ಆ್ಯಪ್ನಗರ

ಜಿಂದಾಲ್‌ಗೆ ಭೂಮಿ ಪರಭಾರೆ ವಿರುದ್ಧ ವಾಟಾಳ್‌ ಹರತಾಳ

ಜಿಂದಾಲ್‌ ಕಾರ್ಖಾನೆಗೆ 3,667ಎಕರೆ ಜಮೀನು ಪರಭಾರೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ, ಶನಿವಾರ, ಕಾರ್ಖಾನೆಗೆ ನುಗ್ಗಲು ಯತ್ನಿಸಿದ ಕನ್ನಡ ಚಳವಳಿ ಪಕ್ಷ ದ ವಾಟಾಳ್‌ ನಾಗರಾಜ್‌ ಸೇರಿ 32 ಜನರನ್ನು ಬಂಧಿಸಿದ ತೋರಣಗಲ್ಲು ಪೊಲೀಸರು, ನಂತರ ಜಾಮೀನು ಮೇಲೆ ಬಿಡುಗಡೆ ಗೊಳಿಸಿದರು.

Vijaya Karnataka 16 Jun 2019, 5:00 am
ಸಂಡೂರು: ಜಿಂದಾಲ್‌ ಕಾರ್ಖಾನೆಗೆ 3,667ಎಕರೆ ಜಮೀನು ಪರಭಾರೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ, ಶನಿವಾರ, ಕಾರ್ಖಾನೆಗೆ ನುಗ್ಗಲು ಯತ್ನಿಸಿದ ಕನ್ನಡ ಚಳವಳಿ ಪಕ್ಷ ದ ವಾಟಾಳ್‌ ನಾಗರಾಜ್‌ ಸೇರಿ 32 ಜನರನ್ನು ಬಂಧಿಸಿದ ತೋರಣಗಲ್ಲು ಪೊಲೀಸರು, ನಂತರ ಜಾಮೀನು ಮೇಲೆ ಬಿಡುಗಡೆ ಗೊಳಿಸಿದರು.
Vijaya Karnataka Web vatal nagaraj strike against jindal company
ಜಿಂದಾಲ್‌ಗೆ ಭೂಮಿ ಪರಭಾರೆ ವಿರುದ್ಧ ವಾಟಾಳ್‌ ಹರತಾಳ


ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ''ಸರಕಾರ ಜಿಂದಾಲ್‌ ಕಾರ್ಖಾನೆಗೆ ಮಾರಲು ಹೊರಟ ಆಸ್ತಿ ರೈತರದ್ದು ಹೊರತು ಯಾರಪ್ಪನ ಮನೆಯ ಆಸ್ತಿಯಲ್ಲ. ಕನ್ನಡಿಗರ ಆಸ್ತಿಯನ್ನು ಯಾವ ಚಿಂತನೆ ಮಾಡದೇ ಸಿಎಂ ಕುಮಾರಸ್ವಾಮಿ ಸಂಪುಟ, ಮಾರಾಟಮಾಡಲು ಒಪ್ಪಿರುವುದು ಖಂಡನೀಯ. ಕಡ್ಲೆಪುರಿಯಂತೆ ಒಂದು ಲಕ್ಷ ರೂ.ಗೆ ಎಕರೆ ಭೂಮಿ ಮಾರಾಟಮಾಡಲು ಒಪ್ಪಿ ಜನರ ಜೀವನದೊಂದಿಗೆ ಹುಡುಗಾಟವಾಡುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಈ ವಿಷಯದಲ್ಲಿ ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸುಪ್ರಿಂ ಕೋರ್ಟ್‌ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕು. ಜಿಂದಾಲ್‌ ಕಾರ್ಖಾನೆ ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ. ಸರಕಾರದಿಂದ ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬುದರ ಕುರಿತು, ತುಂಗಭದ್ರಾ ನೀರಿನ ಅನಧಿಕೃತ ಬಳಕೆ ಬಗ್ಗೆ ತನಿಖೆಯಾಗಬೇಕು. ಕಾರ್ಖಾನೆ ಹೊರಸೂಸುವ ವಿಷ ಕುಡಿದು ಬದುಕುತ್ತಿದ್ದಾರೆ. 1995ರಿಂದ ಆಗಿ ಹೋದ ಬಹುತೇಕ ಎಲ್ಲ ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ. ಸಚಿವ ಸಂಪುಟದಲ್ಲಿ ಮಹಾ ಮೋಸ ನಡೆದಿದೆ'' ಎಂದು ಹರಿಹಾಯ್ದರು.

ಜೈಲ್‌ ಭರೋ ಚಳವಳಿ:

''ಜಿಂದಾಲ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಹೋರಾಟದ ಭಾಗವಾಗಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಕನ್ನಡಿಗದ ಸಮ್ಮೇಳನ ಮಾಡುತ್ತೇವೆ. ರಾಜ್ಯ ಹೆದ್ದಾರಿ ಬಂದ್‌ ಮಾಡಿ, ಜೈಲ್‌ ಭರೋ ಚಳವಳಿ ಮಾಡುತ್ತೇವೆ'' ಎಂದು ವಾಟಾಳ್‌ ನಾಗರಾಜ್‌ ಗುಡುಗಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜನ ಸೈನ್ಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ, ಉಪಾಧ್ಯಕ್ಷ ಹೊನ್ನೂರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌, ಕರವೇ ಯುವ ಶಕ್ತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್‌.ವಿಜಯಕುಮಾರ್‌, ಸ್ವಾಭಿಮಾನಿ ಕರವೇ ಅಧ್ಯಕ್ಷ ರಾಜೇಶರೆಡ್ಡಿ, ವೀರ ಕನ್ನಡಿಗ ಕರವೇ ರಾಜ್ಯ ಘಟಕದ ಅಧ್ಯಕ್ಷ ವಿರೂಪಾಕ್ಷ ಗೌಡ, ಕಲ್ಯಾಣ ಕರವೇ ರಾಜ್ಯ ಘಟಕದ ಅಧ್ಯಕ್ಷ ಜಿಲಾನ್‌ ಭಾಷಾ ಸೇರಿ ಹಲವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ