ಬಳ್ಳಾರಿ; ವಿಮ್ಸ್ನ ಶಿಲಾವಸ್ಥೆಯಲ್ಲಿರುವ ಎಂಎಸ್-1 ವಾರ್ಡ್ನಲ್ಲಿ ಬುಧವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಖಾಲಿ ವಾರ್ಡ್ನಲ್ಲಿ ಹೊತ್ತಿಕೊಂಡ ಬೆಂಕಿಯ ಹೊಗೆ ಸಮೀಪದ ವಾರ್ಡ್ಗಳಿಗೂ ಹಬ್ಬಿತು. ಅಲ್ಲಿದ್ದ ಬಾಣಂತಿಯರು ತಮ್ಮ ಹಸುಗೂಸುಗಳೊಂದಿಗೆ ಗಾಬರಿಯಲ್ಲಿ ಹೊರಗೆ ಓಡಿ ಬಂದರು. ಇತರ ರೋಗಿಗಳೂ ಆತಂಕದಲ್ಲೇ ಕಾಲಕಳೆದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಹಳೆಯ ಈ ವಾರ್ಡ್ನಲ್ಲಿ ನಿರುಪಯುಕ್ತ ಬೆಡ್ ಸೇರಿ ಆಸ್ಪತ್ರೆಯ ಇತರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು.
ನಾಲ್ಕು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ಬೆಂಕಿ ಆರಿಸಿದರು. ವಿಮ್ಸ್ ನಿರ್ದೇಶಕ ಡಾ.ಕೃಷ್ಣಸ್ವಾಮಿ, ಅಧೀಕ್ಷಕ ಡಾ.ಶ್ರೀನಿವಾಸ್, ಆಡಳಿತಾಧಿಕಾರಿ ಅನ್ನಪೂರ್ಣ ಅವರು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದರು. ಹೊಗೆ ಕಡಿಮೆಯಾದ ನಂತರವಷ್ಟೇ ಬಾಣಂತಿಯರು ಮತ್ತು ರೋಗಿಗಳು ತಾವಿದ್ದ ವಾರ್ಡ್ಗೆ ಮರಳಿದರು.
60 ವರ್ಷಗಳಷ್ಟು ಹಳೆಯದಾದ ವಿಮ್ಸ್ನ ಈ ಕಟ್ಟಡದಲ್ಲಿ ಕೆಲ ತಿಂಗಳ ಹಿಂದೆ ಚಾವಣಿ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಈ ಘಟನೆಯಿಂದ ಎಚ್ಚೆತ್ತ ವಿಮ್ಸ್ ಆಡಳಿತ, ಈ ಕಟ್ಟಡ ಬಳಕೆಗೆ ಯೋಗ್ಯವಿಲ್ಲ ಎಂದು ತಿಳಿದು, ಎಂಎಂ-1, 2, 3 ಹಾಗೂ ಎಂಎಸ್-1, 2, 3, ಪೋಸ್ಟ್ ಆಪರೇಟಿವ್ ವಾರ್ಡ್ ಮತ್ತು ಯೂರಿಯಾಲಜಿ ವಿಭಾಗಗಳನ್ನು ಬೇರೆಡೆ ಸ್ಥಳಾಂತರಿಸಿದೆ.
..................
ಹಳೆಯದಾದ ಈ ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಯಾವುದರಿಂದ ವಿದ್ಯುತ್ ಅವಘಡ ಸಂಭವಿಸಿದೆ ಎಂಬುದು ತಿಳಿದುಬಂದಿಲ್ಲ. ಅವಘಡಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲಾಗುತ್ತದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
-ಡಾ.ಕೃಷ್ಣಸ್ವಾಮಿ, ಪ್ರಭಾರಿ ನಿರ್ದೇಶಕ, ವಿಮ್ಸ್, ಬಳ್ಳಾರಿ