ಬಳ್ಳಾರಿ: ಇಲ್ಲಿನ ತಹಸಿಲ್ ಕಚೇರಿ ಆವರಣದಲ್ಲಿ ವಾಮಾಚಾರ ನಡೆದಿರುವುದು ಸೋಮವಾರ ಬೆಳಕಿಗೆ ಬಂದಿದ್ದು, ಸಿಬ್ಬಂದಿ ಕೆಲ ಕಾಲ ಆತಂಕ ಅನುಭವಿಸಿದರು.
ತಹಸೀಲ್ದಾರ್ ಚೇಂಬರ್ ಮುಂದೆ ಹಾಗೂ ಹಿಂಭಾಗದಲ್ಲಿ ವಾಮಾಚಾರದ ವಸ್ತುಗಳು ಕಂಡುಬಂದಿವೆ. ಶನಿವಾರ ಮಕರ ಸಂಕ್ರಾಂತಿ ಮತ್ತು ಭಾನುವಾರ ರಜೆ ಮುಗಿಸಿಕೊಂಡು ಸೋಮವಾರ ಎಂದಿನಂತೆ ಕಚೇರಿಗೆ ಬಂದ ಸಿಬ್ಬಂದಿಗೆ ವಾಮಾಚಾರಕ್ಕೆ ಬಳಸಿದ್ದ ವಸ್ತುಗಳು ಎದುರಾದವು.
ಒಂದೆಡೆ 5 ಎಲೆಗಳಲ್ಲಿ ಕುಂಡಲಿ ಬಿಡಿಸಿರುವ ಜತೆಗೆ ಅಡಕೆ ಹಾಗೂ ಮೂರು ಮೊಟ್ಟೆಗಳನ್ನು ಇಡಲಾಗಿತ್ತು. ಅದರ ಮೇಲೆ ಉರ್ದು ಅಕ್ಷರಗಳಿಂದ ಬರೆಯಲಾಗಿತ್ತು. ಮೂರು ದಿಕ್ಕಿಗೂ ಒಂದೊಂದು ಮೊಟ್ಟೆ ಇರಿಸಲಾಗಿತ್ತು. ಕಚೇರಿ ಮುಂಭಾಗದಲ್ಲಿ ಒಂಬತ್ತು ಮೆಣಸಿನಕಾಯಿ, ಟೊಮೇಟೊ, ನಿಂಬೆಹಣ್ಣು, ಕ್ಯಾರೆಟ್ ಮೂಲಕ ವಾಮಾಚಾರ ನೆರವೇರಿಸಲಾಗಿತ್ತು. ತಹಸಿಲ್ ಕಚೇರಿ ಮುಂಭಾಗದಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದರೆ, ವಾಮಾಚಾರ ಮಾಡಿದವರ ಕುರಿತು ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಕಚೇರಿಯ ಸಿಬ್ಬಂದಿ ತಿಳಿಸಿದ್ದಾರೆ.
ಈ ಹಿಂದೆ ಖಾಸಗಿ ಕಂಪನಿಯೊಂದರ ಮಾಲೀಕನ ಮನೆ ಮುಂದೆ ವಾಮಾಚಾರ ಮಾಡಲಾಗಿತ್ತು. ಮತ್ತೊಂದೆಡೆ ಕೆಲ ದಿನಗಳ ಹಿಂದೆ ಇಲ್ಲಿನ ರೆಡ್ಡಿ ಸ್ಟ್ರೀಟ್ನಲ್ಲಿ ಮನೆಯೊಂದರ ಮುಂದೆ ಎರಡ್ಮೂರು ಸಲ ಮಾಂಸದ ಮುದ್ದೆಗಳು, ದೀಪಗಳು, ಎಲೆ, ಅಡಕೆ ಇರಿಸಿ, ಅವುಗಳಿಗೆ ಕುಂಕುಮ ಹಚ್ಚಿ ವಾಮಾಚಾರ ಮಾಡಲಾಗಿತ್ತು. ಇಂತಹ ಪ್ರಕರಣಗಳಿಗೆ ಸಂಬಂಧಿಸಿ, ಪೊಲೀಸರು ದೂರು ಸ್ವೀಕರಿಸುವುದಿಲ್ಲ ಎಂಬ ಮಾತು ಕೇಳಿಬಂದಿದೆ.
ವಾಮಾಚಾರವೆಂಬುದು ವಿಕೃತ ಮತ್ತು ದುರ್ಬಲ ಮನಸ್ಸಿನ ವ್ಯಕ್ತಿಗಳು ಮಾಡುವ ಕೃತ್ಯವಾಗಿದೆ. ವಾಮಾಚಾರಕ್ಕೆ ಬಳಸಿರುವ ಮೊಟ್ಟೆ, ನಿಂಬೆಹಣ್ಣು ಸೇವಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ನಿಂಬೆಹಣ್ಣು ಹಾಗೂ ಮೊಟ್ಟೆಯನ್ನು ಆಹಾರದ ವಸ್ತುವಾಗಿ ಬಳಸುತ್ತೇವೆ. ಅವುಗಳನ್ನೇ ವಾಮಾಚಾರಕ್ಕೆ ಬಳಸಿದರೆ ಅದರ ಗುಣಗಳು ಬದಲಾಗಲು ಹೇಗೆ ಸಾಧ್ಯ? ಇಂತಹ ವಾಮಾಚಾರದ ಬಗ್ಗೆ ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ.
-ಹುಲಿಕಲ್ಲು ನಟರಾಜ್, ಪವಾಡ ಬಯಲು ತಜ್ಞರು