ಬಳ್ಳಾರಿ; ಸಾಮಾನ್ಯ ಜನರ, ರೈತರ, ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಬದ್ಧರಾಗಬೇಕು. ಮಾನವ ಹಕ್ಕುಗಳ ರಕ್ಷ ಣೆಗಾಗಿ ಆಂದೋಲನ ಮಾಡಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ತಿಳಿಸಿದರು.
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಯುಜಿಸಿ ಪ್ರಾಯೋಜಕತ್ವದಡಿ ಭಾರತದಲ್ಲಿ ಮಾನವ ಹಕ್ಕುಗಳು: ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುವ ವಸ್ತುಗಳನ್ನು ಮಾರಾಟಮಾಡುವುದು ಕಷ್ಟಕರವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಶೋಷಣೆಯಿಂದ ನಿಜವಾದ ಉತ್ಪಾದಕರಿಗೆ ದೊರೆಯಬೇಕಿದ್ದ ಬೆಲೆ ಸಿಗುತ್ತಿಲ್ಲ. ಇದರಿಂದ ಗ್ರಾಮೀಣ ಮಹಿಳೆಯರ, ರೈತರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ರಕ್ಷ ಣೆಗೆ ಮುಂದಾಗಬೇಕು ಎಂದು ಹೇಳಿದರು. ಬೆಂಗಳೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಮೀನಾಕುಮಾರಿ ದೇಶಪಾಂಡೆ ಮಾತನಾಡಿ, ಮಾನವ ಹಕ್ಕುಗಳ ಪರಿಕಲ್ಪನೆ, ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಘೋಷಣೆ, 1948ರ ನಂತರ ಪ್ರಪಂಚದಲ್ಲಿ ಸ್ವತಂತ್ರ ಶೈಕ್ಷ ಣಿಕ ವಿಷಯವಾಗಿ ಬೆಳವಣಿಗೆಯಾಗಿದೆ. ವ್ಯಕ್ತಿ ಮತ್ತು ರಾಜ್ಯದ ಅಧಿಕಾರದ ನಡುವೆ ಸಂಘರ್ಷದಿಂದ ಮಾನವ ಹಕ್ಕುಗಳ ಉಲ್ಲಂಘನೆ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದರು. ರುಕ್ಮಿಣಮ್ಮ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ. ಗಂಗಣ್ಣ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ಯು.ಅಬ್ದುಲ್ ಮುತಾಲಿಬ್ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶ್ರೀನಿವಾಸಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಟಿ.ವೀರಭದ್ರಪ್ಪ, ಸಿ. ಕಾವಲ್ಲಯ್ಯ, ಡಾ.ಬಿ. ಸರೋಜಾ ಇತರರಿದ್ದರು. ಸಮ್ಮೇಳನದ ನಾನಾ ಗೋಷ್ಠಿಗಳಲ್ಲಿ 40ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಾಯಿತು.