ಆ್ಯಪ್ನಗರ

ತುಮಕೂರು ರಸ್ತೆಯಿಂದ ಬೆಂಗಳೂರಿಗೆ ಬರುವ 20 ಜಿಲ್ಲೆಗಳ ಬಸ್‌ಗಳು ಪೀಣ್ಯದಲ್ಲೇ ಸ್ಟಾಪ್..?

ಗೊರಗುಂಟೆಪಾಳ್ಯ ಜಂಕ್ಷನ್‌ ಮೂಲಕ ಹಾದು ಹೋಗುವ ತುಮಕೂರು ಮುಖ್ಯರಸ್ತೆಯು ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚಾಗಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಸಂಚಾರ ದಟ್ಟಣೆ ತಗ್ಗಿಸಲು ಅಲ್ಪಾವಧಿ ಯೋಜನೆಗಳನ್ನು ತುರ್ತಾಗಿ ಕೈಗೊಳ್ಳಬೇಕು. ಇದರಿಂದ ಸಂಚಾರ ದಟ್ಟಣೆಯು ಶೇ 20ರಷ್ಟು ಸುಧಾರಿಸುತ್ತದೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ನಗರ ಪ್ರವೇಶಿಸುವುದನ್ನು ನಿರ್ಬಂಧಿಸಿ, ಪೀಣ್ಯ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆಗೊಳಿಸಿದರೆ ವಾಹನ ದಟ್ಟಣೆಯು ಬಹುತೇಕ ಕಡಿಮೆಯಾಗಲಿದೆ.

Edited byದಿಲೀಪ್ ಡಿ. ಆರ್. | Vijaya Karnataka 30 Jun 2022, 4:14 pm

ಹೈಲೈಟ್ಸ್‌:

  • ಸುಗಮ ಸಂಚಾರಕ್ಕೆ ಬಸ್‌ ನಿರ್ಬಂಧಾಸ್ತ್ರ..?
  • ಹೊರ ಜಿಲ್ಲೆ ಬಸ್‌ಗಳು ಪೀಣ್ಯ ನಿಲ್ದಾಣದಿಂದ ಕಾರ್ಯಾಚರಣೆ ಪ್ರಸ್ತಾವ ಮತ್ತೆ ಮುನ್ನೆಲೆಗೆ
  • ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಪ್ರದಕ್ಷಿಣೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ksrtc
ತುಮಕೂರು ರಸ್ತೆಯಿಂದ ಬೆಂಗಳೂರಿಗೆ ಬರುವ 20 ಜಿಲ್ಲೆಗಳ ಬಸ್‌ಗಳು ಪೀಣ್ಯದಲ್ಲೇ ಸ್ಟಾಪ್..?
ಬೆಂಗಳೂರು: ಬೆಂಗಳೂರು ನಗರದ ಒಳಗೆ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ನಾನಾ ಜಿಲ್ಲೆಗಳಿಗೆ ಸಾಗುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ಪೀಣ್ಯ ಬಸವೇಶ್ವರ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸುವ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದಿದೆ.
ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳ ಕುರಿತು ಪರಿಶೀಲಿಸಲು ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬಿಎಂಟಿಸಿ, ಮೆಟ್ರೋ, ಬೆಂಗಳೂರು ಸ್ಮಾರ್ಟ್‌ ಸಿಟಿ, ಪೊಲೀಸ್‌ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳ ತಂಡದ ನಗರ ಪ್ರದಕ್ಷಿಣೆ ವೇಳೆ ಈ ಬಗ್ಗೆ ಮತ್ತೆ ಚರ್ಚೆ ನಡೆಯಿತು.

Traffic Fine: ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡಿ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕಿಸಿಕೊಂಡ..!
ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ಮೊದಲಿಗೆ ಗೊರಗುಂಟೆ ಪಾಳ್ಯ ಜಂಕ್ಷನ್‌ಗೆ ಭೇಟಿ ನೀಡಿತ್ತು. 'ಗೊರಗುಂಟೆಪಾಳ್ಯ ಜಂಕ್ಷನ್‌ ಮೂಲಕ ಹಾದು ಹೋಗುವ ತುಮಕೂರು ಮುಖ್ಯರಸ್ತೆಯು ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚಾಗಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಸಂಚಾರ ದಟ್ಟಣೆ ತಗ್ಗಿಸಲು ಅಲ್ಪಾವಧಿ ಯೋಜನೆಗಳನ್ನು ತುರ್ತಾಗಿ ಕೈಗೊಳ್ಳಬೇಕು. ಇದರಿಂದ ಸಂಚಾರ ದಟ್ಟಣೆಯು ಶೇ 20ರಷ್ಟು ಸುಧಾರಿಸುತ್ತದೆ' ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

'ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ನಗರ ಪ್ರವೇಶಿಸುವುದನ್ನು ನಿರ್ಬಂಧಿಸಿ, ಪೀಣ್ಯ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆಗೊಳಿಸಿದರೆ ವಾಹನ ದಟ್ಟಣೆಯು ಬಹುತೇಕ ಕಡಿಮೆಯಾಗಲಿದೆ. ಪೀಣ್ಯ ಟರ್ಮಿನಲ್‌ನಲ್ಲಿಯೇ ಬಸ್‌ಗಳನ್ನು ನಿಲುಗಡೆ ಮಾಡಿ ಓಡಿಸುವಂತೆ ಕೆಎಸ್‌ಆರ್‌ಟಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ' ಎಂದರು.


ಈ ನಿಟ್ಟಿನಲ್ಲಿ ಕೆಲ ವರ್ಷಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರ ಪ್ರವೇಶಿಸುವುದನ್ನು ನಿರ್ಬಂಧಿಸುವ ಪ್ರಯೋಗ ಮಾಡಲಾಯಿತು. ಆದರೆ, ಖಾಸಗಿ ಬಸ್‌ಗಳನ್ನು ನಿರ್ಬಂಧಿಸದೆ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನಷ್ಟೇ ನಿಷೇಧಿಸಿದ್ದರಿಂದ ಆ ಪ್ರಯೋಗ ಯಶಸ್ವಿಯಾಗಲಿಲ್ಲ.

'ಗೊರಗುಂಟೆಪಾಳ್ಯದಲ್ಲಿ ರಸ್ತೆ ದುರಸ್ತಿ, ಶೌಚಾಲಯ, ಪಾದಚಾರಿ ಮೇಲ್ಸೇತುವೆಗಳನ್ನು ತುರ್ತಾಗಿ ನಿರ್ಮಿಸಬೇಕಿದೆ. ಅದಕ್ಕೆ ಬೇಕಿರುವ ಕಾರ್ಯ ಯೋಜನೆಯನ್ನು ಬುಧವಾರದಿಂದಲೇ ಆರಂಭಿಸಲಾಗುವುದು. ಸಂಚಾರ ದಟ್ಟಣೆ ಸಮಸ್ಯೆ ಸರಿಪಡಿಸಲು ದೀರ್ಘಕಾಲದ ಯೋಜನೆಯನ್ನು ಬಿಡಿಎ ಸಿದ್ಧಪಡಿಸಿದೆ. ಇದರ ಅನುಷ್ಠಾನದ ಸಾಧಕ - ಬಾಧಕಗಳ ಬಗ್ಗೆ ಪರಿಶೀಲಿಸಲಾಗುವುದು' ಎಂದು ರಾಕೇಶ್‌ ಸಿಂಗ್‌ ಹೇಳಿದರು.

'ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪೀಣ್ಯ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ ದೊರೆತರೆ ಸಂಚಾರ ದಟ್ಟಣೆ ಸಮಸ್ಯೆ ಸುಧಾರಿಸಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಾಯಂಡಹಳ್ಳಿ ಜಂಕ್ಷನ್‌ನಿಂದ ಬರುವ ವಾಹನಗಳು ತುಮಕೂರು ರಸ್ತೆ ಸಂಪರ್ಕಿಸಲು ಪರ್ಯಾಯ ರಸ್ತೆ ಇದೆ. ಇದನ್ನು ದುರಸ್ತಿಪಡಿಸಿ, ಮಾರ್ಗ ಬದಲಾವಣೆ ಮಾಡಿದರೆ ಸಂಚಾರ ದಟ್ಟಣೆ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಕೂಡಲೇ ರಸ್ತೆಯನ್ನು ದುರಸ್ತಿಪಡಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು' ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಡಿಎ ಆಯುಕ್ತ ರಾಜೇಶ್‌ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಹಾಗೂ ಇತರರು ಉಪಸ್ಥಿತರಿದ್ದರು.

ಗೊರಗುಂಟೆ ಪಾಳ್ಯ ಜಂಕ್ಷನ್‌

ಅಲ್ಪಾವಧಿ ಯೋಜನೆಗಳು:

* ರಸ್ತೆ ದುರಸ್ತಿ, ಪಾದಚಾರಿ ಸ್ಕೈವಾಕ್‌, ಶೌಚಾಲಯ ನಿರ್ಮಾಣ

* ಫುಟ್‌ಪಾತ್‌ ದುರಸ್ತಿ ಮತ್ತು ಪಾದಚಾರಿ ಮಾರ್ಗ ಇಲ್ಲದೆಡೆ ಹೊಸದಾಗಿ ನಿರ್ಮಾಣ

* ಬೀದಿ ದೀಪಗಳ ಅಳವಡಿಕೆ

* ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ

* ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ನಗರ ಪ್ರವೇಶಕ್ಕೆ ನಿರ್ಬಂಧ. ಪೀಣ್ಯದಿಂದಲೇ ಕಾರ್ಯಾಚರಣೆ

ದೀರ್ಘಾವಧಿ ಯೋಜನೆಗಳು:

* ಸಮಗ್ರ ಸಂಚಾರ ನಿರ್ವಹಣೆ ಯೋಜನೆ ರೂಪಿಸಲು ಬಿಡಿಎ ಆಯುಕ್ತರಿಗೆ ಸೂಚನೆ

Traffic Fine: ಟ್ರಾಫಿಕ್‌ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಹೊಸ ಸಾಫ್ಟ್‌ವೇರ್‌..!
ಹೆಬ್ಬಾಳ ಜಂಕ್ಷನ್‌ನಲ್ಲಿನ ಸರ್ವೀಸ್ ರಸ್ತೆ ಅಭಿವೃದ್ಧಿ

'ಹೆಬ್ಬಾಳ ಜಂಕ್ಷನ್‌ನಲ್ಲಿ ತುಮಕೂರು ರಸ್ತೆ ಕಡೆಯಿಂದ ಬಳ್ಳಾರಿ ರಸ್ತೆಯತ್ತ ಕಡೆಗೆ ಸಾಗುವ ಸರ್ವೀಸ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಬೇಕು. ಎಸ್ಟೀಮ್‌ ಮಾಲ್‌ ಮುಂಭಾಗದ ರಸ್ತೆಯಲ್ಲಿ ಬಸ್‌ಗಳು ನಿಲ್ಲಿಸುವುದನ್ನು ತಪ್ಪಿಸಿದರೆ, ಕೊಂಚ ಮಟ್ಟಿಗೆ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ' ಎಂದು ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

'ಸಂಜೀವಿನಿ ನಗರದ ಮೂಲಕ ಸಹಕಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಮಿಲಿಟರಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿದರೆ, ಸಹಕಾರ ನಗರದತ್ತ ತೆರಳುವ ವಾಹನ ಸವಾರರು ಪರ್ಯಾಯ ರಸ್ತೆ ಬಳಸಲಿದ್ದಾರೆ. ಇದರಿಂದ ಕೊಡಿಗೇಹಳ್ಳಿ ಸಿಗ್ನಲ್‌ ಬಳಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹರಿಸಿಕೊಂಡು ರಸ್ತೆ ದುರಸ್ತಿ ಕಾಮಗಾರಿ ಮುಗಿಸಬೇಕು' ಎಂದು ಹೇಳಿದರು.

'ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಕಡೆಯಿಂದ ಮೇಲ್ಸೇತುವೆಯಲ್ಲಿ ಬರುವ ವಾಹನಗಳು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಮೂಲಕ ಹಾದು ಹೋಗಲು ಅನುವು ಮಾಡಿಕೊಡಬೇಕು. ಮೇಲ್ಸೇತುವೆ ಅಡಿಯಲ್ಲಿ ಬರುವ ವಾಹನಗಳನ್ನು ಹೆಬ್ಬಾಳ ಮೇಲ್ಸೇತುವೆ ರಸ್ತೆಗೆ ಹೋಗಲು ಬಿಡದೆ ವಿಭಜಕ ಅಳವಡಿಸಿ, ಸರ್ವಿಸ್‌ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಬೇಕು. ನಗರದೊಳಗೆ ತೆರಳುವ ವಾಹನಗಳಿಗೆ ಹೆಬ್ಬಾಳ ಜಂಕ್ಷನ್‌ನಲ್ಲಿನ ರಾಂಪ್‌ ಮೂಲಕ ಸಂಚರಿಸಲು ಅನುವು ಮಾಡಿಕೊಟ್ಟರೆ, ದಟ್ಟಣೆ ಕಡಿಮೆಯಾಗಲಿದೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಸಂಚಾರ ಪೊಲೀಸರಿಗೆ ಸೂಚಿಸಿದರು.

ಅಲ್ಪಾವಧಿ ಯೋಜನೆಗಳು:

* ಪಾದಚಾರಿಗಳ ಜೀಬ್ರಾ ಕ್ರಾಸಿಂಗ್‌, ಬೀದಿ ದೀಪ ಅಳವಡಿಕೆ, ಪಾದಚಾರಿ ಮಾರ್ಗದ ಅಭಿವೃದ್ಧಿ

* ಎಲ್ಲ ಬಸ್‌ಗಳು ಒಂದೇ ಕಡೆ ನಿಲುಗಡೆ ಮಾಡಲು ಕ್ರಮ ವಹಿಸಬೇಕು

* ಯಾವ ಬಸ್‌ ಎಲ್ಲಿಗೆ ಸಂಚರಿಸಲಿದೆ ಎಂಬ ಬಗ್ಗೆ ಸೂಚನಾ ಫಲಕ ಅಳವಡಿಸಬೇಕು

* ರಸ್ತೆ ಬದಿಯಲ್ಲಿರುವ ಮರದ ಕೊಂಬೆಗಳನ್ನು ಕತ್ತರಿಸಬೇಕು

* ರಸ್ತೆ ವಿಭಜಕಗಳಲ್ಲಿ ಆರ್‌ಸಿಸಿ ತಡೆಗೋಡೆ ನಿರ್ಮಿಸಬೇಕು

ದೀರ್ಘಾವಧಿ ಯೋಜನೆಗಳು:

* ಹೆಬ್ಬಾಳ ಜಂಕ್ಷನ್‌ನಲ್ಲಿನ ರೈಲ್ವೆ ಹಳಿಯಡಿ ಪಾದಚಾರಿ ಅಂಡರ್‌ಪಾಸ್‌ ನಿರ್ಮಾಣ

* ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಕಡೆಗಿನ ಸರ್ವೀಸ್ ರಸ್ತೆಯ ಅಗಲೀಕರಣ

* ಬಿಡಿಎ ವತಿಯಿಂದ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣ

ಕೆ. ಆರ್‌. ಪುರದ ಟಿನ್‌ ಫ್ಯಾಕ್ಟರಿ ಜಂಕ್ಷನ್‌

'ಟಿನ್‌ ಫ್ಯಾಕ್ಟರಿ ಜಂಕ್ಷನ್‌ನ ತೂಗು ಸೇತುವೆ ಬಳಿ ಪ್ರಯಾಣಿಕರು ಬಸ್‌ಗಳಾಗಿ ಕಾದು ನಿಲ್ಲುವುದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಬಸ್‌ ಬೇ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು' ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಲ್ಪಾವಧಿ ಯೋಜನೆಗಳು:

* ಬಸ್‌ ಬೇ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ

* ಬೀದಿ ದೀಪ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ

* ರಸ್ತೆಯಲ್ಲಿ ಬಸ್‌ಗಳ ನಿಲುಗಡೆ ತಡೆಯುವುದು

* ಸೈನೇಜ್‌ಗಳ ಅಳವಡಿಕೆ

ದೀರ್ಘಾವಧಿ ಯೋಜನೆ:

* ರೈಲ್ವೆ ಸೇತುವೆ ಬಳಿ ಬಸ್‌ ಟರ್ಮಿನಲ್‌ ನಿರ್ಮಾಣ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ