ಆ್ಯಪ್ನಗರ

ಅಧಿಕಾರಿಗೆ ಜೈಲು, ಭ್ರಷ್ಟರಿಗೆ ನಡುಕ; ಶೋಧದ ಬೆನ್ನಲ್ಲೇ ಸೆರೆಮನೆಗೆ, ಎಸಿಬಿ ಜೈಲಿಗಟ್ಟಿದ ಮೊದಲ ಸರಕಾರಿ ನೌಕರ!

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್ ಜೈಲು ಸೇರಿದ್ದಾರೆ. ಕಾನೂನುಬದ್ಧ ವೇತನ, ಇನ್ನಿತರ ಆದಾಯದಿಂದ ಸಂಪಾದಿಸಿದ ಹಣ, ಆಸ್ತಿ ಹಾಗೂ ಸೈಮನ್‌ ಅವರು ಹಾಲಿ ಹೊಂದಿರುವ ಆಸ್ತಿಯ ಮೌಲ್ಯಮಾಪನ ನಡೆಸಿದಾಗ ತಮ್ಮ ಆದಾಯಕ್ಕೂ ಮೀರಿ 2.28 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದಾರೆ. ಅಸಮತೋಲನ ಆಸ್ತಿ ಪ್ರಮಾಣ ಶೇ.257.46 ಎಂದು ಎಸಿಬಿ ತಿಳಿಸಿದೆ.

Vijaya Karnataka Web 17 Mar 2021, 7:04 am

ಹೈಲೈಟ್ಸ್‌:

  • ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಗೆ ಸೆರೆಮನೆ ವಾಸ
  • ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಮೊದಲ ಬಾರಿಗೆ ಜೈಲು ಸೇರಿದ ಸರಕಾರಿ ನೌಕರ ಎಂಬ ಕುಖ್ಯಾತಿಗೊಳಗಾಗಿದ್ದಾರೆ
  • ಮಾ. 9 ರಂದು ಸೈಮನ್‌ ಅವರ ಮನೆ ಸೇರಿ ವಿವಿಧೆಡೆ ಎಸಿಬಿ ದಾಳಿ, ಆದಾಯಕ್ಕೂ ಮೀರಿ 2.28 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ತಿ ಪತ್ತೆ
  • ಶೋಧದ ವೇಳೆ ಸೈಮನ್‌ ವಿಚಾರಣೆಗೆ ಸಹಕಾರ ನೀಡಲಿಲ್ಲ. ಸೂಕ್ತ ಮಾಹಿತಿ ನೀಡಿಲ್ಲವಾದ ಕಾರಣ ಬಂಧನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BMTF Inspector Victor Simon
ಮಂಜುನಾಥ ನಾಗಲೀಕರ್‌ ಬೆಂಗಳೂರು
ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಮೊದಲ ಬಾರಿಗೆ ಜೈಲು ಸೇರಿದ ಸರಕಾರಿ ನೌಕರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
ಮಾ. 9 ರಂದು ಸೈಮನ್‌ ಅವರ ಮನೆ ಸೇರಿ ವಿವಿಧೆಡೆ ಎಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಪತ್ತೆಯಾದ ಆಸ್ತಿಯ ಮೌಲ್ಯಮಾಪನ ಮಾಡಲಾಗಿದೆ. ಕಾನೂನುಬದ್ಧ ವೇತನ, ಇನ್ನಿತರ ಆದಾಯದಿಂದ ಸಂಪಾದಿಸಿದ ಹಣ, ಆಸ್ತಿ ಹಾಗೂ ಸೈಮನ್‌ ಅವರು ಹಾಲಿ ಹೊಂದಿರುವ ಆಸ್ತಿಯ ಮೌಲ್ಯಮಾಪನ ನಡೆಸಿದಾಗ ತಮ್ಮ ಆದಾಯಕ್ಕೂ ಮೀರಿ 2.28 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದಾರೆ. ಅಸಮತೋಲನ ಆಸ್ತಿ ಪ್ರಮಾಣ ಶೇ.257.46 ಎಂದು ಎಸಿಬಿ ತಿಳಿಸಿದೆ.

ಶೋಧದ ವೇಳೆ ಸೈಮನ್‌ ವಿಚಾರಣೆಗೆ ಸಹಕಾರ ನೀಡಲಿಲ್ಲ. ಸೂಕ್ತ ಮಾಹಿತಿ ನೀಡಿಲ್ಲವಾದ ಕಾರಣ ಬಂಧಿಸಲಾಯಿತು. ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಗತ್ಯ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ. ಆರೋಪಿ ಅಧಿಕಾರಿಯನ್ನು ಮಾ.15ರಂದು ಭ್ರಷ್ಟಾಚಾರ ಪ್ರಕರಣಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಎಸಿಬಿ ಆಕ್ಷೇಪಣೆ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಸೈಮನ್‌ ಅವರನ್ನು ನ್ಯಾಯಾಲಯ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಕೋರಮಂಗಲದ ಎನ್‌ಜಿವಿಯಲ್ಲಿ ಒಂದು ಫ್ಲ್ಯಾಟ್‌, ಮೈಸೂರಿನಲ್ಲಿ ದೊಡ್ಡ ಮನೆ, 2 ನಿವೇಶನಗಳು, ಹಂಪಾಪುರದಲ್ಲಿ 2 ಕಡೆ ಸುಮಾರು ಹತ್ತು ಎಕರೆ ಕೃಷಿ ಜಮೀನು, 1 ಕೋಟಿ ರೂ. ಬೆಲೆಯ ಬಾಂಡ್‌ ಪೇಪರ್‌, ಲಾಕರ್‌ಗಳಲ್ಲಿ ಅರ್ಧ ಕೆ.ಜಿ. ಚಿನ್ನ, ಬೆಂಗಳೂರಿನ ವಾಸದ ಮನೆಯಲ್ಲಿ 7.26 ಲಕ್ಷ ರೂ. ನಗದು, 22.36 ಲೀಟರ್‌ ವಿದೇಶಿ ಮದ್ಯ, 1 ಹುಂಡೈ ವರ್ನಾ ಕಾರು, 21.61 ಲಕ್ಷ ರೂ. ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದವು. ಯೂರೋಪ್‌ ಸೇರಿದಂತೆ ಹಲವು ಬಾರಿ ವಿದೇಶ ಪ್ರವಾಸ ಮಾಡಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.

ಅಧಿಕಾರಿ ಅಮಾನತು
ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳು ಬಂಧಿಸಿದ 48 ತಾಸುಗಳಲ್ಲಿ ನಿಯಮಾನುಸಾರ ಅಮಾನತುಗೊಳ್ಳುತ್ತಾರೆ. ಈ ಪ್ರಕರಣ ಮತ್ತು ಶೋಧಕ್ಕೆ ಸಂಬಂಧಿಸಿದಂತೆ ಬುಧವಾರ ಬಿಎಂಟಿಎಫ್‌ನ ಎಡಿಜಿಪಿ ಕಚೇರಿಗೆ ಬುಧವಾರ ವರದಿ ನೀಡಲಾಗುತ್ತದೆ ಎಂದು ಎಸಿಬಿ ಎಸ್ಪಿ ಕುಲ್ದೀಪ್‌ ಜೈನ್‌ ತಿಳಿಸಿದರು.

ಭ್ರಷ್ಟರಿಗೆ ಭಯ
ಈ ಪ್ರಕರಣದಿಂದ ಭ್ರಷ್ಟ ಅಧಿಕಾರಿಗಳಿಗೆ ಜೈಲಿನ ಭಯ ಆರಂಭವಾಗಿದೆ. ಎಸಿಬಿ ಕೇಸ್‌ ದಾಖಲಿಸಿ ಕೋಟಿಗಟ್ಟಲೆ ಅಕ್ರಮ ಆಸ್ತಿ ಸಿಕ್ಕರೂ ಆರಾಮವಾಗಿ ಮನೆಯಲ್ಲೇ ಇರಬಹುದು. ಜೈಲಿನ ಭೀತಿಯೇ ಇಲ್ಲ ಎಂಬ ಭಂಡತನವನ್ನು ಈ ಪ್ರಕರಣ ಅಂತ್ಯಗೊಳಿಸುವ ನಿರೀಕ್ಷೆ ಹುಟ್ಟಿಸಿದೆ.

ಸಾಮಾನ್ಯವಾಗಿ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಗಳಲ್ಲಿ ಆರೋಪಿಗಳನ್ನು ಅಧಿಕಾರಿಗಳು ಬಂಧಿಸುವುದಿಲ್ಲ. ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸುತ್ತಾರೆ.

ವಿಚಾರಣೆ ಮುಗಿಯಲು ಹತ್ತಾರು ವರ್ಷ
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಕೇಸ್‌ಗಳ ತನಿಖೆ ಮುಗಿಯಲು ವರ್ಷಗಳೇ ಬೇಕು. ಅದಾದ ಬಳಿಕ ಸರಕಾರದಿಂದ ಆರೋಪಪಟ್ಟಿ ಸಲ್ಲಿಸಲು ಅನುಮತಿ ಪಡೆಯಬೇಕು. ಅನುಮತಿ ಸಿಕ್ಕ ಬಳಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ. ವಿಚಾರಣೆ ಮುಗಿಯಲು ಹತ್ತಾರು ವರ್ಷಗಳು ಬೇಕು. ಅಷ್ಟೊತ್ತಿಗೆ ಅಧಿಕಾರಿಗಳು ತಮ್ಮ ಸೇವೆಯಿಂದ ನಿವೃತ್ತರಾಗಿರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ