ಆರ್.ತುಳಸಿಕುಮಾರ್ ಬೆಂಗಳೂರು
ಯಲಹಂಕ ಸಮೀಪದ ಭಾರತೀಯ ವಾಯುನೆಲೆಯಲ್ಲಿ ನಿಗದಿಯಾಗಿರುವ ವೈಮಾನಿಕ ಪ್ರದರ್ಶನ ಆರಂಭಕ್ಕೆ ಕೇವಲ ಹತ್ತೇ ದಿನ ಬಾಕಿ ಉಳಿದಿದೆ. ಆದರೆ ಏರ್ ಶೋ ನಡೆಯಲಿರುವ ತಾಣದ ಸುತ್ತಲಿನ ಸಂಪರ್ಕ ರಸ್ತೆಗಳು ದುರಸ್ತಿಯಾಗಿಯೇ ಇಲ್ಲ.
ಪ್ರತಿ ಬಾರಿ ಏರ್ ಶೋ ನಡೆಯುವ ವೇಳೆ ಯಲಹಂಕ ವಾಯುನೆಲೆ ಹಾಗೂ ದೇವನಹಳ್ಳಿ ಏರ್ಪೋರ್ಟ್ ಸುತ್ತಲಿನ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಲಾಗುತ್ತದೆ. ಈ ಬಾರಿ ಸರಕಾರ 30 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಸೂಚನೆಯ ಹೊರತಾಗಿಯೂ ಬಾಕಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರು ತಿಣುಕಾಡುತ್ತಿದ್ದಾರೆ. ಅಧಿಕಾರಿಗಳ ಮೇಲ್ವಿಚಾರಣೆ ಕೊರತೆಯಿಂದ ಕಾಮಗಾರಿ ನಿಧಾನಗೊಂಡಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಸಂಪರ್ಕ ರಸ್ತೆಗಳ ಜತೆಗೆ ಜಂಕ್ಷನ್ಗಳ ಅಭಿವೃದ್ಧಿ ಸಹಿತ ಇನ್ನಿತರ ಮೂಲಸೌಕರ್ಯವನ್ನು ಕಲ್ಪಿಸಬೇಕಿದೆ. ಕಡಿಮೆ ಅವಧಿ ಗುತ್ತಿಗೆ ನೀಡಿ ಕಾಮಗಾರಿ ನಡೆಸಲು ಅವಕಾಶ ಇದ್ದರೂ, ಬಿಬಿಎಂಪಿ ಹಾಗೂ ಪಿಡಬ್ಲ್ಯುಡಿ ಇಲಾಖೆ ಮುತುವರ್ಜಿ ವಹಿಸದಿರುವುದು ಕಾಮಗಾರಿಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗಕ್ಕೆ ಬಿಡದ ಗ್ರಹಣ
ಪ್ರದರ್ಶನದ ಐದೂ ದಿನವೂ ಏರ್ಪೋರ್ಟ್ ರಸ್ತೆ(ಬಳ್ಳಾರಿ ರಸ್ತೆ)ಯಲ್ಲಿ ಸಂಚಾರ ವ್ಯತ್ಯಯವಾಗುವ ಕಾರಣ ಹೆಣ್ಣೂರು-ಬಾಗಲೂರು-ಮೈನಲನಹಳ್ಳಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಈ ಮಾರ್ಗದಲ್ಲಿ ಮೈನಹಳ್ಳಿಯಿಂದ ಬೇಗೂರು ವರೆಗಿನ ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಹಿಂದಿನ ಬಾರಿಯ ಏರ್ ಶೋ ವೇಳೆ ಸಂಚಾರ ವ್ಯತ್ಯಯವಾದಾಗ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸರಕಾರ ಹೇಳಿತ್ತಾದರೂ, ತನ್ನ ಮಾತು ಉಳಿಸಿಕೊಂಡಿಲ್ಲ. ಭುಸ್ವಾಧೀನ ಕಾರಣದಿಂದ ಹಲವು ಬಾರಿ ಕಾಮಗಾರಿ ಆರಂಭಿಸಿ ಸ್ಥಗಿತಗೊಂಡ ಪರಿಣಾಮ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಈ ರಸ್ತೆಯ ಒಂದು ಬದಿಯಲ್ಲಿ ಸಣ್ಣ ನೀರಾವರಿ ಇಲಾಖೆಯು ಕೆರೆ ತುಂಬಿಸುವ ಯೋಜನೆಗಾಗಿ ಕೊಳವೆ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಣ್ಣೂರು, ಚಾಗಲಟ್ಟಿ ಸಹಿತ ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಭಾಗದಲ್ಲಿ ಮಾತ್ರ ಡಾಂಬರು ಹಾಕಲಾಗಿದೆ. ಉಳಿದೆಡೆ ಕಾಮಗಾರಿ ಪೂರ್ಣಗೊಂಡರಷ್ಟೇ ಡಾಂಬರು ಹಾಕುವ ನಿಲುವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ಅರೆ ಬರೆ ಕಾಮಗಾರಿ?
ಏರ್ಪೋರ್ಟ್ ರಸ್ತೆಯಿಂದ ಆರಂಭವಾಗುವ ಕೋಗಿಲು ಕ್ರಾಸ್-ಬೆಳ್ಳಳ್ಳಿ-ಕಣ್ಣೂರು ಮಾರ್ಗದಲ್ಲಿ ರಸ್ತೆ ವಿಭಜಕ ಇದ್ದಲ್ಲಿ ಮಾತ್ರ ಸೌಂದರ್ಯಿಕರಣದ ಕೆಲಸ ಪೂರ್ಣಗೊಂಡಿದೆ. ಅಲ್ಲಿಲ್ಲಿ ಹೊಸ ಗಿಡಗಳನ್ನು ನೆಡಲಾಗಿದ್ದರೂ, ರಸ್ತೆಬದಿ ದು:ಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗ ದುರಸ್ತಿಯಾಗಿಲ್ಲ. ಬೆಳ್ಳಳ್ಳಿ ಬಳಿ ಕೊಳವೆ ಅಳವಡಿಸಲು ರಸ್ತೆ ಅಗೆದಿದ್ದರೂ, ಮರು ಡಾಂಬರು ಹಾಕಿಲ್ಲ. ರಾಜಾನುಕುಂಟೆ-ಬೆಟ್ಟಹಲಸೂರು ಮಾರ್ಗದಲ್ಲಿ ಹೆಚ್ಚಿನ ರಸ್ತೆಗುಂಡಿಗಳು ಉಂಟಾಗಿದ್ದು, ದುರಸ್ತಿಗೊಳಿಸುವ ಕೆಲಸ ಇನ್ನೂ ಆರಂಭವಾಗಿಯೇ ಇಲ್ಲ. ನಾಗವಾರ-ರೇವಾ ಕಾಲೇಜ್ ರಸ್ತೆ ಮಾರ್ಗದಲ್ಲಿನ ಅರ್ಧದಷ್ಟು ಭಾಗ ಉತ್ತಮ ಸ್ಥಿತಿಯಲ್ಲಿದೆ. ಥಣಿಸಂದ್ರ ಜಂಕ್ಷನ್ನಲ್ಲಿ ಒಂದು ಕಿ.ಮೀ. ಉದ್ದಕ್ಕೂ ರಸ್ತೆ ಹಾಳಾಗಿದೆ. ಅಲ್ಲಲ್ಲಿ ರಸ್ತೆಬದಿ ಕಟ್ಟಡ ತ್ಯಾಜ್ಯ ಸುರಿದಿದ್ದು, ತೆರವುಗೊಳಿಸುವ ಕೆಲಸ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಏರ್ ಶೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ, ಸೌಂದರ್ಯೀಕರಣದ ಜತೆ ನಾನಾ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯ ಪ್ರಗತಿಯಲ್ಲಿದೆ. ಕೆಲಸ ನಿಧಾನಗೊಂಡಿರುವೆಡೆ ಕಾಮಗಾರಿಯನ್ನು ಚುರುಕುಗೊಳಿಸಲು ಕ್ರಮ ವಹಿಸಲಾಗುವುದು.
- ಮಹೇಂದ್ರ ಜೈನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ
ಸರಕಾರ ಗುರುತಿಸಿರುವ ಪರ್ಯಾಯ ಮಾರ್ಗವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ರಾತ್ರಿ ವೇಳೆ ಸುರಕ್ಷಿತ ಸಂಚಾರಕ್ಕಾಗಿ ಬೀದಿ ದೀಪ ಅಳವಡಿಸಿಲ್ಲ. ಏರ್ ಶೋ ನಡೆದಾಗ ಮಾತ್ರ ಈ ಮಾರ್ಗ ನೆನಪಾಗುತ್ತಿದ್ದು, ಉಳಿದ ಅವಧಿಯಲ್ಲಿ ಗುಂಡಿ ಮುಚ್ಚಲು ಅಧಿಧಿಕಾರಿಗಳು ಇತ್ತ ಸುಳಿಯುವುದಿಲ್ಲ.
- ಎಸ್.ಜಿ.ಮೂರ್ತಿ, ಸಾತನೂರು ನಿವಾಸಿ
ಗಮನಿಸುವುದು: ಚಿತ್ರ ಇದೆ.