ವಿಕ ಸುದ್ದಿಲೋಕ ಬೆಂಗಳೂರು
ನಗರದ ಪ್ರಮುಖ ಬಿಲ್ಡರೊಬ್ಬರನ್ನು ಕಾರಿನ ಸೀಟ್ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಎಲೆಕ್ಟ್ರಾನಿಕ್ಸಿಟಿ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.
ಪತ್ನಿ ಮತ್ತು ಮೂವರು ಮಕ್ಕಳ ಜತೆ ಮೈಲಸಂದ್ರದಲ್ಲಿನೆಲೆಸಿರುವ ಪ್ರಭಾಕರ ರೆಡ್ಡಿ ಅವರ ಕುತ್ತಿಗೆಗೆ ಕಾರಿನ ಸೀಟ್ ಬೆಲ್ಟ್ ಬಿಗಿದು ಕೊಲೆ ಯತ್ನ ನಡೆದಿದೆ. ಆರೋಪಿ ಹಾಗೂ ಮಾಜಿ ಪ್ರೇಯಸಿ ಪವಿತ್ರ ಈಗ ತಲೆ ಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದದ್ದೇನು
ಪ್ರಭಾಕರ ರೆಡ್ಡಿ ಮತ್ತು ಆರ್.ಆರ್.ನಗರ ನಿವಾಸಿ ಪವಿತ್ರ ಕೆಲ ವರ್ಷಗಳ ಹಿಂದೆ ಲಿವಿಂಗ್ ಟುಗೆದರ್ನಲ್ಲಿಇದ್ದರು. ಇಬ್ಬರೂ ದೂರವಾಗಿ ಮೂರು ವರ್ಷಗಳೇ ಕಳೆದಿವೆ. ಈಗ್ಗೆ ಆರು ತಿಂಗಳ ಹಿಂದೆ ರೆಡ್ಡಿಯನ್ನು ಮತ್ತೆ ಸಂಪರ್ಕಿಸಿದ ಪವಿತ್ರ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ರೆಡ್ಡಿ ಒಪ್ಪಿರಲಿಲ್ಲ. ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಶುಕ್ರವಾರ ಪವಿತ್ರ ಬಂದಿದ್ದಾಗಲೇ ಕೊಲೆ ಯತ್ನ ನಡೆದಿದೆ ಎಂದು ದೂರು ದಾಖಲಾಗಿದೆ.
ಶುಕ್ರವಾರ ರೆಡ್ಡಿ ಅವರ ಕಾರಿನಲ್ಲೇ ಇಬ್ಬರ ನಡುವೆ ಜಗಳ ನಡೆದಿದೆ. ಕಾರು ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುತ್ತಿದ್ದಾಗ ಟೋಲ್ನಿಂದ 500 ಮೀಟರ್ ಅಂತರದಲ್ಲಿದ್ದಾಗ ರೆಡ್ಡಿ ಹಾಕಿಕೊಂಡಿದ್ದ ಸೀಟ್ ಬೆಲ್ಟ… ಅನ್ನು ಅವರ ಕುತ್ತಿಗಿಗೆ ಬಿಗಿದು ಕೊಲೆ ಯತ್ನ ನಡೆದಿದೆ. ಬೆಲ್ಟ್ನಿಂದ ಬಿಡಿಸಿಕೊಂಡ ರೆಡ್ಡಿ ಅವರು ಕಾರು ನಿಲ್ಲಿಸಿ ತಕ್ಷಣ ಕೆಳಗಿಳಿದಿದ್ದಾರೆ. ಪವಿತ್ರ ಕೂಡ ಕಾರಿನಿಂದ ಇಳಿದು ಸ್ಟೀಲ್ ಬಾಟಲಿಯಿಂದ ತಲೆಯ ಹಿಂಭಾಗಕ್ಕೆ ಮತ್ತು ಕಿವಿಗಳ ಮೇಲೆ ಹಲ್ಲೆನಡೆಸಿದ್ದಾರೆ. ಹಲ್ಲೆಗೆ ಒಳಗಾದ ರೆಡ್ಡಿ ಕೂಗಾಡುತ್ತಿದ್ದಂತೆ ರಸ್ತೆಯಲ್ಲಿಹೋಗುತ್ತಿದ್ದವರೆಲ್ಲಾಹತ್ತಿರಕ್ಕೆ ಧಾವಿಸಿದ್ದರಿಂದ ಪವಿತ್ರ ಅಲ್ಲಿಂದ ಓಡಿ ಹೋದರು ಎಂದು ದೂರಿನಲ್ಲಿವಿವರಿಸಿದ್ದಾರೆ.
ಬಳಿಕ ಸ್ಥಳದಲ್ಲಿದ್ದವರ ನೆರವಿನಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ ರೆಡ್ಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಸೀದಾ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸದ್ಯ ಆರೋಪಿ ಪವಿತ್ರ ತಪ್ಪಿಸಿಕೊಂಡಿದ್ದು, ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಗಳು ಬರ್ತಾರೆ ಹುಷಾರು
ನೈಸ್ ರಸ್ತೆಯಲ್ಲಿಹಲ್ಲೆನಡೆಸಿದ ಪವಿತ್ರ ಅಲ್ಲಿಂದ ತೆರಳುವ ಮೊದಲು, ''ನಿನ್ನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸದಿದ್ದರೆ ನಿನ್ನ ಕೊಲೆಗೆ ರೌಡಿಗಳನ್ನು ಕಳುಹಿಸುತ್ತೇನೆ,'' ಎಂದು ಬೆದರಿಕೆ ಹಾಕಿರುವುದಾಗಿಯೂ ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.