ಆ್ಯಪ್ನಗರ

ಜನರಲ್ಲಿ ಓದುವ ಹವ್ಯಾಸ ಬೆಳೆಸಲು ಅತಿ ಚಿಕ್ಕ ಗಾತ್ರದ ಭಗವದ್ಗೀತೆ ರಚಿಸಿದ ಆಟೋ ಡ್ರೈವರ್

ಬೆಂಗಳೂರಿನ ಆಟೋ ಡ್ರೈವರ್ ಒಬ್ಬರು ಕನ್ನಡ ಉಳಿಸಲು ಹಾಗೂ ಓದುವ ಹವ್ಯಾಸ ಮರೆಯಾಗದಿರಲಿ ಎಂದು ಅತಿ ಚಿಕ್ಕ ಗಾತ್ರದ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗವನ್ನು ರಚಿಸಿದ್ದಾರೆ.

TIMESOFINDIA.COM 7 Oct 2018, 1:53 pm
ಬೆಂಗಳೂರು: ತಂತ್ರಜ್ಞಾನವನ್ನೇ ಅವಲಂಬಿಸಿರುವ ಈ ಯುಗದಲ್ಲಿ ಜನತೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಲಿ ಎಂದು ನಗರದ ಆಟೋ ಡ್ರೈವರ್ ಒಬ್ಬ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗದ ಅತಿ ಚಿಕ್ಕ ಗಾತ್ರದ ಪುಸ್ತಕಗಳನ್ನು ರಚಿಸಿದ್ದಾರೆ.
Vijaya Karnataka Web miniature bhagavad gita


ಪಶ್ಚಿಮ ಬೆಂಗಳೂರಿನ ಚಂದ್ರಾ ಲೇಔಟ್‌ ನಿವಾಸಿಯಾಗಿರುವ ಕೆ.ಜಗನ್ನಾಥ್ (53) 2 * 1.5 ಸೆಂಟಿ ಮೀಟರ್ ಗಾತ್ರದ ಭಗವದ್ಗೀತೆ ಹಾಗೂ ಕನ್ನಡದ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ರಚಿಸಿದ್ದಾರೆ. ಈ ಪುಸ್ತಕಗಳು ಅಂದಾಜು ಹಳೆಯ 5 ರೂ. ಕಾಯಿನ್‌ನ ಗಾತ್ರದಲ್ಲಿರುವುದು ವಿಶೇಷ.

ಜಗನ್ನಾಥ್ ರಚಿಸಿರುವ ಭಗವದ್ಗೀತೆ ಸುಮಾರು 100 ಪುಟಗಳಷ್ಟಿದ್ದು, ಇಂಗ್ಲೀಷ್, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿದೆ. ಇನ್ನು, 121 ಪುಟಗಳಷ್ಟಿರುವ ಮಂಕುತಿಮ್ಮನ ಕಗ್ಗ 945 ಕವಿತೆಗಳನ್ನು ಒಳಗೊಂಡಿದೆ. ಜತೆಗೆ, ಡಿವಿಜಿಯವರ 945 ಕವಿತೆಗಳನ್ನು ಒಂದೇ ಹಾಳೆಯಲ್ಲಿ ಬರೆಯುವ ಮೂಲಕ ಜಗನ್ನಾಥ್‌ ಅಚ್ಚರಿ ಮೂಡಿಸಿದ್ದಾರೆ.

ದ್ವಿತೀಯ ಪಿಯುಸಿವರೆಗೆ ಓದಿರುವ ಜಗನ್ನಾಥ್, ''ಇತ್ತೀಚೆಗೆ ಜನರಲ್ಲಿ ಓದುವ ಹವ್ಯಾಸ ತೀವ್ರ ಕಡಿಮೆಯಾಗುತ್ತಿದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ, ''ಟಿವಿಯಲ್ಲಿ ನೋಡಲು ಅನೇಕ ಚಾನೆಲ್‌ಗಳು ಇರುವುದರಿಂದ 1990ರ ದಶಕದಿಂದಲೇ ಜನತೆ ನಿಧಾನವಾಗಿ ಟಿವಿಗೆ ಆದ್ಯತೆ ಕೊಡುತ್ತಾ ಹೋದರು. ನಂತರ, ಮೊಬೈಲ್ ಫೋನ್ ಬಂದ ಬಳಿಕ ಅದರ ಕಡೆ ಹೊರಳುವ ವೇಗ ಹೆಚ್ಚಾಗಿದೆ'' ಎಂದೂ ಅವರು ಹೇಳಿದ್ದಾರೆ.

ಇನ್ನು, ಆಟೋ ಡ್ರೈವರ್ ಈ ಅತಿಚಿಕ್ಕ ಗಾತ್ರದ ಪುಸ್ತಕಗಳನ್ನು ತಯಾರಿಸಲು ಸುಮಾರು 25 ಸಾವಿರ ರೂ. ಖರ್ಚು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಜಗನ್ನಾಥ್, ''ಈ ಹಣ ನನಗೆ ಅತಿ ದೊಡ್ಡದು. ಆದರೆ, ಜನರಲ್ಲಿ ಓದುವ ಹವ್ಯಾಸ ಉಳಿಸಲು ಹಾಗೂ ನನ್ನ ಮಾತೃಭಾಷೆ ಕನ್ನಡವನ್ನು ಉಳಿಸಲು ಈ ಹೆಜ್ಜೆ ಇಟ್ಟಿದ್ದೇನೆ'' ಎಂದು ಹೇಳಿದ್ದಾರೆ. ಆದರೆ, ಈ ಪುಸ್ತಕಗಳನ್ನು ಉಚಿತವಾಗಿ ಹಂಚುವುದೋ ಅಥವಾ ಅತ್ಯಲ್ಪ ಮೊತ್ತದ ಶುಲ್ಕ ಒದಗಿಸುವುದೋ ಎಂದು ಜಗನ್ನಾಥ್ ಇನ್ನೂ ನಿರ್ಧಾರ ಮಾಡಿಲ್ಲ. ಇನ್ನು, ಗೃಹಿಣಿಯಾಗಿರುವ ಪತ್ನಿ ಶಶಿಕಲಾ ಹಾಗೂ ಸಿವಿಲ್ ಕಂಟ್ರ್ಯಾಕ್ಟರ್‌ ಆಗಿರುವ ಪುತ್ರ ಕಿರಣ್‌ ಕುಮಾರ್‌ ಜತೆಗೆ ಆಟೋ ಡ್ರೈವರ್ ಜಗನ್ನಾಥ್ ವಾಸ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ