ಬಳ್ಳಾರಿ: ರಾಜ್ಯದಲ್ಲಿ ಪ್ರಕಟವಾಗಿರುವ ಪಿಯು ಫಲಿತಾಂಶದ ಪೈಕಿ ಕಲಾವಿಭಾಗದಲ್ಲಿ ರಾಜ್ಯದ ಟಾಪ್ 10 ಪೈಕಿ ಜಿಲ್ಲೆಯವರೇ 6 ವಿದ್ಯಾರ್ಥಿಗಳಿರುವುದು ಹೆಮ್ಮೆ ಎನಿಸಿದ್ದರೆ, ಕಳೆದ ವರ್ಷದಂತೆ ಈ ಬಾರಿಯೇ ಯಥಾ 20 ನೇ ಸ್ಥಾನವನ್ನು ಜಿಲ್ಲೆ ಉಳಿಸಿಕೊಂಡಿದೆ.
ಕೊಟ್ಟೂರಿನ ಇಂದು ಪಿಯುಸಿ ಕಾಲೇಜಿನ ಕಲಾವಿಭಾಗದಲ್ಲಿ ಚೈತ್ರಾ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಅದೇ ಕಾಲೇಜಿನ ಹಾದಿಮನಿ ಕವಿತಾ 582, ಕಾಂಕ್ರಿ ಚೆನ್ನಕೇಶವ 579, ದೇವರಾಜ್ 579, ಶಾರದಾ.ಎ. 577 ಮತ್ತು ಕರಿಗೌಡ ಸುರೇಶ್ 577 ಅಂಕ ಪಡೆದು ಕಲಾವಿಭಾಗದಲ್ಲಿ ಟಾಪ್ 10 ರೊಳಗೆ ಸ್ಥಾನ ಗಿಟ್ಟಿಸಿದ್ದಾರೆ. ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ವಿಷಯದಲ್ಲಿ ಸ್ಥಾನ ಭದ್ರಪಡಿಸಿಕೊಂಡು 'ಹ್ಯಾಟ್ರಿಕ್'ಬಾರಿಸಿದ್ದಾರೆ.
ಶೇ.3.96ರಷ್ಟು ಫಲಿತಾಂಶ: ರಾಜ್ಯಮಟ್ಟದ ಫಲಿತಾಂಶದಲ್ಲಿ 20 ನೇ ಸ್ಥಾನವನ್ನು ಕಾಯ್ದುಕೊಳ್ಳಲಾಗಿದೆ. ಕಳೆದ ವರ್ಷ ಶೇ.ವಾರು ಫಲಿತಾಂಶ 59.09 ಇತ್ತು. ಈ ವರ್ಷ ಶೇ.55.13 ರಷ್ಟು ಫಲಿತಾಂಶ ಸಿಕ್ಕಿದೆ. ಶೇ.3.96 ರಷ್ಟು ಕುಸಿತ ದಾಖಲಾಗಿದೆ. 2014-15ರಲ್ಲಿ, 2015-16ರಲ್ಲಿ ಪಿಯುಸಿ ಫಲಿತಾಂಶದಲ್ಲಿ 20ನೇ ಸ್ಥಾನ ಪಡೆದ ಜಿಲ್ಲೆಯು ಈ ವರ್ಷವೂ ಅದೇ ಸ್ಥಾನವನ್ನು ಪಡೆದುಕೊಂಡಿದೆ. ಶೇ.ವಾರು ಸಾಧನೆಯಲ್ಲಿ 2011-12ರಲ್ಲಿ 22, 2012-13ರಲ್ಲಿ 21, 2013-14ರಲ್ಲಿ 25ನೇ ಸ್ಥಾನವಿತ್ತು. ಆ ವಿಷಯದಲ್ಲಿ ಇಳಿಕೆಯಾಗಿದೆ.
ಕಳಪೆ ಸಾಧನೆ: 2011-12ರಿಂದ ಇಲ್ಲಿಯವರೆಗೆ ಆರು ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದೆ. 2011-12ರಲ್ಲಿ ಶೇ. 63.78, 2012-13ರಲ್ಲಿ 63.56, 2013-14ರಲ್ಲಿ ಶೇ. 60.03, 2014-15ರಲ್ಲಿ ಶೇ.63.48, 2015-16ರಲ್ಲಿ ಶೇ. 59.09ರಷ್ಟು ಫಲಿತಾಂಶ ಬಂದಿದೆ. ಈ ವರ್ಷ ಶೇ. 55.13ರಷ್ಟು ಫಲಿತಾಂಶ ಪಡೆದಿರುವುದು ಅತ್ಯಂತ ಕಳಪೆ ಎನಿಸಿದೆ. ಜಿಲ್ಲೆಯ 22,740 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 11,806 ವಿದ್ಯಾರ್ಥಿಗಳು, 10,934 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷದಂತೆ ಈ ವರ್ಷ ರಾಜ್ಯ ಮಟ್ಟದಲ್ಲಿ ಜಿಲ್ಲೆಯು 20ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಶೇ.ವಾರು ಫಲಿತಾಂಶದಲ್ಲಿ ಕಡಿಮೆಯಾಗಿದ್ದು, ಕಲಾವಿಭಾಗದ ಟಾಪ್ 10 ರಲ್ಲಿ ಜಿಲ್ಲೆಯವರೇ ಆರು ವಿದ್ಯಾರ್ಥಿಗಳಿದ್ದಾರೆ. 3 ವರ್ಷಗಳಿಂದ ಕಲಾವಿಭಾಗದಲ್ಲಿ ಜಿಲ್ಲೆಯ ಪ್ರಥಮ ಸ್ಥಾನ ಗಳಿಸುತ್ತಿದೆ.
-ಟಿ.ತಿಮ್ಮರಾಯಪ್ಪ, ಉಪನಿರ್ದೇಶಕರು, ಪದವೀ ಪೂರ್ವ ಶಿಕ್ಷಣ ಇಲಾಖೆ, ಬಳ್ಳಾರಿ