ಆ್ಯಪ್ನಗರ

ಬಳ್ಳಾರಿಯಲ್ಲಿ 420 ಸಮರ: ಸಿದ್ದು, ಶ್ರೀರಾಮುಲು ಜಟಾಪಟಿ

ನಾಯಕ ಜಾತಿಯ ಶ್ರೀರಾಮುಲುಗೆ 371ಜೆ ಗೊತ್ತಿಲ್ಲ, 420 ಪ್ರಕರಣ ಗೊತ್ತು ಎಂದ ಸಿದ್ದರಾಮಯ್ಯ

Vijaya Karnataka 23 Oct 2018, 10:02 am
ಯಮನಪ್ಪ ಪವಾರ
Vijaya Karnataka Web Siddu- Ramulu


ಬಳ್ಳಾರಿ: ಉಪ ಚುನಾವಣೆಯ ಪ್ರಚಾರ ಕಣಕ್ಕಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ದಿನವೇ ಶ್ರೀರಾಮುಲು ವಿರುದ್ಧ ಮಾತಿನ ಪ್ರಹಾರ ನಡೆಸಿದರು. ಇದಕ್ಕೆ ಪ್ರತಿಯಾಗಿ ರಾಮುಲು ಕೂಡ ಸಿದ್ದರಾಮಯ್ಯ ವಿರುದ್ಧ ‘ಜಾತಿ ಅನುಕಂಪದ’ ಅಸ್ತ್ರವನ್ನು ಪ್ರಯೋಗಿಸಿದ್ದಾರೆ !

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಹಾಗೂ ಬಿಜೆಪಿಯ ಜೆ.ಶಾಂತಾ ಅವರು ಪರಸ್ಪರ ಎದುರಾಳಿಯಾಗಿದ್ದರೂ, ಕಣದಲ್ಲಿ ಸಿದ್ದು-ರಾಮುಲು ಜೋಡಿಯ ಅಬ್ಬರವೇ ಜೋರಾಗಿದೆ.
ಮೊದಲೇ ಪ್ರಚಾರ ಆರಂಭಿಸಿದ ಬಿ.ಶ್ರೀರಾಮುಲು ಸರಕಾರವೇ ನನ್ನ ವಿರುದ್ಧ ನಿಂತರೂ ಹೆದರುವುದಿಲ್ಲ ಎಂದಿದ್ದರು. ಚುನಾವಣೆಯನ್ನು ‘‘ಕೌರವರು ಮತ್ತು ಪಾಂಡವರ ನಡುವಿನ ಯುದ್ಧ’’ ವೆಂದು ವಿಶ್ಲೇಷಿಸಿದ್ದರು.

ತಡವಾಗಿ ಪ್ರಚಾರಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಆ ಎಲ್ಲ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ. ‘‘ರಿಪಬ್ಲಿಕ್‌ ಆಫ್‌ ಬಳ್ಳಾರಿಯ ಕೌರವರು,’’ಎಂದು ಪ್ರತಿಯಾಗಿ ಕುಟುಕಿದ್ದಾರೆ. ಮಾಜಿ ಸಿಎಂ ಮತ್ತು ಬಿ.ಶ್ರೀರಾಮುಲು ಅವರ ಮಧ್ಯೆಯೇ ನೇರ ವಾಗ್ದಾಳಿ ಶುರುವಾಗಿದ್ದು, ಬದಾಮಿ ಬಿಸಿ ಜಿಲ್ಲೆಗೆ ಕಾಲಿಟ್ಟಂತಾಗಿದೆ. ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಉಳಿಸಿಕೊಳ್ಳಲು ಬಿ.ಶ್ರೀರಾಮುಲು ಅವರು, ತಮ್ಮ ಸಹೋದರಿ ಜೆ.ಶಾಂತಾ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವಿನ ಮಾತಿನ ಚಕಮಕಿ ಇಲ್ಲಿದೆ.

ಸಿದ್ದರಾಮಯ್ಯ ಏಟು

ಪ್ರತಿ ಚುನಾವಣೆಯಲ್ಲೂ ರಾಮುಲು ಛದ್ಮವೇಶ ಹಾಕಿಕೊಳ್ಳುತ್ತಾರೆ. ಈ ಬಾರಿ ಗಡ್ಡಬಿಟ್ಟುಕೊಂಡು ಪ್ರಚಾರ ನಡೆಸುತ್ತಿರುವುದು ಹೊಸ ನಾಟಕ. ಇಂಥ ಶೋಕಿ ಮಾಡುವರನ್ನು ಜನತೆ ತಿರಸ್ಕರಿಸುವುದು ನಿಶ್ಚಿತ.

ಶ್ರೀರಾಮುಲು, ಶಾಂತಾ, ಕರುಣಾಕರ್‌ ರೆಡ್ಡಿ ಸೇರಿ ಬಿಜೆಪಿ ಸಂಸದರು ಎಂದಿಗೂ ಲೋಕಸಭೆಯಲ್ಲಿ ಜನರ ಪರ ಬಾಯಿ ತೆರೆದಿಲ್ಲ. ಬಳ್ಳಾರಿಯ ಜನತೆಗೆ ಯಾರು ದುಷ್ಟರು, ಶಿಷ್ಟರು ಎಂಬ ಅರಿವಿದೆ. ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ.

ನಮ್ಮ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಅಪ್ಪಟ ಕನ್ನಡಿಗ. ಬಿಜೆಪಿಯ ಶ್ರೀರಾಮುಲು ಹುಟ್ಟಿದ್ದೆಲ್ಲಿ?. ಅವರಿಗೆ ಸರಿಯಾಗಿ ಕನ್ನಡ ಮಾತಾಡಲಿಕ್ಕೆ ಬರ್ತಿದೆಯಾ ? ಬದಾಮಿಯಲ್ಲಿ ಅವರಿಗೆ ಅಡ್ರೆಸ್‌ ಇದೆಯಾ? ಶಾಂತಾರ ಊರು ಯಾವುದು?

ಶ್ರೀರಾಮುಲು ತಮ್ಮ ಅವಧಿಯಲ್ಲಿ ಲೋಕಸಭೆಯಲ್ಲಿ ರಾಜ್ಯ ಅಥವಾ ಜಿಲ್ಲೆಯ ಅಭಿವೃದ್ಧಿ ಕುರಿತು ಒಮ್ಮೆಯಾದರೂ ಬಾಯಿ ಬಿಟ್ಟಿದ್ದಾರಾ? ಒಂದಾದರೂ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರಾ?. ಉಗ್ರಪ್ಪ ಹೋರಾಟಗಾರ. ಮೋದಿ ಶರ್ಟ್‌ ಪಟ್ಟಿ ಹಿಡಿದು ಕೇಳುತ್ತಾರೆ.

ಶ್ರೀರಾಮುಲು ತಿರುಗೇಟು

ನಾನು ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ನನಗೆ 420 ಎಂದು ನಿಂದಿಸಿದ್ದಾರೆ. ಹಾಗಾದರೆ ವಾಲ್ಮೀಕಿ ಸಮುದಾಯದವರೆಲ್ಲ 420 ಗಳಾ ? ಇದಕ್ಕೆ ಚುನಾವಣೆಯಲ್ಲಿ ನೀವೆಲ್ಲಾ ಉತ್ತರ ನೀಡಬೇಕು

ಶ್ರೀರಾಮುಲು ಅವರನ್ನು ಸೋಲಿಸಲು 60 ಶಾಸಕರು, 10 ಸಂಸದರು, 10 ಸಚಿವರು ಬಂದಿದ್ದಾರೆ. ಆದರೆ, ಎಂದಿಗೂ ಜಿಲ್ಲೆಯ ಜನ ನಮ್ಮನ್ನು ಕೈ ಬಿಡುವುದಿಲ್ಲ. ನಮ್ಮ ಶಕ್ತಿ ತೋರಿಸುತ್ತೇವೆ.

ನಾಯಕ ಸಮುದಾಯದವರು ಬೇಟೆಗಾರರು, ಆದಿವಾಸಿಗಳಾಗಿದ್ದಾರೆ. ಶ್ರೀರಾಮುಲು ಅವರಿಗೆ 371(ಜೆ)ಗೊತ್ತಿಲ್ಲ. ಬದಲಾಗಿ 420 ಪ್ರಕರಣ, ಕ್ರಿಮಿನಲ್‌ ಕೇಸ್‌ ಗೊತ್ತಿದೆ ಎಂದಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ.

ಸಂಸದರ ಅನುದಾನ ಬಳಕೆಯಲ್ಲಿ ನಂ.1 ಸ್ಥಾನದಲ್ಲಿರುವೆ. ಜನರಿಗಾಗಿ ಸಂಸತ್‌ನಲ್ಲಿ ಸಾಕಷ್ಟು ಬಾರಿ ಧ್ವನಿ ಎತ್ತಿದ್ದೇನೆ. ಜನರಿಗೆ ಕೆಲಸ ಮಾಡಿರುವೆ. ನನ್ನ ಕೆಲಸ ನೋಡಿ, ರಾಜ್ಯಮಟ್ಟದ ನಾಯಕರ ಪಟ್ಟಿಯಲ್ಲಿ ನನ್ನನ್ನು ಗುರುತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ