ಆ್ಯಪ್ನಗರ

ಮಕ್ಕಳಿಗೆ ಇಷ್ಟವಾಗದ ಅಂಗನವಾಡಿ ಮೆನು

ನಂಗೆ ಪೂರಿ ಇಷ್ಟ’ ಎನ್ನುತ್ತಾರೆ ಕೆಲವರು. ‘ನಂಗಂತೂ ಚಪಾತಿ ಮತ್ತೆ ಇಡ್ಲಿ ಇಷ್ಟ’ ಎನ್ನುತ್ತಾರೆ ಇನ್ನೂ ಕೆಲವರು. ಮತ್ತೆ ಕೆಲವರು ದೋಸೆ ಬೇಕು ಎನ್ನುತ್ತಾರೆ.

Vijaya Karnataka Web 23 Apr 2017, 10:32 am
ಬೆಂಗಳೂರು: ‘ನಂಗೆ ಪೂರಿ ಇಷ್ಟ’ ಎನ್ನುತ್ತಾರೆ ಕೆಲವರು. ‘ನಂಗಂತೂ ಚಪಾತಿ ಮತ್ತೆ ಇಡ್ಲಿ ಇಷ್ಟ’ ಎನ್ನುತ್ತಾರೆ ಇನ್ನೂ ಕೆಲವರು. ಮತ್ತೆ ಕೆಲವರು ದೋಸೆ ಬೇಕು ಎನ್ನುತ್ತಾರೆ.
Vijaya Karnataka Web anganavadi food not liked by kids
ಮಕ್ಕಳಿಗೆ ಇಷ್ಟವಾಗದ ಅಂಗನವಾಡಿ ಮೆನು


‘ಇಲ್ಲಿ ದಿನಾ ಪೊಂಗಲ್‌ ಕೊಡ್ತಾರೆ. ಒಂಚೂರು ಇಷ್ಟ ಆಗಲ್ಲ’... ಹೀಗೆ ನುಡಿಯುವವರು ಅಂಗನವಾಡಿಗಳಿಗೆ ಹೋಗುವ ಪುಟಾಣಿ ಮಕ್ಕಳು!

ಇನ್ನು ಇವರ ಪೋಷಕರಂತೂ ‘ಬೇಸಿಗೆಯಲ್ಲಿ ಸ್ವೀಟ್‌ ಪೊಂಗಲ್‌ ಬೇಡ. ಏಕೆಂದರೆ ಬೆಲ್ಲದ ಪೊಂಗಲ್‌ ಮಕ್ಕಳಿಗೆ ಉಷ್ಣ ಆಗುತ್ತೆ’ ಎನ್ನುತ್ತಾರೆ. ಇತ್ತ ಮಕ್ಕಳಿಗೂ ಇಷ್ಟ ಇಲ್ಲ, ಅತ್ತ ಪೋಷಕರಿಗೂ ಇಷ್ಟ ಇಲ್ಲ. ಆದರೆ ಮಹಿಳಾ ಅಭಿವೃದ್ಧಿ ಇಲಾಖೆಯವರು ಊಟಕ್ಕೆ ಇದೇ ಮೆನು ನೀಡಿರುವುದರಿಂದ ಅಂಗನವಾಡಿ ಕಾರ್ಯಕರ್ತರಿಗೆ ಬೇರೆ ದಾರಿಯಿಲ್ಲ. ವಾರದಲ್ಲಿ ಮೂರು ದಿನ ಬೆಳಗ್ಗೆ ಹಾಲು ಮತ್ತು ಕಡ್ಲೆಬೀಜದ ಚಿಕ್ಕಿ ಕೊಟ್ಟು, ಊಟಕ್ಕೆ ಖಾರ ಪೊಂಗಲ್‌ ನೀಡುತ್ತಾರೆ. ಮತ್ತೆ ಮೂರು ದಿನ ತಿಂಡಿಗೆ ಹೆಸರು ಕಾಳಿನ ಪಲ್ಯ ಕೊಟ್ಟು, ಊಟಕ್ಕೆ ಸಿಹಿ ಪೊಂಗಲ್‌ ನೀಡುತ್ತಾರೆ. ಇಷ್ಟೇ ಅಂಗನವಾಡಿ ಮಕ್ಕಳ ಊಟ-ತಿಂಡಿ.

ಗರ್ಭಿಣಿ-ಬಾಣಂತಿಯರಿಗೂ ಆಹಾರ ಧಾನ್ಯ ವಿತರಣೆ
ಅಂಗನವಾಡಿ ಕೇಂದ್ರಗಳಲ್ಲಿ ಓದುವ ಮಕ್ಕಳಿಗೆ ಮಾತ್ರವಲ್ಲದೆ ಗರ್ಭಿಣಿ-ಬಾಣಂತಿಯರಿಗೆ, ಕಿಶೋರಿಯರಿಗೆ (11 ರಿಂದ 16 ವರ್ಷ), ಅಂಗನವಾಡಿಗೆ ಬಾರದ ಆರು ತಿಂಗಳಿನಿಂದ ಆರು ವರ್ಷದೊಳಗಿನ ಮಕ್ಕಳಿಗೆ ತಿಂಗಳಿಗೊಮ್ಮೆ ಬೆಲ್ಲ, ಹೆಸರುಬೇಳೆ, ನ್ಯೂಟ್ರಿಮಿಕ್ಸ್‌, ಹಾಲಿನ ಪುಡಿಗಳನ್ನು ನೀಡಲಾಗುವುದು.

ಮೊಟ್ಟೆಗೆ ಯಾಕೆ ಕೊಕ್‌
ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆ ನಿವಾರಿಸುವ ಸಲುವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತರೇ ಖರೀದಿಸಬೇಕಿತ್ತು. ಅಲ್ಲದೆ ಪ್ರತಿ ಮೊಟ್ಟೆಗೆ 4.60 ಪೈಸೆ ಮಾತ್ರ ತಿಂಗಳ ಕೊನೆಯಲ್ಲಿ ಹಣ ಪಾವತಿಸಲಾಗುತ್ತಿತ್ತು. ಸಾಕಷ್ಟು ಭಾಗಗಳಲ್ಲಿ ಒಂದು ಮೊಟ್ಟೆಯ ಬೆಲೆ 5 ರೂ. ಇರುತ್ತಿತ್ತು. ಕೆಲವೊಮ್ಮೆ 5.50 ರೂ. ಕೂಡ ತಲುಪಿತ್ತು. ಇದರಿಂದ ಅಂಗನವಾಡಿ ಕಾರ್ಯಕರ್ತರು ಕೈಯಿಂದ ಹಣ ಹಾಕಬೇಕಿದ್ದುದರಿಂದ ಸದ್ಯ ಮೊಟ್ಟೆ ಕೊಡುವುದನ್ನು ನಿಲ್ಲಿಸಿದ್ದೇವೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತರ ಬೆಂಗಳೂರು ಘಟಕದ ಮುಖ್ಯಸ್ಥೆ ಲೀಲಾ.

ದಾಖಲೆಯಲ್ಲಿ ಹೆಚ್ಚು ಮಕ್ಕಳು
ಕೆಲವು ಅಂಗನವಾಡಿಗಳಲ್ಲಿ 10 ರಿಂದ 12 ಮಕ್ಕಳಿರುತ್ತಾರೆ. ಮತ್ತೆ ಕೆಲವೆಡೆ ಆರೇಳು ಮಕ್ಕಳಿರುತ್ತಾರೆ. ಆದರೆ ಶಿಕ್ಷಕರು ಮತ್ತು ಆಯಾಗಳು ಮಾತ್ರ ತಮ್ಮ ಕೇಂದ್ರದಲ್ಲಿ 30 ಮಕ್ಕಳಿದ್ದಾರೆ. ಯಾಕೋ ಇವತ್ತು ಹೆಚ್ಚಿನ ಮಕ್ಕಳು ರಜೆ ಹಾಕಿದ್ದಾರೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಹೆಚ್ಚಿನ ಮಕ್ಕಳ ಲೆಕ್ಕ ತೋರಿಸಿ, ಅದಕ್ಕೆ ತಕ್ಕಂತೆ ರೇಷನ್‌ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಯಾವ ಸೌಲಭ್ಯಗಳನ್ನೂ ಕಲ್ಪಿಸುತ್ತಿಲ್ಲ. ಕುಡಿಯುವ ನೀರು, ಸುಸಜ್ಜಿತ ಶೌಚಾಲಯದ ವ್ಯವಸ್ಥೆಯೂ ಇಲ್ಲ. ವರ್ಷಕ್ಕೊಮ್ಮೆ ಕಟ್ಟಡಕ್ಕೆ ಪೇಂಟ್‌ ಕೂಡ ಬಳಿಸುವುದಿಲ್ಲ. ಹೀಗಾಗಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿಲ್ಲ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸುವುದರ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು.
-ಜಯಮ್ಮ, ಸೋಮೇಶ್ವರನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ