ಆ್ಯಪ್ನಗರ

ಲಾಲ್‌ಬಾಗ್‌ನಲ್ಲಿ ಅವರೆಕಾಯಿ ಮೇಳ ಆರಂಭ

ಕ್ರಿಸ್‌ಮಸ್‌ ಅಂಗವಾಗಿ ಹಾಪ್‌ಕಾಮ್ಸ್‌ , ನಗರದಲ್ಲಿ ಇದೇ ಮೊದಲ ಬಾರಿಗೆ ಅವರೆಕಾಯಿ ಮೇಳವನ್ನು ಆಯೋಜಿಸಿದೆ.

Vijaya Karnataka 23 Dec 2018, 5:00 am
ಬೆಂಗಳೂರು: ಕ್ರಿಸ್‌ಮಸ್‌ ಅಂಗವಾಗಿ ಹಾಪ್‌ಕಾಮ್ಸ್‌ , ನಗರದಲ್ಲಿ ಇದೇ ಮೊದಲ ಬಾರಿಗೆ ಅವರೆಕಾಯಿ ಮೇಳವನ್ನು ಆಯೋಜಿಸಿದೆ.
Vijaya Karnataka Web avareq1


ಮೂರು ದಿನಗಳ ಕಾಲ ನಡೆಯುವ ಅವರೆಕಾಯಿ ಮೇಳಕ್ಕೆ ಶನಿವಾರ ಲಾಲ್‌ಬಾಗ್‌ನಲ್ಲಿ ಚಾಲನೆ ನೀಡಲಾಯಿತು. ಮೊದಲ ದಿನವೇ ವಾಯುವಿಹಾರಿಗಳು ಹಾಗೂ ಉದ್ಯಾನಕ್ಕೆ ಬಂದ ಗ್ರಾಹಕರು ಅತ್ಯಂತ ಖುಷಿಯಿಂದ ಮೇಳದಲ್ಲಿ ಖರೀದಿಯಲ್ಲಿ ತೊಡಗಿದ್ದುದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ಪ್ರಸಾದ್‌, ''ಗುಣಮಟ್ಟದ ಅವರೆಕಾಯಿಯ ಜತೆಗೆ, ತೊಗರಿಕಾಯಿ, ಬಟಾಣಿ, ಗೆಣಸಿನಗಡ್ಡೆ, ಹಸಿ ಕಡ್ಲೆಕಾಯಿ, ಜತೆಗೆ ಚಳಿಗಾಲದಲ್ಲಿ ಸಿಗುವ ವಿಯೆನ್ನಾರ್‌ ಸೀಬೆ, ಡ್ರ್ಯಾಗನ್‌ ಫ್ರೂಟ್‌, ಸ್ಟ್ರಾಬೆರಿಗಳನ್ನೂ ವಿಶೇಷವಾಗಿ ಮಾರಾಟ ಮಾಡಲಾಗುತ್ತಿದೆ. ನೇರವಾಗಿ ರೈತರಿಂದ ಖರೀದಿಸಿ ನಾವು ಮಾರಾಟ ಮಾಡುತ್ತೇವೆ. ನಗರದ ಎಲ್ಲಾ ಮಳಿಗೆಗಳಲ್ಲೂ ಮೇಳ ನಡೆಯಲಿದೆ'' ಎಂದರು.

''ಹೊಲದ ಸೊಗಡವರೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಹಿಮ ಬೀಳುತ್ತಿಲ್ಲ. ಮಳೆಯೂ ಇಲ್ಲದೆ ಬೆಳೆ ಈ ಬಾರಿ ವಿಳಂಬವಾಗಿದೆ. ಹೀಗಾಗಿ ಜನವರಿ ಮಧ್ಯದಲ್ಲಿ ಹೊಲದವರೆ ಬರಲಿದೆ. ಆದರೆ ಇದೀಗ ನೀರಾವರಿ ಮೂಲಕ ಸೊಗಡವರೆಯನ್ನು ಬೆಳೆಯಲಾಗುತ್ತಿದೆ. ಈ ನೀರಾವರಿ ಸೊಗಡವರೆಯನ್ನು ಮೇಳದಲ್ಲಿ ಮಾರಲಾಗುತ್ತಿದೆ,'' ಎಂದರು.

ಭಾನುವಾರ ಕಬ್ಬನ್‌ಪಾರ್ಕ್‌ನಲ್ಲೂ ಮೇಳ: ನಗರದ ಎಲ್ಲಾ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ಮಾರಾಟ ಮೇಳ ನಡೆಯಲಿದೆ. ಭಾನುವಾರ ಮತ್ತು ಮಂಗಳವಾರ ಸರಕಾರಿ ರಜೆ ಹಿನ್ನೆಲೆಯಲ್ಲಿ ಈ ಎರಡೂ ದಿನ ಕಬ್ಬನ್‌ಪಾರ್ಕ್‌ನಲ್ಲೂ ಮೇಳ ಏರ್ಪಡಿಸಲಾಗುವುದು.

ಮೂರು ದಿನಗಳ ಮೇಳದಲ್ಲಿ ಪ್ರತಿದಿನ ಕನಿಷ್ಠ 5 ಟನ್‌ ಅವರೆಕಾಯಿ ಹಾಗೂ ಇತರೆ ತರಕಾರಿ ಹಣ್ಣು ಸೇರಿದಂತೆ ಸುಮಾರು 50 ಟನ್‌ವರೆಗೆ ಮಾರಾಟದ ಗುರಿ ಹೊಂದಲಾಗಿದೆ.
-ಬಿ.ಎನ್‌. ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್‌


ನಾನಾ ಮಳಿಗೆಗಳು ಒಂದೇ ಕಡೆ ಇರುವುದರಿಂದ ಬೇಕಾದ್ದನ್ನು ಆಯ್ಕೆ ಮಾಡಿ ಖರೀದಿಸಬಹುದು. ಜತೆಗೆ ಚಳಿಗಾಲದ ಹಣ್ಣು ಮತ್ತು ತರಕಾರಿಗಳನ್ನೂ ಮಾರುತ್ತಿರುವುದು ಮತ್ತಷ್ಟು ಅನುಕೂಲಕರವಾಗಿದೆ.
-ಸದಾಶಿವ್‌, ಪ್ರಮೀಳಾ ದಂಪತಿ, ಬಸವನಗುಡಿ

ಮೇಳದ ದರ ಪಟ್ಟಿ (ಕೆ.ಜಿ.ಗಳಲ್ಲಿ)
ಅವರೆಕಾಯಿ- 25 ರೂ.
ತೊಗರಿಕಾಯಿ- 35 ರೂ.
ಗೆಣಸು -35 ರೂ.
ಕಡ್ಲೆಕಾಯಿ -60 ರೂ.
ಬಟಾಣಿ- 40 ರೂ.
ವಿಯೆನ್ನಾರ್‌ ಸೀಬೆ- 110 ರೂ.
ಕೃಷ್ಣ ಬ್ರೌನ್‌ ಅಂಜೂರ- 100 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ