ಆ್ಯಪ್ನಗರ

ರೋಹಿಣಿ ಮಳೆ ನಿರೀಕ್ಷೆಯಲ್ಲಿ ರೈತ

ವಿಧಾನಸಭೆ ಚುನಾವಣೆ ಗದ್ದಲ ಪೂರ್ಣಗೊಳ್ಳುತ್ತಿದ್ದಂತೆ ಇದೀಗ ತಾಲೂಕಿನ ರೈತರ ಚಿತ್ತ ಮುಂಗಾರಿ ಹಂಗಾಮದತ್ತ ಹೊರಳಿದೆ.

Vijaya Karnataka 15 May 2018, 5:00 am
ಬಸವರಾಜ ಅಯ್ಯನಗೌಡರ ಹಗರಿಬೊಮ್ಮನಹಳ್ಳಿ
Vijaya Karnataka Web BLR-BLY14HBH1


ವಿಧಾನಸಭೆ ಚುನಾವಣೆ ಗದ್ದಲ ಪೂರ್ಣಗೊಳ್ಳುತ್ತಿದ್ದಂತೆ ಇದೀಗ ತಾಲೂಕಿನ ರೈತರ ಚಿತ್ತ ಮುಂಗಾರಿ ಹಂಗಾಮದತ್ತ ಹೊರಳಿದೆ.

ತಾಲೂಕಿನಲ್ಲಿ ಈ ಸಾಲಿನಲ್ಲಿ ಒಟ್ಟು 52ಸಾವಿರ ಹೆ.ಪ್ರದೇಶದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿ ಬಿತ್ತನೆ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಜಮೀನು ಹದಮಾಡಲಾರಂಬಿಸಿದ್ದಾರೆ. ಬಿತ್ತನೆಗೆ ಪೂರಕವಾಗಿ ಮಾಗಿ ಉಳುಮೆ ಮುಂದುವರಿಸಿದ್ದಾರೆ. ಕಳೆದ ಬಾರಿ ಒಟ್ಟು 49 ಸಾವಿರ ಹೆ.ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ಗರಿಷ್ಠ ಪ್ರಮಾಣದ ಬಿತ್ತನೆ ಸಾಧ್ಯತೆಯನ್ನು ಕೃಷಿ ಇಲಾಖೆ ಖಚಿತಪಡಿಸಿದೆ. ಪ್ರಮುಖವಾಗಿ ಮುಂಗಾರಿ ಹಂಗಾಮಕ್ಕೆ ಈಗಾಗಲೇ ಅಲ್ಪಮಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವುದು ಪೂರಕವಾಗಿದೆ. ಚುನಾವಣೆ ನಡುವೆಯೆ ಕಳೆದ 5 ವಾರಗಳಿಂದ ಎತ್ತುಗಳ ಖರೀದಿ ಮತ್ತು ಮರಾಟದ ಪ್ರಕ್ರಿಯೆ ಬಲವಾಗಿದೆ. ಹಂಪಸಾಗರ, ಬನ್ನಿಕಲ್ಲು ಸೇರಿ ನಾನಾ ಗ್ರಾಮಗಳಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕಗಳಿಗೆ ಬೇಡಿಕೆ ಒದಗಿದೆ.

ರೋಹಿಣಿ ನಿರೀಕ್ಷೆ : ರೋಹಿಣಿ ಮಳೆಗೆ ಬಿತ್ತಿದರೆ ಓಣೆಲ್ಲಾ ಕಾಳು ಎಂಬಂತೆ ಬಹುತೇಕ ರೈತರು ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಜೋಳದ ಬಿತ್ತನೆಗೆ ಪೂರಕವಾಗಿ ಜಮೀನು ಹದಗೊಳಿಸಿ, ಬಿತ್ತನೆ ಪೂರ್ವದ ಸಿದ್ಧತೆಯನ್ನು ಭರದಿಂದ ಕೈಗೊಂಡಿದ್ದಾರೆ. ಮತ್ತೊಂದೆಡೆ ಈಗಾಗಲೆ ಕೃಷಿ ಇಲಾಖೆ ಬಿತ್ತನೆ ಬೀಜ ಪೂರೈಸಲು ಅಗತ್ಯ ಸಿದ್ಧತೆ ಕೈಗೊಂಡಿದೆ. ರೈತಸಂಪರ್ಕ ಕೇಂದ್ರಗಳಲ್ಲಿ ಎಂದಿನಂತೆ ಶೇ.50ರ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ ಪೂರೈಕೆಗೆ 30 ಕ್ವಿ.ನಷ್ಟು ಜೋಳ ಮತ್ತು 400 ಕ್ವಿಂ.ನಷ್ಟು ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಎರೆಭೂಮಿ ಹೊಂದಿರುವ ಕೋಗಳಿ, ಅಲಬೂರು, ಅಂಬಳಿ ಸೇರಿ ನಾನಾ ಗ್ರಾಮಗಳಲ್ಲಿ ಸಜ್ಜಿ ಬಿತ್ತನೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ಮುಂಗಾರಿ ವೇಳೆ ಸಕಾಲದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಗಾರಿ ಜೋಳದ ಬೆಳೆ ವಿಫಲವಾಗಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳದ ಬಿತ್ತನೆ ನಿರೀಕ್ಷಿಸಲಾಗುತ್ತಿದೆ.

ಬಿತ್ತನೆ ಏರಿಕೆ ಸಾಧ್ಯತೆ : ತಾಲೂಕಿನ ಹಿನ್ನೀರು ಪ್ರದೇಶದಲ್ಲಿನ ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಹಿನ್ನೀರು ಪ್ರದೇಶದಲ್ಲಿ ಸದ್ಯ ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಅನ್ವಯ ಈ ಸಾಲಿನಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗುತ್ತಿದೆ. ಸಹಜವಾಗಿಯೆ ಬಿತ್ತನೆ ಪ್ರಮಾಣ ಏರಿಕೆಯಾಗಲಿದೆ. ಕಳೆದ ಬಾರಿ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸುವ ಹಿನ್ನೆಲೆಯಲ್ಲಿ ನಿರ್ಮಿಸಲಾದ ಕೃಷಿಹೊಂಡಗಳು ನಿರೀಕ್ಷಿತ ಫಲ ನೀಡಿಲ್ಲ. ಸತತ 3ವರ್ಷ ಬರದಿಂದ ಕಂಗೆಟ್ಟಿರುವ ತಾಲೂಕಿಗೆ ಈ ಬಾರಿ ಮಳೆ ಮತ್ತು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ರೈತಾಪಿ ವರ್ಗವಿದೆ.

-----
ತಾಲೂಕಿನ ರೈತರು ಮುಂಗಾರಿ ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಪ್ರಮುಖವಾಗಿ ಜೋಳ, ಮುಸುಕಿನ ಜೋಳ, ಸಜ್ಜಿ ಮತ್ತು ಎಳ್ಳು ಬಿತ್ತನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗಿದೆ.

- ನಾಗರಾಜ, ಕೃಷಿ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ