ಆ್ಯಪ್ನಗರ

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸಾಲ ಮನ್ನಾ?

ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮಾಹಿತಿ ಸಂಗ್ರಹ| ಮೀಸಲು ಅನುದಾನ ಬಳಕೆಗೆ ಚಿಂತನೆ| ವಿದ್ಯಾರ್ಥಿ ಸಮೂಹದತ್ತ ಗಮನ

Vijaya Karnataka 7 Oct 2018, 7:45 am
ಯಮನಪ್ಪ ಪವಾರ
Vijaya Karnataka Web L W


ಬಳ್ಳಾರಿ: ರೈತರ ಸಾಲ ಮನ್ನಾ ಬೆನ್ನಲ್ಲೇ ವಿದ್ಯಾರ್ಥಿ ಸಮೂಹದತ್ತ ಗಮನ ಹರಿಸಿರುವ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲದ ಮಾಹಿತಿ ಸಂಗ್ರಹಿಸಲು ಸಿದ್ಧತೆ ಆರಂಭಿಸಿದೆ.

ಸಮಾಜ ಕಲ್ಯಾಣ ಇಲಾಖೆ ಆಯಾ ಜಿಲ್ಲೆಯ ಅಧಿಕಾರಿಗಳ ಮೂಲಕ ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳಲ್ಲಿನ 'ಸಾಲ'ದ ವಿವರ ಸಂಗ್ರಹಿಸಲು ಚಾಲನೆ ಕೊಟ್ಟಿದೆ. ವಿದ್ಯಾರ್ಥಿಯ ಹೆಸರು, ಸೇರ್ಪಡೆಯಾಗಿರುವ ಕೋರ್ಸ್‌, ಸಾಲ ಪಡೆದಿರುವ ಬ್ಯಾಂಕ್‌, ಮೊತ್ತದ ವಿವರನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಇಲಾಖೆ ಕೇಳಿದೆ. ಉನ್ನತ ವ್ಯಾಸಂಗಕ್ಕಾಗಿ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಮಾಡಿರುವ ಸಾಲವನ್ನು ಮನ್ನಾ ಮಾಡುವ ಉದ್ದೇಶದಿಂದ ಮಾಹಿತಿ ಕೇಳಲಾಗಿದ್ದು, ಈವರೆಗಿನ ಬಡ್ಡಿ ಸಹಿತ ಒಟ್ಟು ಮೊತ್ತ ತಿಳಿಯುವ ಪ್ರಯತ್ನ ನಡೆದಿದೆ. ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಂಟಿ ನಿರ್ದೇಶಕರು, ಉಪನಿರ್ದೇಶಕರಿಗೆ ಸಮಾಜ ಕಲ್ಯಾಣ ಇಲಾಖೆ ಅ.4ರಂದು ಬರೆದ ಪತ್ರ 'ವಿಜಯ ಕರ್ನಾಟಕ'ಕಕ್ಕೆ ಲಭ್ಯವಾಗಿದೆ.

ಲೆಕ್ಕಾಚಾರ ಶುರು: ಪರಿಶಿಷ್ಟ ಜಾತಿ, ಪಂಗಡದ ಉಪಯೋಜನೆಗಳಡಿ ಈಗಾಗಲೇ ಅನುದಾನವನ್ನು ನಾನಾ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಮೀಸಲು ಅನುದಾನ ಖರ್ಚಾಗದೇ ಉಳಿಯದಂತೆ ನೋಡಿಕೊಳ್ಳುವ ಭಾಗವಾಗಿ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲು ಎರಡು ವರ್ಷದ ಹಿಂದೆಯೇ ಚಿಂತನೆ ನಡೆಸಲಾಗಿತ್ತು. ಪ್ರತಿ ವರ್ಷ ಮಾರ್ಚ್‌ ವೇಳೆಗೆ ಬಳಕೆಯಾಗದ ಮೊತ್ತದ ಬಗ್ಗೆ ಏರ್ಪಟ್ಟ ಚರ್ಚೆಯ ವೇಳೆ 'ಶೈಕ್ಷಣಿಕ ಸಾಲ'ದತ್ತ ಗಮನ ಹರಿಸಲಾಗಿದೆ. ಪ್ರಾಥಮಿಕವಾಗಿ ಸಾಲದ ಮೊತ್ತ ಅಂದಾಜಿಸಲು ಲೀಡ್‌ಬ್ಯಾಂಕ್‌ಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ. ಎರಡನೇ ಬಾರಿ ಈ ವಿಷಯದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದು ನೆನಪಿಸಲಾಗಿದೆ. ಸೂಚಿಸಿದ ನಮೂನೆಯಲ್ಲಿ ಮಾಹಿತಿ ಪಡೆದು ಸಲ್ಲಿಸುವಂತೆ ಅಧಿಕಾರಿಗಳಿಗೆ ದುಂಬಾಲು ಬೀಳಲಾಗಿದೆ.

ಚಿಗುರಿದ ಆಶಾಭಾವ: ಎಂಜಿನಿಯರಿಂಗ್‌, ವೈದ್ಯಕೀಯ, ತಾಂತ್ರಿಕ ವಿಭಾಗದ ಸೇರಿದಂತೆ ಉನ್ನತ ವ್ಯಾಸಂಗಕ್ಕೆ ಸೇರಿದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತಗುಲುವ ಸರಕಾರಿ ಶುಲ್ಕವನ್ನು ಸರಕಾರವೇ ಭರಿಸುತ್ತದೆ. ಆದರೆ, ಮ್ಯಾನೇಜ್‌ಮೆಂಟ್‌ ಶುಲ್ಕ ಇಲ್ಲವೆ ಖಾಸಗಿ ಕಾಲೇಜುಗಳ ಹೆಚ್ಚುವರಿ ಮೊತ್ತವನ್ನು ಸರಕಾರ ತುಂಬುವುದಿಲ್ಲ. ಇದಕ್ಕಾಗಿ ವಿದ್ಯಾರ್ಥಿಗಳು ರಾಷ್ಟ್ರೀಕೃತ, ಅನುಕೂಲ ಇರುವ ಇತರ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆಯುವ ಪದ್ಧತಿಯಿದೆ. ಸರಕಾರಿ ಸೀಟು ಸಿಗದೇ ಇದ್ದಾಗ ಹಲವರು ಇದೇ ಮಾರ್ಗ ಅನುಸರಿಸಿ ವ್ಯಾಸಂಗ ಪೂರೈಸಿದ್ದಾರೆ. ಅಂತಹವರ ಮೇಲಿನ ಆರ್ಥಿಕ ಹೊರೆಯನ್ನು ಇಳಿಸುವುದಕ್ಕೆ ತಾಲೀಮು ನಡೆದಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಂಬೇಡ್ಕರ್‌, ವಾಲ್ಮೀಕಿ ನಿಗಮಗಳಿಂದ ಪಡೆದ ಎಸ್ಸಿ, ಎಸ್ಟಿ ವರ್ಗದ ಸಾಲಗಳನ್ನು ಮನ್ನಾ ಮಾಡಿತ್ತು. ಈಗ ಶೈಕ್ಷಣಿಕ ಸಾಲವನ್ನು ಲೆಕ್ಕ ಹಾಕುತ್ತಿರುವುದರಿಂದ ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಋುಣಮುಕ್ತರಾಗುವ ಆಶಾಭಾವ ಚಿಗುರಿದೆ.

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಕುರಿತು ಮಾಹಿತಿ ಕೇಳಿದ್ದಾರೆ. ಸಮೀಕ್ಷೆ ಕೈಗೊಂಡಿರುವ ಸಾಧ್ಯತೆಗಳಿದ್ದು, ಆ ಬಗ್ಗೆ ಬ್ಯಾಂಕ್‌ಗಳ ಮೂಲಕ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದು -ಬಿ.ಕಲ್ಲೇಶ್‌, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ