ಆ್ಯಪ್ನಗರ

75th Independence Day: ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ: ನಳಿನ್‍ಕುಮಾರ್ ಕಟೀಲ್

75th Independence Day: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 15 Aug 2022, 10:48 am

ಹೈಲೈಟ್ಸ್‌:

  • ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಧ್ವಜಾರೋಹಣ
  • ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
  • ಜಗತ್ತು ಭಾರತದ ಕಡೆಗೆ ಗೌರವದಿಂದ ನೋಡುತ್ತಿದೆ ಎಂದ ಕಟೀಲ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web nalin kumar kateel
ಬೆಂಗಳೂರು: ಭಾರತ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನರು ತ್ಯಾಗ- ಬಲಿದಾನಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ತಿಳಿಸಿದರು. ಸ್ವಾತಂತ್ರ್ಯದ ಅಮೃತೋತ್ಸವದ ಸಂದರ್ಭದಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನಮ್ಮೆಲ್ಲ ಹಿರಿಯರ ಹೋರಾಟ, ತ್ಯಾಗ ಮತ್ತು ಬಲಿದಾನದ ಪರಿಶ್ರಮದ ಪರಿಣಾಮವಾಗಿ ಸ್ವಾತಂತ್ರ್ಯ ಲಭಿಸಿದೆ. 75 ವರ್ಷಗಳ ಕಾಲ ಈ ದೇಶದ ಗಡಿಗಳನ್ನು ಕಾದಿರುವ ಸೈನಿಕರ ಪರಿಶ್ರಮದಿಂದ ಸ್ವಾತಂತ್ರ್ಯ ಉಳಿದಿದೆ ಎಂದು ಹೇಳಿದರು.
75th independence day: ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಧ್ವಜಾರೋಹಣ- ಹಿರಿಯರ ತ್ಯಾಗ, ಬಲಿದಾನ ನೆನೆದ ಕೆಪಿಸಿಸಿ ಅಧ್ಯಕ್ಷ

ಸ್ವಾತಂತ್ರ್ಯಕ್ಕಾಗಿ ದುಡಿದ ಮತ್ತು ಮಡಿದ ಎಲ್ಲ ಮಹನೀಯರಿಗೆ ಪ್ರಣಾಮಗಳು ಎಂದು ತಿಳಿಸಿದರು. 1957ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ದಿಕ್ಸೂಚಿಯಾಯಿತು. ಭಗತ್‌ ಸಿಂಗ್, ಸಾವರ್ಕರ್, ಸುಭಾಷ್‌ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿ ಪುರುಷರ ಹೋರಾಟಗಳು, ನಿರಂತರವಾದ ಬಲಿದಾನಗಳು, ಸ್ವಾತಂತ್ರ್ಯಕ್ಕಾಗಿ ರಕ್ತತರ್ಪಣದ ಪರಿಶ್ರಮ ಒಂದೆಡೆ ಇದ್ದರೆ, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಚಳವಳಿ, ಸತ್ಯಾಗ್ರಹಗಳು, ಪಾದಯಾತ್ರೆ ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆ ನೀಡಿತು ಎಂದರು.

ಬಂಕಿಮಚಂದ್ರ ಚಟರ್ಜಿ ಅವರ ವಂದೇ ಮಾತರಂ ರಾಷ್ಟ್ರಗೀತೆ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸಿತು. ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯಡಿ “ರಘುಪತಿ ರಾಘವ ರಾಜಾರಾಂ..” ಗೀತೆ ಹಳ್ಳಿಯ ಜನರ ರಾಷ್ಟ್ರಭಕ್ತಿ ಹೆಚ್ಚಿಸಿತು. ತಿಲಕರು ಪ್ರಾರಂಭಿಸಿದ ಗಣೇಶೋತ್ಸವವೂ ಪ್ರೇರಣೆ ಕೊಟ್ಟಿತು. ದೇಶಜಾಗೃತಿಯ ಭಾವನೆಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರೇರಣೆಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮ ಮುಂದುವರಿಯಿತು ಎಂದು ವಿವರಿಸಿದರು.
Eidgah Maidan: ಈದ್ಗಾ ಮೈದಾನದಲ್ಲಿ ಕೊನೆಗೂ ಹಾರಾಡಿದ ತಿರಂಗಾ, ಬಿಗಿ ಭದ್ರತೆಯೊಂದಿಗೆ ಧ್ವಜಾರೋಹಣ

ಇವತ್ತು ಭಾರತವು ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲುತ್ತಿದೆ. ಜಗತ್ತು ಭಾರತದತ್ತ ನೋಡುತ್ತಿದೆ; ಹಾಗೂ ಗೌರವದಿಂದ ಕಾಣುತ್ತಿದೆ. ದೇಶದೆಲ್ಲೆಡೆ ಇಂದು ತಿರಂಗಾ ಧ್ವಜಯಾತ್ರೆ ನಡೆಯುತ್ತಿದೆ. ಕಾರ್ಗಿಲ್ ಯುದ್ಧ, ಭಾರತ- ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದಾಗ ತಿರಂಗ ಧ್ವಜ ಎತ್ತಿ ಹಿಡಿದುದನ್ನು ನಾವು ನೋಡಿದ್ದೇವೆ. ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ತೆರವುಗೊಳಿಸುವಾಗ ತ್ರಿವರ್ಣ ಧ್ವಜಕ್ಕೆ ಇವೆರಡೂ ದೇಶಗಳ ಸೈನಿಕರು ಗೌರವ ಕೊಟ್ಟಿದ್ದರು. ಆದರೆ, ಕಾಶ್ಮೀರದಲ್ಲಿ ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಅಡ್ಡಿಯಾದುದನ್ನು ಗಮನಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಂದ ಧ್ವಜಾರೋಹಣ



ಸ್ವಾಮಿ ವಿವೇಕಾನಂದರ ಜಗದ್ವಂದ್ಯ ಭಾರತ ನಿರ್ಮಾಣದ ಅದ್ಭುತವಾದ ಕನಸು ನನಸಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂಥ ಜಗದ್ವಂದ್ಯ ಭಾರತಕ್ಕೆ ತಿರಂಗ ಧ್ವಜ ಪ್ರೇರಣೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಆಶಿಸಿದ್ದಾರೆ. ಅಂಥ ಅಮೃತಕಾಲವನ್ನು ನಾವಿಂದು ನೋಡುತ್ತಿದ್ದೇವೆ. ಜಾತಿ- ಮತ- ಪಂಥಗಳನ್ನು ಮೀರಿ ತಾಯಿ ಭಾರತಿಯ ಆರಾಧನೆ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿ, ಮನೆಮನಗಳಲ್ಲಿ ತಿರಂಗ ಧ್ವಜ ಹಾರಾಟ ನಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು.
75th Independence Day: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು

ಕೋವಿಡ್ ಸಂದರ್ಭದಲ್ಲಿ ಜಗತ್ತು ಭಾರತದತ್ತ ನೋಡಿತು. ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತವು ಸ್ವಾಭಿಮಾನಿ ರಾಷ್ಟ್ರವೆನಿಸಿದೆ. ಕೋವಿಡ್‍ಗೆ 160 ಕೋಟಿ ಲಸಿಕೆಗಳನ್ನು ದೇಶವು ಉಚಿತವಾಗಿ ನೀಡಿದೆ. ಅಮೃತೋತ್ಸವವು ಶುಭ ತರಲಿ ಎಂದು ಹಾರೈಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ಮಾಲಿಕಯ್ಯ ಗುತ್ತೇದಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು, ಪದಾಧಿಕಾರಿಗಳು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ