ಆ್ಯಪ್ನಗರ

ಜನತಾ ಬ್ಯಾಂಕ್‌ ವಿರುದ್ಧ ಎಫ್‌ಐಆರ್‌ ದಾಖಲು ಹಣ ವಾಪಸ್‌ ಪಡೆಯಲು ಮುಗಿಬಿದ್ದ ಠೇವಣಿದಾರರು

ಠೇವಣಿದಾರರ ಕೋಟಿಗಟ್ಟಲೆ ಹಣವನ್ನು ನಿಯಮಬಾಹಿರವಾಗಿ ಮನೆ ನಿರ್ಮಾಣ ಕಂಪನಿಗಳಿಗೆ ಸಾಲವಾಗಿ ಕೊಟ್ಟಿರುವ ಆರೋಪದ ಮೇಲೆ ಜನತಾ ಸೇವಾ ಕೋ-ಆಪರೇಟೀವ್‌ ಬ್ಯಾಂಕ್‌ ವಿರುದ್ಧ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Vijaya Karnataka Web 28 Jan 2020, 7:47 am
ಬೆಂಗಳೂರು: ಠೇವಣಿದಾರರ ಕೋಟಿಗಟ್ಟಲೆ ಹಣವನ್ನು ನಿಯಮಬಾಹಿರವಾಗಿ ಮನೆ ನಿರ್ಮಾಣ ಕಂಪನಿಗಳಿಗೆ ಸಾಲವಾಗಿ ಕೊಟ್ಟಿರುವ ಆರೋಪದ ಮೇಲೆ ಜನತಾ ಸೇವಾ ಕೋ-ಆಪರೇಟೀವ್‌ ಬ್ಯಾಂಕ್‌ ನ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ವಿರುದ್ಧ ವಿಜಯನಗರ ಠಾಣೆಯಲ್ಲಿ ಸೋಮವಾರ ಸಂಜೆ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web fir.


ಬ್ಯಾಂಕ್‌ನ ಠೇವಣಿದಾರರು ಹಾಗೂ ಸಾಲಕ್ಕೆ ಜಾಮೀನುದಾರರೂ ಆಗಿರುವ ಆರ್‌.ಕುಮಾರ್‌ ಎನ್ನುವವರು ಬ್ಯಾಂಕ್‌ನ ಅವ್ಯವಹಾರಗಳ ತನಿಖೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇವರ ದೂರಿನ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡ ಬಳಿಕ ದೂರುದಾರರ ಪರವಾಗಿ ಹಿರಿಯ ನ್ಯಾಯವಾದಿ ಸಿ.ಹೆಚ್‌.ಹನುಮಂತರಾಯ ವಾದಿಸಿದ್ದರು. ಇವರ ವಾದ ಕೇಳಿದ ಬಳಿಕ ನ್ಯಾಯಾಲಯ ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಶುಕ್ರವಾರ ವಿಜಯನಗರ ಠಾಣೆ ಪೊಲೀಸರಿಗೆ ಸೂಚಿಸಿತ್ತು. ಈ ಸೂಚನೆಯಂತೆ ವಿಜಯನಗರ ಠಾಣೆಯಲ್ಲಿ ಸೋಮವಾರ ಸಂಜೆ ಎಫ್‌ಐಆರ್‌ ದಾಖಲಾಗಿದೆ.

ಮಾರ್ಚ್ 30ರೊಳಗೆ ವರದಿ
ಎಫ್‌ಐಆರ್‌ ದಾಖಲಿಸಿಕೊಂಡ ಬಳಿಕ ಮಾರ್ಚ್ 30ರ ಒಳಗಾಗಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಬ್ಯಾಂಕ್‌ನ ಅಧ್ಯಕ್ಷ ಸಿ.ರಾಮು ಹಾಗೂ ನಿರ್ದೇಶಕರುಗಳಾದ ಎಚ್‌.ಸಿ.ಗೋಪಾಲ್‌, ಶಾಮನೂರು ಎನ್‌.ಸಿ, ಸಿದ್ದಪ್ಪ.ಜಿ, ಮರಿಯಪ್ಪ.ಪಿ, ವೆಂಕಟೇಶ್‌ ಮೂರ್ತಿ.ಪಿ.ಎಲ್‌, ಜಯರಾಂ, ಶಿವಲಿಂಗಯ್ಯ, ಸುಮಿತ್ರ, ಜಯರಾಂ, ರಾಜಮೂರ್ತಿ, ಮಂಜುನಾಥ್‌ ಹಾಗೂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭಾಗ್ಯ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಬಹುಕೋಟಿ ಬೇನಾಮಿ ಸಾಲ ನೀಡಿದ ಆರೋಪ, ಜನತಾ ಸೇವಾ ಬ್ಯಾಂಕ್‌ ವಿರುದ್ಧ ತನಿಖೆಗೆ ಆದೇಶ

ಯಾವ ಸೆಕ್ಷನ್‌ಗಳು
ನ್ಯಾಯಾಲಯದ ಸೂಚನೆಯಂತೆ ಭಾರತೀಯ ದಂಡ ಸಂಹಿತೆ ಕಲಂ 417, 418, 419, 420, 423, 464, 465, 120ಬಿ ಅಡಿಯಲ್ಲಿಎಫ್‌ಐಆರ್‌ ದಾಖಲಾಗಿದೆ.

ಮುಗಿಬಿದ್ದ ಠೇವಣಿದಾರರು
ಬ್ಯಾಂಕ್‌ ಅವ್ಯವಹಾರದ ಬಗ್ಗೆ ತನಿಖೆಗೆ ನ್ಯಾಯಾಲಯ ತನಿಖೆಗೆ ಸೂಚನೆ ನೀಡಿರುವ ಸಂಗತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಸೋಮವಾರ ಬೆಳಗ್ಗೆಯಿಂದ ಠೇವಣಿದಾರರು ಬ್ಯಾಂಕ್‌ಗೆ ಮುಗಿಬಿದ್ದು ಆತಂಕ ತೋಡಿಕೊಂಡಿದ್ದಾರೆ. ಆದರೆ, ಎಲ್ಲಾ ಠೇವಣಿದಾರರಿಗೂ ಸಮಾಧಾನಕರವಾಗಿ ಉತ್ತರ ನೀಡಿರುವ ಬ್ಯಾಂಕ್‌, ಆಡಳಿತ ಮಂಡಳಿ ಕೊಟ್ಟಿರುವ ಸಾಲ ವಸೂಲಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಲ ವಸೂಲಿಗೆ ಮುಂದಾಗಿದ್ದಕ್ಕೇ ಬ್ಯಾಂಕ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಠೇವಣಿದಾರರ ಹಣ ಸುರಕ್ಷಿತವಾಗಿದೆ. ಬ್ಯಾಂಕ್‌ ಕೊಟ್ಟಿರುವ ಪ್ರತೀ ಪೈಸೆ ಸಾಲವನ್ನೂ ವಸೂಲಿ ಮಾಡಲಾಗುವುದು ಎಂದು ಧೈರ್ಯ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ