ಆ್ಯಪ್ನಗರ

Election Results: ಬಿಜೆಪಿಯ ಜನಪರ ರಾಜಕಾರಣಕ್ಕೆ ಮತದಾರರ ಬೆಂಬಲ: ಸಿಎನ್‌ ಅಶ್ವತ್ಥ ನಾರಾಯಣ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಕಮಾಲ್‌ ಮಾಡಿದೆ. ಎರಡು ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರೆ, ಎರಡು ರಾಜ್ಯಗಳಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ ಸಿಎನ್‌ ಅಶ್ವತ್ಥ ನಾರಾಯಣ, ಇದು ಜನಪರ ರಾಜಕೀಯಕ್ಕೆ ಮತದಾರ ನೀಡಿರುವ ಬೆಂಬಲ ಎಂದು ಹೇಳಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 10 Mar 2022, 6:37 pm

ಹೈಲೈಟ್ಸ್‌:


  • ʼಪಂಚರಾಜ್ಯಗಳ ಫಲಿತಾಂಶ ಜನಪರ ರಾಜಕಾರಣಕ್ಕೆ ಮತದಾರ ನೀಡಿದ ಬೆಂಬಲʼ
  • ʼದೇಶದ ಹಲವಾರು ಸಂಕಷ್ಟಗಳನ್ನು ಪ್ರಯತ್ನಿಸಿರುವ ಬಿಜೆಪಿಗೆ ಜನ ಬೆಂಬಲʼ
  • ಬಿಜೆಪಿ ನಕಾರಾತ್ಮಕ ರಾಜಕಾರಣ ಮಾಡಲ್ಲ ಎಂದ ಡಾ ಸಿಎನ್‌ ಅಶ್ವತ್ಥ ನಾರಾಯಣ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Dr C N Ashwath Narayana
ಬೆಂಗಳೂರು: ಕೋವಿಡ್ ಸೇರಿ ದೇಶಕ್ಕೆ ಸವಾಲೊಡ್ಡಿದ್ದ ಹಲವಾರು ಸಂಕಷ್ಟಗಳನ್ನು ಜನಪರ ಕಾಳಜಿಯಿಂದ ಪರಿಹರಿಸಲು ಬಿಜೆಪಿ ಶ್ರಮಿಸಿರುವುದನ್ನು ಮತದಾರರು ಬೆಂಬಲಿಸಿದ್ದಾರೆ. ಇದನ್ನು ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಪಡೆದಿರುವ ಫಲಿತಾಂಶ ಸೂಚಿಸುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ,ಬಿಟಿ ಸಚಿವ ಡಾ ಸಿಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬಿಜೆಪಿ ಅಧಿಕಾರವನ್ನು ಯಾವತ್ತೂ ಪ್ರತಿಷ್ಠೆಯ ಸ್ಥಾನಮಾನ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಅದು ಜನಹಿತಕ್ಕಾಗಿ ಕೆಲಸ ಮಾಡಲು ಸಿಗುವ ಅವಕಾಶ ಎಂದೇ ಭಾವಿಸುತ್ತದೆ. ಪಕ್ಷದ ಸಾಧನೆ ನಮ್ಮನ್ನು ಇನ್ನಷ್ಟು ವಿನೀತರನ್ನಾಗಿಯೂ, ಜನಪರವನ್ನಾಗಿಯೂ ಮಾಡಲಿದೆ ಎಂದಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಾಧನೆ ಬಹುತೇಕ ಸಿಂಗಲ್ ಡಿಜಿಟ್ ಗೆ ಇಳಿದಿದೆ. ಒಂದೇ ಕುಟುಂಬಕ್ಕೆ ಸೀಮಿತವಾದ ವಂಶಪಾರಂಪರ್ಯ ರಾಜಕಾರಣವನ್ನು ನಮ್ಮ ಜನರು ಬೆಂಬಲಿಸುವುದಿಲ್ಲ ಎಂಬ ಸಂದೇಶ ಈ ಚುನಾವಣಾ ಫಲಿತಾಂಶದಲ್ಲಿ ಇದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಜನವಿರೋಧಿ ಕಾಂಗ್ರೆಸ್ಸಿಗೆ ಇದೇ ಸ್ಥಿತಿ ಬರುವ ಸೂಚನೆ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಕೂಟ ಕಟ್ಟಿಕೊಂಡು ಹೋರಾಡಿದವು. ಆದರೆ ಬಿಜೆಪಿಯ ರಾಷ್ಟ್ರದ ಜನರ ಬಗೆಗೆನ ಸಮಷ್ಟಿ ಹಿತಚಿಂತನೆಯನ್ನು ಮತದಾರರು ಬೆಂಬಲಿಸಿದ್ದಾರೆ. ಈ ಗೆಲುವು ಪಕ್ಷವನ್ನು ದಕ್ಷಿಣದ ರಾಜ್ಯಗಳಲ್ಲಿ ಬಲಗೊಳಿಸಲು ಹೆಚ್ಚಿನ ಹುರುಪು ತುಂಬುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಆಪ್‌ ಈಗ ರಾಷ್ಟ್ರೀಯ ಪಕ್ಷ; ಅರವಿಂದ್‌ ಕೇಜ್ರಿವಾಲ್‌ ಪ್ರಧಾನಿ ಆಗ್ತಾರೆ: ರಾಘವ್‌ ಚಡ್ಡಾ ಸಂತಸ
ಬಿಜೆಪಿ ಬೇರೆ ಪಕ್ಷಗಳ ದೌರ್ಬಲ್ಯಗಳ ಮೇಲೆ ಸವಾರಿ ಮಾಡಿ ನಕಾರಾತ್ಮಕ ರಾಜಕಾರಣ ಮಾಡಲು ಹೋಗುವುದಿಲ್ಲ. ಬದಲಾಗಿ ನಾವು ಹೇಗೆ ಜನಜೀವನದಲ್ಲಿ ಸಕಾರಾತ್ಮಕತೆಯನ್ನು ತರಬಹುದು ಎಂದು ಆಲೋಚಿಸಿ ರಾಜಕಾರಣ ಮಾಡುತ್ತೇವೆ. ಇದನ್ನು ಜನರು ಒಪ್ಪಿಕೊಂಡಿರುವುದು ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ. ನಾವು ನಿರಂತರವಾಗಿ ಜನಸಂಪರ್ಕದಲ್ಲಿದ್ದು ಏನನ್ನು ಮಾಡಿದರೆ ಜನರಿಗೆ ಒಳಿತು ಎಂಬುದನ್ನು ಅವಲೋಕಿಸಿ ಅದಕ್ಕನುಗುಣವಾಗಿ ಯೋಜನೆಗಳನ್ನು ಹಾಕಿಕೊಂಡು ಅವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪರಿಶ್ರಮಿಸುತ್ತೇವೆ ಎಂದು ವಿವರಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ; ಬಸವರಾಜ ಬೊಮ್ಮಾಯಿ ಕಚೇರಿಯಲ್ಲಿ ಸಂಭ್ರಮಾಚರಣೆ
ಬಿಜೆಪಿ ಯಾವಾಗಲೂ ತನ್ನನ್ನು ಹೇಗೆ ಇನ್ನಷ್ಟು ಉತ್ತಮಗೊಳಿಸಿಕೊಳ್ಳಬಹುದು ಎಂದು ಪರಾಮರ್ಶೆ ಮಾಡಿಕೊಳ್ಳುತ್ತದೆ. ಉತ್ತಮವಾದುದು ಯಾರಲ್ಲೇ ಇದ್ದರೂ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ. ಜವಾಬ್ದಾರಿಯುತ ಪ್ರತಿಪಕ್ಷಗಳಿಂದಲೂ ನಾವು ಒಳಿತನ್ನು ಕಲಿತು ಅಳವಡಿಸಿಕೊಳ್ಳುತ್ತೇವೆ. ಸೋತ ಪಕ್ಷಗಳನ್ನೂ ಗೌರವದಿಂದಲೇ ನೋಡುತ್ತೇವೆ. ಆದರೆ, ವಿರೋಧ ಪಕ್ಷಗಳ ಕಾರ್ಯವೈಖರಿ, ಯೋಜನೆಗಳ ಉದ್ದೇಶಗಳು ಜನಪರತೆಗೆ ಹಾಗೂ ರಾಷ್ಟ್ರಹಿತಕ್ಕೆ ವಿರುದ್ಧವಾಗಿದ್ದರೆ ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.


ಪಂಚರಾಜ್ಯ ಚುನಾವಣೆಯಲ್ಲಿ ಕೇಸರಿ ಕಮಾಲ್‌!ಪಂಚರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಇನ್ನು, ಉತ್ತರಾಖಂಡ್‌ನಲ್ಲೂ ಬಹುಮತ ಗಳಿಸಿರುವ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿದಿದೆ. ಗೋವಾ ಮತ್ತು ಮಣಿಪುರದಲ್ಲಿಯೂ ಕೂಡ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚಿಸುವ ಸಾಧ್ಯತೆ ನಿಚ್ಚಳವಾಗಿದೆ. ಪಂಜಾಬ್‌ ಮಾತ್ರ ಎಎಪಿ ಪಾಲಾಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ