರ 2000 ನೇ ಇಸ್ವಿಯಲ್ಲಿ ಇಲ್ಲಿನ 30 ಕ್ಕೂ ಹೆಚ್ಚು ರೈತರ ಜಮೀನನ್ನು ಭೂ ಸ್ವಾಧೀನಕ್ಕೊಳಪಡಿಸಿತ್ತು. ಅನುದಾನವಿಲ್ಲದ ಕಾರಣಕ್ಕೆ ಕಾಮಗಾರಿ ಶುರು ಮಾಡಿರಲಿಲ್ಲ. ಜಮೀನಿನಲ್ಲಿನ ರೈತರನ್ನು ಹೊರಗೆ ಹಾಕಿರಲಿಲ್ಲ. ಭೂ ಸ್ವಾಧೀನಕ್ಕೊಳಪಟ್ಟ ಜಮೀನಿನ ಮಾಲೀಕರಾದ 15 ಕ್ಕೂ ಹೆಚ್ಚು ರೈತರು 2000 ನೇ ಇಸ್ವಿಯಲ್ಲಿ ನಿಗದಿ ಮಾಡಿದ ಭೂಮಿಯ ಬೆಲೆಗೂ ಜಿಂದಾಲ್‌ ಕಾರ್ಖಾನೆ ಸ್ಥಾಪನೆ ನಂತರ ತೋರಣಗಲ್ಲು, ವಡ್ಡು, ತಾಳೂರು ಭಾಗದಲ್ಲಿನ ಭೂಮಿಯ ಬೆಲೆಗೂ ಸಾಕಷ್ಟು ಅಂತರವಿದೆ. ಈ ಭಾಗದಲ್ಲಿ ಪ್ರತಿ ಎಕರೆ ಜಮೀನು ಕೊಟಿ ಲೆಕ್ಕದಲ್ಲಿ ಮಾರಾಟವಾಗುತ್ತಿರುವುದು ರೈತರಲ್ಲಿ ಆಸೆ ಹುಟ್ಟಿಸಲು ಕಾರಣವಾಗಿದೆ.

ಅನುದಾನ ಲಭ್ಯ: ಕರ್ನಾಟಕ ರೋಡ್‌ ಡೆವಲಪ್‌ಮೆಂಟ್‌ ಕಾಪೊರ್‍ರೇಶನ್‌ ಲಿ. (ಕೆಆರ್‌ಡಿಸಿಎಲ್‌) 6.4 ಕಿ.ಮೀ. ಬೈಪಾಸ್‌ ನಿರ್ಮಾಣಕ್ಕಾಗಿ 33 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಕಾಮಗಾರಿಯನ್ನು ಕೇರಳ ಮೂಲಕ ಕೆಬಿಜೆ ಕನ್ಸ್‌ಟ್ರಕ್ಷ ನ್ಸ್‌ ಬೆಂಗಳೂರು ಎಂಬ ಹೆಸರಿನ ಕಂಪನಿ ಟೆಂಡರ್‌ ಪಡೆದಿದೆ. 9 ತಿಂಗಳ ಅವಧಿಯ ಕಾಮಗಾರಿ ಕಾರ್ಯಾದೇಶ ಪಡೆದು 6 ತಿಂಗಳಾದರೂ ಕೇವಲ 3 ಕಿ.ಮೀ. ಮಾತ್ರ ಲೆವೆಲ್‌ ಮಾಡಿ ಗ್ರಾವಲ್‌ ಹಾಕಲಾಗಿದೆ. ಉಳಿದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಭೂ ಸ್ವಾಧೀನ ಪಡಿಸಿಕೊಂಡು 18 ವರ್ಷಗಳ ಕಾಲ ಅನುದಾನವಿಲ್ಲ ಎಂಬ ಕಾರಣಕ್ಕೆ ಪ್ರಾರಂಭಿಸದ ಕಾಮಗಾರಿಗೆ ಇದೀಗ ಅನುದಾನ ಲಭ್ಯವಿದ್ದರೂ ಪೂರ್ಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ನಿತ್ಯ ರೈಲ್ವೆ ಕ್ರಾಸಿಂಗ್‌ನಲ್ಲಿ ಪ್ರಯಾಣಿಕರ ವಾಹನಗಳು ಸಾಲಗಟ್ಟಿನಿಂತು ರೈಲು ಹೋದ ನಂತರ ಚಲಿಸುವ ಅನಿವಾರ್ಯತೆಗೆ ಬಿದ್ದಿವೆ.

..............

ಬನ್ನಿಹಟ್ಟಿ - ತೋರಣಗಲ್ಲು ಬೈಪಾಸ್‌ ರಸ್ತೆ ಕಾಮಗಾರಿಗೆ 33 ಕೋಟಿ ರೂ. ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. 6 ತಿಂಗಳ ಹಿಂದೆ ಕಾರ್ಯಾದೇಶ ನೀಡಲಾಗಿದೆ. ಭೂ ಸ್ವಾಧೀನಕ್ಕೊಳಗಾದ ಜಮೀನಿನ 15 ರೈತರು 2000ನೇ ಇಸ್ವಿಯಲ್ಲಿ ನಿಗದಿ ಪಡಿಸಿದ ಬೆಲೆಗೆ ಜಮೀನು ನೀಡಲು ಸಿದ್ಧರಿಲ್ಲ. ಈಬಗ್ಗೆ ಅ.15 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದರೂ ರೈತರು ಹಳೆ ಬೆಲೆಗೆ ಭೂಮಿ ನೀಡಲು ಒಪ್ಪಿಲ್ಲದಿರುವುದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ.

- ಹಾಲೇಶಪ್ಪ, ಎಇ, ಕೆಆರ್‌ಡಿಸಿಎಲ್‌, ಹೊಸಪೇಟೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ