ಹೊಸಪೇಟೆ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 2017, ಡಿಸೆಂಬರ್ 11ರಂದು ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಮತ್ತು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲ ಸಮುದಾಯದವರ ಹಿತ ಕಾಪಾಡುತ್ತಿದೆ. ಡಿ.11ರ ಸಮಾವೇಶದಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಿಂದ ವಾಲ್ಮೀಕಿ ನಾಯಕ ಸಮಾಜದ 3ಲಕ್ಷ ಕ್ಕೂ ಹೆಚ್ಚು ಬಾಂಧವರು ಭಾಗವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾಗವಹಿಸುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಸಮಾವೇಶದ ಮೂಲಕ ಪಕ್ಷ ಬಲಪಡಿಸಲಾಗುವುದು'' ಎಂದರು.
ಮೀಸಲು ಹೆಚ್ಚಳ ಅಗತ್ಯ: ''ಪರಿಶಿಷ್ಟ ಪಂಗಡ ಮೀಸಲನ್ನು ಶೇ.7.5ಕ್ಕೆ ಏರಿಕೆಮಾಡಿ, ಕುರುಬ ಸಮಾಜ ಸೇರಿ ಅರ್ಹತೆ ಹೊಂದಿರುವ ಯಾವುದೇ ಸಮುದಾಯವನ್ನು ಪ.ಪಂಗಡಕ್ಕೆ ಸೇರ್ಪಡೆಗೊಳಿಸಬಹುದು. ಇದರ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲ. ದಲಿತ ನೌಕರರಿಗೆ ನೀಡಲಾಗಿರುವ ಬಡ್ತಿ ಮೀಸಲಿನ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನ ಅಡಿ ಕ್ರಮವಹಿಸಲಾಗುವುದು. ಈ ಕುರಿತು ಸಿಎಂ ಗಮನವನ್ನೂ ಸೆಳೆಯಲಾಗುವುದು'' ಎಂದು ತಿಳಿಸಿದರು.
ಭಿನ್ನಾಭಿಪ್ರಾಯವಿಲ್ಲ: ''ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶದಲ್ಲಿ ಅವರ ಜತೆ ವೇದಿಕೆ ಹಂಚಿಕೊಳ್ಳುವೆ'' ಎಂದ ಅವರು, ''ಟಿಪ್ಪು ಜಯಂತಿಯಲ್ಲಿ ಶಾಸಕ ಆನಂದ್ ಸಿಂಗ್ ಭಾಗವಹಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಅವರು ತಪ್ಪಿ ಬಿಜೆಪಿಯಲ್ಲಿದ್ದಾರೆ. ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಜತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಾಂಗ್ರೆಸ್ನ ತತ್ತ್ವ ಸಿದ್ಧಾಂತ ಒಪ್ಪಿ ಅವರು, ಪಕ್ಷ ಸೇರುವುದಾದರೆ ಸ್ವಾಗತಿಸಲಾಗುವುದು'' ಎಂದು ಹೇಳಿದರು.
ತಳಕು ಹಾಕಬೇಡಿ: ''ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ರಾಜ್ಯ ಸರಕಾರಕ್ಕೆ ಸಂಬಂಧಿಸಿದಲ್ಲ. ಅದು ಆ ಸಮಾಜದ ಆಂತರಿಕ ವಿಷಯವಾಗಿದೆ. ಇದರಲ್ಲಿ ಸರಕಾರವನ್ನು ತಳಕುಹಾಕುವುದು ಸರಿಯಲ್ಲ'' ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವಿ.ನಾಯಕ, ಶಾಸಕರಾದ ಈ.ತುಕಾರಾಂ, ಪ್ರತಾಪ್ಗೌಡ ಪಾಟೀಲ್, ಮುಖಂಡರಾದ ಗುಜ್ಜಲ ನಾಗರಾಜ್, ಗುಜ್ಜಲ್ ರಘು, ಡಾ.ತಾರಿಹಳ್ಳಿ ವೆಂಕಟೇಶ್, ತಾರಿಹಳ್ಳಿ ಶಿವಮೂರ್ತಿ, ಕೆ.ಎಂ.ಹಾಲಪ್ಪ, ಎಲ್. ಸಿದ್ದನಗೌಡ ಇತರರಿದ್ದರು.