ಆ್ಯಪ್ನಗರ

ಬೋಧಕ ಸಿಬ್ಬಂದಿಗೆ ರಾತ್ರಿ ಪಾಳಿ ಕಡ್ಡಾಯ

ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾಲೇಜು ಆಸ್ಪತ್ರೆಗಳಲ್ಲಿ ಬೋಧಕ ಸಿಬ್ಬಂದಿಗೆ ರಾತ್ರಿ ಪಾಳಿ ಕರ್ತವ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ) ಕಡ್ಡಾಯಗೊಳಿಸಿದ್ದು, ಈ ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಇನ್ಮುಂದೆ ದಿನದ 24ತಾಸೂ ಆರೋಗ್ಯ ಸೇವೆ ದೊರೆಯಲಿದೆ.

Vijaya Karnataka 13 Jul 2018, 12:00 am
ಶಶಿಧರ ಮೇಟಿ, ಬಳ್ಳಾರಿ
Vijaya Karnataka Web BLR-12BLYPH11


ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾಲೇಜು ಆಸ್ಪತ್ರೆಗಳಲ್ಲಿ ಬೋಧಕ ಸಿಬ್ಬಂದಿಗೆ ರಾತ್ರಿ ಪಾಳಿ ಕರ್ತವ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ) ಕಡ್ಡಾಯಗೊಳಿಸಿದ್ದು, ಈ ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಇನ್ಮುಂದೆ ದಿನದ 24ತಾಸೂ ಆರೋಗ್ಯ ಸೇವೆ ದೊರೆಯಲಿದೆ.

ವಿಭಾಗದ ಮುಖ್ಯಸ್ಥರನ್ನು ಹೊರತುಪಡಿಸಿ, ಎಲ್ಲ ಬೋಧಕ ಸಿಬ್ಬಂದಿ ರಾತ್ರಿ ಪಾಳಿ ಸೇವೆ ನಿರ್ವಹಿಸಬೇಕಿದೆ. ಸಮರ್ಪಕವಾಗಿ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವ ಹಾಗೂ ಕರ್ತವ್ಯಕ್ಕೆ ಚಕ್ಕರ್ ಹಾಕುವ ವೈದ್ಯರಿಗೆ ಇಲಾಖೆಯ ಹೊಸ ಆದೇಶ ಚಾಟಿಯೇಟು ಎನಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದ ಸ್ವಾಯತ್ತ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಆರೋಗ್ಯ ಸೇವೆಯಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಇಂತಹ ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಸಕಾಲದಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ), ರಾತ್ರಿ ಪಾಳಿ ಕರ್ತವ್ಯ ಕಡ್ಡಾಯಗೊಳಿಸಲು ತೀರ್ಮಾನಿಸಿದೆ.

ಪರಿಣಾಮಕಾರಿ ಚಿಕಿತ್ಸೆ ಲಭ್ಯ: ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ತಜ್ಞ ವೈದ್ಯರು, ಎಂಬಿಬಿಎಸ್, ಪಿಜಿ ವೈದ್ಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಗೆ ಲಭ್ಯವಿರಲಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸಲು ಅವಕಾಶವಿದೆ. ಆದರೆ, ಈ ಕಾಲೇಜು ಆಸ್ಪತ್ರೆಗಳಲ್ಲಿ ಇದುವರೆಗೆ ಬೋಧಕ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೋಧಕ ಸಿಬ್ಬಂದಿಗೆ ರಾತ್ರಿ ಪಾಳಿ ಕರ್ತವ್ಯವನ್ನು ಇಲಾಖೆ ಕಡ್ಡಾಯಗೊಳಿಸಿದೆ.

ಸಂಸ್ಥೆಗಳ ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ತಜ್ಞ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೊಟೇಷನ್ ಪದ್ಧತಿಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಬೇಕಿದೆ. ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, 2017, ಸೆ.16ರಂದು ಹೊರಡಿಸಿದ್ದ ಇಂಥದೇ ಆದೇಶ ಪಾಲನೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2018, ಜು.2ರಂದು ಹೊಸ ಸುತ್ತೋಲೆ ಹೊರಡಿಸಿದೆ.

ಸ್ವಾಯತ್ತ ಕಾಲೇಜುಗಳಿವು: ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಉದ್ದೇಶಿತ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹಾಸನ, ಶಿವಮೊಗ್ಗ, ರಾಯಚೂರು, ಬೀದರ್, ಬೆಳಗಾವಿ, ಕೊಡಗು, ಕಾರವಾರ, ಕೊಪ್ಪಳ, ಗದಗ, ಕಲಬುರಗಿ, ಚಾಮರಾಜನಗರ, ಮಂಡ್ಯವೈದ್ಯಕೀಯ ವಿಜ್ಞಾನ ಸಂಸ್ಥೆಗಳು, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದ ಟ್ರಾಮಾ ಕೇರ್ ಸೆಂಟರ್, ಬೆಂಗಳೂರಿನ ಸರಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳ ಆಸ್ಪತ್ರೆಗಳಿಗೆ ಇಲಾಖೆಯ ಹೊಸ ನಿಯಮ ಅನ್ವಯಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ