ಆ್ಯಪ್ನಗರ

ಆರು ಬೋಗಿ ರೈಲು

'ನಮ್ಮ ಮೆಟ್ರೊ' ದ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಜ.28 ರಿಂದ 6 ಬೋಗಿಯ ರೈಲು ಕಾರ್ಯಾಚರಣೆ ಆರಂಭಿಸಲಿದೆ.

Vijaya Karnataka 26 Jan 2019, 5:00 am
ಬೆಂಗಳೂರು: 'ನಮ್ಮ ಮೆಟ್ರೊ' ದ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಜ.28 ರಿಂದ 6 ಬೋಗಿಯ ರೈಲು ಕಾರ್ಯಾಚರಣೆ ಆರಂಭಿಸಲಿದೆ.
Vijaya Karnataka Web green metro


ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ನೇರಳೆ ಮಾರ್ಗಕ್ಕೆ ಈಗಾಗಲೇ 6 ಬೋಗಿಯ ಮೂರು ರೈಲುಗಳು ಲಭ್ಯವಾಗಿವೆ. ಇದೇ ರೀತಿ ಹಸಿರು ಮಾರ್ಗಕ್ಕೂ 6 ಬೋಗಿ ರೈಲು ನೀಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಹಸಿರು ಮಾರ್ಗದಲ್ಲಿ ಈಗಾಗಲೇ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮೊದಲ 6 ಬೋಗಿ ರೈಲಿಗೆ ಸೋಮವಾರ ಚಾಲನೆ ನೀಡಲಾಗುತ್ತದೆ. ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ರೈಲಿಗೆ ಚಾಲನೆ ನೀಡಲಿದ್ದಾರೆ.

ಪ್ರತಿ ದಿನ ನೇರಳೆ ಮಾರ್ಗದಲ್ಲಿ ಸರಾಸರಿ 1.87 ಲಕ್ಷ, ಹಸಿರು ಮಾರ್ಗದಲ್ಲಿ 1.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಪೀಕ್‌ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ 19,400 ಹಾಗೂ ಹಸಿರು ಮಾರ್ಗದಲ್ಲಿ 9,700 ಮಂದಿ ಪ್ರಯಾಣಿಸುತ್ತಿದ್ದಾರೆ. ನೇರಳೆ ಮಾರ್ಗದಲ್ಲಿ ದಟ್ಟಣೆ ಹೆಚ್ಚಿರುವುದರಿಂದ ಮೊದಲ ಮೂರು ರೈಲುಗಳನ್ನು ಅಲ್ಲಿಗೆ ನೀಡಲಾಗಿದೆ. ಈಗ ನೇರಳೆ ಮಾರ್ಗದಲ್ಲಿ ಸ್ವಲ್ಪಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದ್ದರಿಂದ ನಾಲ್ಕನೇ 6 ಬೋಗಿ ರೈಲನ್ನು ಹಸಿರು ಮಾರ್ಗಕ್ಕೆ ನೀಡಲಾಗುತ್ತಿದೆ. ಮೂರು ಬೋಗಿಯ ರೈಲಿನಲ್ಲಿ ಒಂದೇ ಬಾರಿಗೆ 975 ಮಂದಿ ಪ್ರಯಾಣಿಸಬಹುದು. 6 ಬೋಗಿಯ ರೈಲಿನಲ್ಲಿ 2,004 ಮಂದಿ ಪ್ರಯಾಣಿಸಬಹುದು.

ಹಸಿರು ಮಾರ್ಗವು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ನೇರಳೆ ಮಾರ್ಗದಲ್ಲಿ ಮಾಡಿದಂತೆಯೇ ಹಸಿರು ಮಾರ್ಗದಲ್ಲೂ ಪೀಕ್‌ ಅವಧಿಯಲ್ಲಿ ಮಾತ್ರ 6 ಬೋಗಿಯ ರೈಲನ್ನು ಕಾರ್ಯಾಚರಿಸಲಾಗುತ್ತದೆ. ಶನಿವಾರ, ಭಾನುವಾರದಂದು 6 ಬೋಗಿಯ ರೈಲು ಕಾರ್ಯಾಚರಿಸುವುದಿಲ್ಲ.

ಬೈಯ್ಯಪ್ಪನಹಳ್ಳಿ ಡಿಪೊದಲ್ಲಿ ರೈಲಿನ ಜೋಡಣೆ ಕಾರ್ಯ ನಡೆದಿದೆ. ಅಲ್ಲಿಂದ ರೈಲನ್ನು ಮೆಜೆಸ್ಟಿಕ್‌ಗೆ ತಂದು, ಮಾರ್ಗ ಬದಲಿಸಿ ಹಸಿರು ಮಾರ್ಗಕ್ಕೆ ತರಲಾಗಿದೆ. ನೇರಳೆ ಮಾರ್ಗ 18.10 ಕಿ.ಮೀ. ಹಾಗೂ ಹಸಿರು ಮಾರ್ಗ 24.2 ಕಿ.ಮೀ. ಇದೆ. ಹಸಿರು ಮಾರ್ಗ ಹೆಚ್ಚು ಉದ್ದವಾಗಿದ್ದು, ಮೂರು ವಾರ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ