ಆ್ಯಪ್ನಗರ

ಅಪಹೃತ ನಾಯಿ 100 ಕಿ.ಮೀ ಪ್ರಯಾಣ ಬಳಿಕ ಮನೆಗೆ ವಾಪಸ್‌

ರಾಟ್‌ವಿಲೆರ್‌ ತಳಿಯ ನಾಯಿ ಬಬ್ಲು ಗಿರಿನಗರದಿಂದ ಜನವರಿ 28 ರಂದು ಕಾಣೆಯಾಗಿ ಮಾಲೀಕ ಮತ್ತು ಪೊಲೀಸರಿಗೆ ಆತಂಕ ಹುಟ್ಟಿಸಿತ್ತು. ಕೆಲವು ದಿನಗಳ ಬಳಿಕ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿದೆ.

Vijaya Karnataka Web 23 Feb 2018, 4:15 pm
ಬೆಂಗಳೂರು: ರಾಟ್‌ವಿಲೆರ್‌ ತಳಿಯ ನಾಯಿ ಬಬ್ಲು ಗಿರಿನಗರದಿಂದ ಜನವರಿ 28 ರಂದು ಕಾಣೆಯಾಗಿ ಮಾಲೀಕ ಮತ್ತು ಪೊಲೀಸರಿಗೆ ಆತಂಕ ಹುಟ್ಟಿಸಿತ್ತು. ಕೆಲವು ದಿನಗಳ ಬಳಿಕ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯ ಜತೆ ಬಬ್ಲು ಪೊಲೀಸ್‌ ಠಾಣೆಗೆ ಬಂದಿದ್ದು, ಅಪಹರಣಕಾರರ ಸುಳಿವು ಮಾತ್ರ ಸಿಕ್ಕಿಲ್ಲ.
Vijaya Karnataka Web abducted and found a bengaluru rottweilers 100km long story
ಅಪಹೃತ ನಾಯಿ 100 ಕಿ.ಮೀ ಪ್ರಯಾಣ ಬಳಿಕ ಮನೆಗೆ ವಾಪಸ್‌


ಗಿರಿನಗರದ ನಿವಾಸಿಯಾಗಿರುವ ಕೃಷ್ಣ ವೈ.ಬಿ. ಅವರು ಸಾಕಿರುವ ನಾಲ್ಕುವರೆ ವರ್ಷದ ಈ ನಾಯಿ ಎಂಟು ದಿನಗಳಲ್ಲಿ ನೂರು ಕಿ.ಮೀ ಪ್ರಯಾಣಿಸಿದೆ.

ನಾಯಿ ಕಾಣೆಯಾದ ದಿನವೇ ಮಾಲೀಕ ಕೃಷ್ಣ ಅವರು ಪೊಲೀಸರಿಗೆ ದೂರು ನೀಡಿದ್ದರು. ಬೈಕ್‌ನಲ್ಲಿ ಬಂದ ವ್ಯಕ್ತಿಗಳು ನಾಯಿಯನ್ನು ಎತ್ತಿಕೊಂಡು ಹೋಗಿರುವುದು ಮನೆಯ ಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಬೈಕ್‌ ಸವಾರ ನಾಯಿಗೆ ಬಿಸ್ಕೆಟ್‌ ತೋರಿಸಿದ್ದು, ಹಿಂಬದಿ ಸವಾರ ಎತ್ತಿಕೊಂಡು ತೊಡೆಯಲ್ಲಿ ಕೂರಿಸಿಕೊಂಡಿದ್ದ, ವೇಗವಾಗಿ ಬೈಕ್‌ ಚಲಿಸಿರುವುದು ವೀಡಿಯೊದಲ್ಲಿ ರೆಕಾರ್ಡ್‌ ಆಗಿತ್ತು.

ಪ್ರತಿದಿನ ಬಬ್ಲುವನ್ನು ಮುದ್ದಿಸುತ್ತಿದ್ದ ಆಟೊ ಚಾಲಕ ರವೀಂದ್ರ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸಲು ಮನೆಗೆ ಹೋಗಿದ್ದು, ಮನೆ ಲಾಕ್‌ ಆಗಿತ್ತು. ಮಾಲೀಕ ಕೃಷ್ಣ ಅವರು ಪತ್ರಿಕೆ ಮತ್ತು ಟಿವಿಯಲ್ಲಿ ಜಾಹೀರಾತು ನೀಡಿ ನಾಯಿಯನ್ನು ಪತ್ತೆ ಮಾಡಿದವರಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು.

ಫೆ. ಮೂರರಂದು ದೊಡ್ಡಬಳ್ಳಾಪುರದ ಬೂಚನಹಳ್ಳಿಯಲ್ಲಿ ಅರ್ಚಕ ಉಮೇಶ್‌ ಭಟ್‌ ಎಂಬವರು ಪೊಲೀಸ್‌ ಠಾಣೆಗೆ ಹೋಗಿದ್ದು, ಬಬ್ಲು ಅವರನ್ನು ಹಿಂಬಾಲಿಸಿತ್ತು. ಪೊಲೀಸರು ನಾಯಿ ಬಗ್ಗೆ ಕೇಳಿದಾಗ, ಯಾರೋ ಕಳೆದ ರಾತ್ರಿ ಕದ್ದು ತಂದು ತನ್ನ ಮನೆ ಬಳಿ ಬಿಟ್ಟಿರುವುದಾಗಿ ಅವರು ಹೇಳಿದರು.

ಟಿವಿಯಲ್ಲಿ ನಾಯಿ ಪತ್ತೆಗಾಗಿ ಜಾಹೀರಾತು ನೀಡಿರುವುದನ್ನು ಪೊಲೀಸರಿಗೆ ತಿಳಿಸಿದ ಅವರು ಅದರಲ್ಲಿದ್ದ ಮೊಬೈಲ್‌ ನಂಬರ್‌ ಕೂಡ ನೀಡಿದ್ದರು. ಹೀಗಾಗಿ ದೊಡ್ಡಬಳ್ಳಾಪುರ ಪೊಲೀಸರು ಗಿರಿನಗರ ಪೊಲೀಸರನ್ನು ಸಂಪರ್ಕಿಸಿ ವಾಟ್ಸಾಪ್‌ನಲ್ಲಿ ನಾಯಿಯ ಪೋಟೊ ಕಳಿಸಿದ್ದರು. ಅದು ಬಬ್ಲುವಿನದೇ ಎಂಬುದು ಖಾತರಿಯಾಗಿತ್ತು.

ವಿಷಯ ತಿಳಿದ ಬಬ್ಲು ಮಾಲೀಕ ಕೃಷ್ಣ ಅವರು ದೊಡ್ಡಬಳ್ಳಾಪುರ ಠಾಣೆಗೆ ಹೋಗಿ ಕರೆ ತಂದಿದ್ದಾರೆ. ಮರುದಿನ ಪೊಲೀಸರು ಆಟೊ ಚಾಲಕ ರವೀಂದ್ರನ ವಿಚಾರಣೆ ನಡೆಸಿದಾಗ ಬಬ್ಲುವನ್ನು ಕದ್ದಿರುವುದು ಒಪ್ಪಿಕೊಂಡಿದ್ದಾನೆ. ತನ್ನ ಸ್ನೇಹಿತ ದೊಡ್ಡಬಳ್ಳಾಪುರಕ್ಕೆ ಒಯ್ದು ಮತ್ತೊಬ್ಬನಿಗೆ ನೀಡಿದ್ದಾನೆ ಎಂದು ತಿಳಿಸಿದ್ದ. ಟಿವಿ ಜಾಹೀರಾತು ನೋಡಿ ಹೆದರಿ ಅದನ್ನು ಅರ್ಚಕರ ಮನೆಯ ಬಳಿ ಸ್ನೇಹಿತ ಬಿಟ್ಟಿದ್ದ. ಆದರೆ ಆತ ಯಾರೆಂಬುದು ಈವರೆಗೆ ಪತ್ತೆಯಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ