ಆ್ಯಪ್ನಗರ

ನಿಲ್ಲದ 40 ಪರ್ಸೆಂಟ್‌ ಕಮಿಷನ್‌ ಹಾವಳಿ: ಪ್ರತಿಭಟನೆಗೆ ಗುತ್ತಿಗೆದಾರರ ನಿರ್ಧಾರ

ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಕೆಲಸ ಮಾಡುವುದು ಕಷ್ಟವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದುಡ್ಡಿನ ದಾಹಕ್ಕೆ ಗುತ್ತಿಗೆದಾರರು ಹೈರಾಣರಾಗುತ್ತಿದ್ದಾರೆ. 40 ಪರ್ಸೆಂಟ್‌ ಕಮಿಷನ್‌ ಕೊಟ್ಟರೆ ಕಾಮಗಾರಿ ನಡೆಸುವುದು ಹೇಗೆ? ಎಂದು ಗುತ್ತಿಗೆದಾರರು ಪ್ರಶ್ನಿಸಿದ್ದಾರೆ.

Vijaya Karnataka 11 Dec 2021, 9:49 pm
ಬೆಂಗಳೂರು: ಸರಕಾರದ ಕಾಮಗಾರಿಗಳಲ್ಲಿ ಶೇ.40ಕ್ಕೂ ಹೆಚ್ಚಿನ ಕಮಿಷನ್‌ ವಸೂಲಿ ಮಾಡಲಾಗುತ್ತಿದ್ದು ಇದನ್ನು ನಿಲ್ಲಿಸಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಸಂಘ ಮುಂದಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗುತ್ತಿಗೆದಾರರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಮಿಷನ್‌ ಕಿರುಕುಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಟೆಂಡರ್‌ ಕಮಿಷನ್ ಬಗ್ಗೆ ಪ್ರಧಾನಿಗೆ ಪತ್ರ; ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

''ಮೊದಲು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಮುಂದಿನ ಮಾರ್ಚ್ನಲ್ಲಿ 50 ಸಾವಿರ ಗುತ್ತಿಗೆದಾರರನ್ನು ಸೇರಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು'' ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

''ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಕೆಲಸ ಮಾಡುವುದು ಕಷ್ಟವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದುಡ್ಡಿನ ದಾಹಕ್ಕೆ ಗುತ್ತಿಗೆದಾರರು ಹೈರಾಣರಾಗುತ್ತಿದ್ದಾರೆ. 40 ಪರ್ಸೆಂಟ್‌ ಕಮಿಷನ್‌ ಕೊಟ್ಟರೆ ಕಾಮಗಾರಿ ನಡೆಸುವುದು ಹೇಗೆ? ಹಿಂದಿನ ಸರಕಾರಗಳಲ್ಲಿಯೂ ಕಮಿಷನ್‌ ಕೊಟ್ಟು ಗುತ್ತಿಗೆ ಪಡೆಯಲಾಗುತ್ತಿತ್ತು. ಆದರೆ 2019ರ ನಂತರ ಕಮಿಷನ್‌ ಪ್ರಮಾಣ ಮಿತಿ ಮೀರಿದೆ. ಇದರಿಂದಾಗಿಯೇ ಡಾಂಬರು ಹಾಕಿದ ಕೆಲವೇ ದಿನಗಳಲ್ಲಿ ರಸ್ತೆಗಳು ಗುಂಡಿ ಬೀಳುತ್ತಿವೆ. ಲೋಕೋಪಯೋಗಿ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿಯೂ ಕಮಿಷನ್‌ ಹಾವಳಿ ಹೆಚ್ಚಿದೆ. ಬಿಬಿಎಂಪಿಯಲ್ಲಿಯೂ ಇದು ಅಧಿಕವಾಗಿದೆ'' ಎಂದು ಅವರು ವಿವರಿಸಿದರು.

''ಸರಕಾರದ ಎಲ್ಲ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ ಮೂಲಕ ನೀಡಲಾಗುತ್ತಿದೆ. ಇದು ಕಮಿಷನ್‌ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇದು ಸರಕಾರದ ಏಜೆನ್ಸಿಯಾದರೂ ಅವರ ಬಳಿ ಎಂಜಿನಿಯರ್‌ಗಳು ಇಲ್ಲ. ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ತುರ್ತು ಕಾಮಗಾರಿಗಳನ್ನಷ್ಟೇ ಕೆಆರ್‌ಡಿಸಿಎಲ್‌ಗೆ ಕೊಡಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ 10 ಸಾವಿರ ಕೋಟಿ ಗೂ ಅಧಿಕ ಕಾಮಗಾರಿಯನ್ನು ಈ ಏಜೆನ್ಸಿ ಮೂಲಕ ನೀಡಲಾಗಿದೆ. ಇದರಿಂದ ಕಾಮಗಾರಿಗಳಲ್ಲಿ ಭಾರಿ ಅಕ್ರಮಕ್ಕೆ ಕಾರಣವಾಗಿದೆ'' ಎಂದು ಕೆಂಪಣ್ಣ ಆರೋಪಿಸಿದರು.

ಪರ್ಸೆಂಟೇಜ್ ಆರೋಪ ತನಿಖೆಗೆ ಸದನ ಸಮಿತಿ ರಚನೆ ಮಾಡಿ: ಡಿಕೆ ಶಿವಕುಮಾರ್

ದೂರು ಕೊಟ್ಟರೂ ಕಿರುಕುಳ ನಿಂತಿಲ್ಲ

ಕಮಿಷನ್‌ ದಂಧೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದರೂ ಯಾವುದೇ ಕ್ರಮ ಇಲ್ಲ. ಅವರಿಂದ ಪ್ರತಿಕ್ರಿಯೆಯೂ ಬಂದಿಲ್ಲ. ಗುತ್ತಿಗೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಲ್ಲ. ಹಾಗೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ವಾತಾವರಣ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ