ಆ್ಯಪ್ನಗರ

ವಿವಾದಾಸ್ಪದ ಹೊಸ ಬ್ಲಾಕ್‌ ರಚನೆಗೆ ಮರುಜೀವ

ಗಣಿನಾಡು ಸಂಡೂರು ತಾಲೂಕಿನ ರಾಮಗಢ ಮತ್ತು ಸ್ವಾಮಿಮಲೈ ಪ್ರದೇಶದ ಖನಿಜ ಅನ್ವೇಷಣೆ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ(ಜಿಎಸ್‌ಐ)ದ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರಿಶೀಲಿಸಿದ್ದು, ವಿವಾದಾಸ್ಪದ ಹೊಸ ಬ್ಲಾಕ್‌ ರಚನೆಗೆ ಮರುಜೀವ ಬಂದಿದೆ.

ವಿಕ ಸುದ್ದಿಲೋಕ 1 Jul 2016, 9:00 am

ಶಶಿಧರ ಮೇಟಿ, ಬಳ್ಳಾರಿ

ಗಣಿನಾಡು ಸಂಡೂರು ತಾಲೂಕಿನ ರಾಮಗಢ ಮತ್ತು ಸ್ವಾಮಿಮಲೈ ಪ್ರದೇಶದ ಖನಿಜ ಅನ್ವೇಷಣೆ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ(ಜಿಎಸ್‌ಐ)ದ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರಿಶೀಲಿಸಿದ್ದು, ವಿವಾದಾಸ್ಪದ ಹೊಸ ಬ್ಲಾಕ್‌ ರಚನೆಗೆ ಮರುಜೀವ ಬಂದಿದೆ.

ಮಳೆಗಾಲದ ನಂತರ ಈ ಪ್ರದೇಶದಲ್ಲಿ ಖನಿಜ ಅನ್ವೇಷಣೆ ನಡೆಸಲು ಅಧಿಕಾರಿಗಳು ಯೋಜಿಸಿದ್ದಾರೆ. 2003ರ ನೋಟಿಫಿಕೇಷನ್‌ ಮುಂದಿಟ್ಟುಕೊಂಡು ಉಭಯ ಗಣಿ ಪ್ರದೇಶಗಳಲ್ಲಿ ಗಣಿಗಾರಿಕೆ ಕೈಗೊಳ್ಳಲು ರಾಜ್ಯ ಸರಕಾರ, ಇತ್ತೀಚೆಗೆ ಐದು ಹೊಸ ಬ್ಲಾಕ್‌ಗಳನ್ನು ಗುರುತಿಸಲು ಮುಂದಾಗಿತ್ತು. ಇದಕ್ಕೆ ಪರಿಸರವಾದಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ಬ್ಲಾಕ್‌ ಗುರುತಿಸುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿತ್ತು. ಈ ಮಧ್ಯೆ ಗಣಿಗಾರಿಕೆ ಪ್ರೋತ್ಸಾಹಿಸಲು ತೆರೆಮರೆಯಲ್ಲಿ ನಡೆಸಿರುವ ಸ್ಥಳ ಪರಿಶೀಲನೆಯಿಂದ ಗಣಿಪ್ರದೇಶದಲ್ಲಿ ಮತ್ತೊಮ್ಮೆ ದುಗುಡ ಮಡುಗಟ್ಟಿದೆ.

2-3 ತಿಂಗಳು ಅನ್ವೇಷಣೆ: ಖನಿಜ ಅನ್ವೇಷಣೆ ಮಾಡಲು ಕಳೆದ ನಾಲ್ಕೈದು ದಿನಗಳ ಹಿಂದೆ ಆಗಮಿಸಿದ್ದ ಜಿಎಸ್‌ಐ ಅಧಿಕಾರಿಗಳ ತಂಡ, ರಾಜ್ಯ ಸರಕಾರ ಹೊಸ ಬ್ಲಾಕ್‌ ರಚನೆಗೆ ರುತಿಸಿದ ಪ್ರದೇಶಗಳನ್ನೇ ಪರಿಶೀಲಿಸಿದೆ. ಮಳೆಗಾಲ ಹಿನ್ನೆಲೆಯಲ್ಲಿ ಖನಿಜ ಅನ್ವೇಷಣೆಗೆ ಅಡ್ಡಿಯಾಗಲಿರುವುದನ್ನು ಅರಿತ ಈ ತಂಡ, ಸದ್ಯಕ್ಕೆ ಗಣಿಪ್ರದೇಶದಿಂದ ಹಿಂತಿರುಗಿದೆ. ಖನಿಜ ಅನ್ವೇಷಣೆ ಪ್ರಕ್ರಿಯೆಯನ್ನು 2-3 ತಿಂಗಳು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲದ ನಂತರವೇ ಅನ್ವೇಷಣೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜೀವ ವೈವಿಧ್ಯ ಪರಿಸರಕ್ಕೆ ಧಕ್ಕೆ: ಜಿಎಸ್‌ಐ ಅಧಿಕಾರಿಗಳ ತಂಡದ ಸರ್ವೆ ನಂತರ, ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಅದಿರು ಸಂಗ್ರಹವಾಗಿದೆ? ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ. ರಾಜ್ಯ ಸರಕಾರ ಹೊಸ ಬ್ಲಾಕ್‌ ರಚಿಸಲು ಹೊರಟಿರುವ ಪ್ರದೇಶ, ಕಾದಿಟ್ಟ ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ. ಈ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾದರೆ, ಜೀವ ವೈವಿಧ್ಯ ಪರಿಸರಕ್ಕೆ ದಕ್ಕೆಯಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಆದರೆ, ರಾಜ್ಯ ಸರಕಾರ ಹೊಸ ಬ್ಲಾಕ್‌ಗಳ ರಚನೆಗೆ ಪಟ್ಟು ಸಡಿಸಿಲ್ಲ ಎಂಬುದನ್ನು ಜಿಎಸ್‌ಐ ಅಧಿಕಾರಿಗಳ ಇತ್ತೀಚಿನ ಭೇಟಿಯೇ ಸಾಕ್ಷೀಕರಿಸುತ್ತದೆ.

ಸುಪ್ರೀಂ ಪರಿಸರ ಕಳಕಳಿ: ಅದಿರು ನಿಕ್ಷೇಪ ಮುಂದಿನ ಪೀಳಿಗೆಗೆ ಉಳಿಸಲು ಹಾಗೂ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಸುಪ್ರೀಂ ಕೋರ್ಟ್‌, ರಾಜ್ಯದಲ್ಲಿ ಪ್ರತಿವರ್ಷ 30 ಮಿಲಿಯನ್‌ ಟನ್‌ ಅದಿರು ಉತ್ಪಾದನೆಗೆ ಮಿತಿ ಹೇರಿದೆ. ಜಿಲ್ಲೆಯ 124 ಗಣಿ ಗುತ್ತಿಗೆಗಳ ಪೈಕಿ ಈಗಾಗಲೇ ಪರಿಸರ ಪುನಶ್ಚೇತನ ಮತ್ತು ಪುನರ್‌ನಿರ್ಮಾಣ ಪೂರ್ಣಗೊಳಿಸಿರುವ ಹಾಗೂ ಶಾಸನಬದ್ಧ ಪರವಾನಗಿ ಪಡೆದ ಜಿಲ್ಲೆಯ 27 ಗಣಿ ಗುತ್ತಿಗೆ ಪ್ರದೇಶಗಳು ಅದಿರು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಈ ಮಧ್ಯೆ ಸಿ ಕೆಟಗರಿ ಗಣಿಗಳ ಇ-ಹರಾಜಿಗೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ. ಈ ಎಲ್ಲಾ ಗಣಿ ಗುತ್ತಿಗೆಗಳಿಂದ ಜಿಲ್ಲೆಯಲ್ಲಿ 25 ಮಿಲಿಯನ್‌ ಟನ್‌ ಅದಿರು ಉತ್ಪಾದನೆ ಸಾಮರ್ಥ್ಯ‌ ಹೊಂದಿರುವಾಗ ಹೊಸ ಬ್ಲಾಕ್‌ಗಳ ಅಗತ್ಯವಿದೆಯೆ? ಎಂಬ ಪ್ರಶ್ನೆಯನ್ನು ಪರಿಸರವಾದಿಗಳು ಸರಕಾರದ ಮುಂದಿಟಿಟ್ಟಿದ್ದಾರೆ.

--

Vijaya Karnataka Web rebirth to disputed new block formation
ವಿವಾದಾಸ್ಪದ ಹೊಸ ಬ್ಲಾಕ್‌ ರಚನೆಗೆ ಮರುಜೀವ

ಪ್ರತಿ ವರ್ಷದಂತೆ ಜಿಯೋಲಜಿಕಲ್‌ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳು ತಂಡ, ಖನಿಜ ಅನ್ವೇಷಣೆ ನಡೆಸಲು ಸಂಡೂರಿಗೆ ಆಗಮಿಸಲಿದೆ. ಈ ತಂಡ, ಈಗಾಗಲೇ ಸ್ಥಳ ಪರಿಶೀಲಿಸಿದೆ. ಮಳೆಗಾಲದ ನಂತರ ಖನಿಜ ಅನ್ವೇಷಣೆ ನಡೆಸುವ ಸಾಧ್ಯತೆ ಇದೆ.

- ಹೆಸರೇಳಲಿಚ್ಛಿಸದ ಅಧಿಕಾರಿ, ಬಳ್ಳಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ