ಆ್ಯಪ್ನಗರ

ಹೊರ ರಾಜ್ಯದವರಿಗೆ ಕೊಡುವಷ್ಟು ಉದ್ಯೋಗ ಬೆಂಗಳೂರಿನಲ್ಲಿದೆ: ಕಮೀಷನರ್ ಭಾಸ್ಕರ ರಾವ್‌

ಬೆಂಗಳೂರಿನಲ್ಲಿ ಉದ್ಯೋಗಗಳ ಕೊರತೆ ಇಲ್ಲ. ರಾಜ್ಯದ ಜನರ ಜೊತೆಗೆ ಹೊರ ರಾಜ್ಯದವರಿಗೂ ಕೊಡುವಷ್ಟು ಉದ್ಯೋಗಗಳಿವೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಹೇಳಿದ್ದಾರೆ.

Vijaya Karnataka Web 13 Feb 2020, 7:57 am
ಬೆಂಗಳೂರು: ನಗರದಲ್ಲಿ ಉದ್ಯೋಗಗಳ ಕೊರತೆ ಇಲ್ಲ. ರಾಜ್ಯದ ಜನರ ಜೊತೆಗೆ ಹೊರ ರಾಜ್ಯದವರಿಗೂ ಕೊಡುವಷ್ಟು ಉದ್ಯೋಗಗಳಿವೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಹೇಳಿದರು.
Vijaya Karnataka Web bengaluru police commissioner bhaskar rao


ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆ (ಎಫ್‌ಕೆಸಿಸಿಐ) ಸಂಸ್ಥೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

''ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ (ಫೆ.13) ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ರಾಜ್ಯದಲ್ಲಿ ಉದ್ಯೋಗದ ಕೊರತೆ ಇಲ್ಲ. ಆದರೆ ಉದ್ಯೋಗಿಗಳು ಮತ್ತು ನುರಿತ ಉದ್ಯೋಗಿಗಳ ಕೊರತೆ ಇದೆ. ಇಲ್ಲಿನ ಬೇಡಿಕೆಗಳಿಗೆ ಹೊರ ರಾಜ್ಯದವರಿಗೂ ಉದ್ಯೋಗ ಕೊಡುವ ಅನಿವಾರ್ಯವಿದೆ. 70-80ರ ದಶಕದಲ್ಲಿ ಮುಂಬೈ ಮಹಾನಗರಕ್ಕೆ ಕೆಲಸ ಅರಸಿ ಹೋಗುತ್ತಿದ್ದರು. ರೈಲು, ಬಸ್‌ ಹತ್ತಿ ಹೋದರೆ ಸಾಕು, ಅಲ್ಲಿಉದ್ಯೋಗ ಇಲ್ಲ. ಉಪವಾಸ ಇರುತ್ತಾರೆ ಎನ್ನುವ ಪ್ರಶ್ನೆಯೇ ಇರಲಿಲ್ಲ. ಎಲ್ಲರಿಗೂ ಉದ್ಯೋಗ, ಊಟ ಸಿಗುತ್ತಿತ್ತು. ಈಗ ಬೆಂಗಳೂರು ಕೂಡ ಅದೇ ರೀತಿ ಬೆಳೆದಿದ್ದು, ಬೆಳೆಯುತ್ತಲೇ ಇದೆ. ರೈಲು, ಬಸ್‌ ಹತ್ತಿ ಬಂದವರೆಲ್ಲರಿಗೂ ಉದ್ಯೋಗ, ವಸತಿ ಮತ್ತು ಊಟವನ್ನು ಕೊಡುತ್ತಿದೆ'' ಎಂದು ಭಾಸ್ಕರ್‌ ರಾವ್‌ ಹೇಳಿದರು.

''ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೊರ ರಾಜ್ಯಗಳಿಂದ ಬಂದ ಜನರನ್ನು ಅವರ ಭಾಷೆ, ಧರಿಸುವ ಬಟ್ಟೆ ನೋಡಿ ವ್ಯಂಗ್ಯವಾಡುತ್ತಿದ್ದರು. ಆದರೆ, ಬೆಂಗಳೂರಿನಲ್ಲಿಅಂತಹ ಪರಿಸ್ಥಿತಿ ಇಲ್ಲ. ಎಲ್ಲರೊಂದಿಗೆ ಶಾಂತಿಯುತವಾಗಿ ಬದುಕುವ ಸಹಿಷ್ಣುತೆಯನ್ನು ನಮ್ಮ ಜನ ಬೆಳೆಸಿಕೊಂಡಿದ್ದಾರೆ. ಆದರೂ, ಸ್ಥಳೀಯರು ಮತ್ತು ಹೊರ ರಾಜ್ಯದವರ ನಡುವೆ ಸಣ್ಣ ಪುಟ್ಟ ಘರ್ಷಣೆಗಳು ಸಂಭವಿಸುತ್ತಿರುತ್ತವೆ. ಬಹುಸಂಸ್ಕೃತಿಯನ್ನು ಬೆಂಗಳೂರು ಒಪ್ಪಿಕೊಂಡು ಮುನ್ನಡೆಯುತ್ತಿದೆ. ಅದರ ಜೊತೆಗೆ ಕಳ್ಳತನ, ದರೋಡೆ, ಸೈಬರ್‌ ಅಪರಾಧಗಳು ಕೂಡ ಜರುಗುತ್ತಿವೆ. ನಗರದ 19 ಸಾವಿರ ಪೊಲೀಸರು ಬದಲಾದ ಅಪರಾಧ ಸ್ವರೂಪಕ್ಕೆ ತಕ್ಕಂತೆ ಬದಲಾವಣೆ, ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಸವಾಲುಗಳನ್ನು ಎದುರಿಸುವ ಕುರಿತು ತರಬೇತಿ ನೀಡಲಾಗುತ್ತಿದೆ'' ಎಂದು ಆಯುಕ್ತರು ತಿಳಿಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಪೊಲೀಸ್‌ ಚೌಕಿ ಠಾಣೆಗಳ ಸ್ಥಾಪನೆ, ಸೈಬರ್‌ ಅಪರಾಧಗಳ ನಿಯಂತ್ರಣ, ಟ್ರಾಫಿಕ್‌ ನಿಯಂತ್ರಣ, ಸಿಸಿ ಕ್ಯಾಮೆರಾಗಳ ಅಳವಡಿಕೆ, ಸೂಕ್ತ ಭದ್ರತೆ ಒದಗಿಸುವ ಮೂಲಕ ಬೆಂಗಳೂರು ನಗರವನ್ನು ದಿನದ 24 ತಾಸು ವಹಿವಾಟು ನಡೆಸುವ ನಗರವಾಗಿ ಬೆಳೆಸುವುದು, ಉದ್ಯೋಗಿಗಳಿಂದ ಮಾಲೀಕರ ಮೇಲೆ ದಾಖಲಾಗುವ ಪ್ರಕರಣಗಳಲ್ಲೂ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮಹಾಸಂಸ್ಥೆಯ ಪದಾಧಿಕಾರಿಗಳು ಆಯುಕ್ತರ ಮುಂದೆ ಇಟ್ಟರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌ ಜನಾರ್ಧನ, ಹಿರಿಯ ಅಪಾಧ್ಯಕ್ಷ ಪೆರಿಕಲ್‌ ಎಂ.ಸುಂದರ್‌, ಸಿವಿಕ್‌ ಅಫೇರ್ಸ್‌ ಕಮಿಟಿ ಅಧ್ಯಕ್ಷ ಪಿ.ಸಿ ರಾವ್‌, ಉಪಾಧ್ಯಕ್ಷ ಐ.ಎಸ್‌ ಪ್ರಸಾದ್‌ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಗ್ರರ ಸ್ಲೀಪರ್‌ ಸೆಲ್‌ಗಳು
ಬೆಂಗಳೂರಿಗೆ ಬಾಂಗ್ಲಾದೇಶ ಮತ್ತು ನೇಪಾಳದಿಂದ ದೊಡ್ಡ ಸಂಖ್ಯೆಯಲ್ಲಿಅಕ್ರಮ ವಲಸಿಗರು ಆಗಮಿಸುತ್ತಿದ್ದಾರೆ. ನಮ್ಮ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಧಿಕಾರ, ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಪ್ರಜೆಗಳಿದ್ದಾರೆ. ಅಕ್ರಮ ವಲಸಿಗರಲ್ಲಿ ಕೆಲವರು ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಲೀಪರ್‌ ಸೆಲ್‌ಗಳಾಗಿ ಕೆಲಸ ಮಾಡುತ್ತಾರೆ. ದೇಶದ ಭದ್ರತೆಗೆ ಅಪಾಯ ಉಂಟು ಮಾಡುವವರನ್ನು ನಿಯಂತ್ರಿಸುವ ಸವಾಲು ಕೂಡ ಇದೆ. ಆದರೆ, ಕರ್ತವ್ಯದ ನಡುವೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಭಾಸ್ಕರ್‌ರಾವ್‌ ತಿಳಿಸಿದರು.

ಸಿವಿಲ್‌ ಪ್ರಕರಣಗಳಲ್ಲಿ ಪೊಲೀಸರ ಮಧ್ಯಪ್ರವೇಶ
ಕೆಲವು ಸಿವಿಲ್‌ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ನಿಯಂತ್ರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ''ಪೂರ್ಣ ಪ್ರಮಾಣದ ಸಿವಿಲ್‌ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡುವಂತಿಲ್ಲ. ಆ ರೀತಿ ಪೊಲೀಸರು ಮಾಡಿದರೆ ಅವರಿಗೆ ನೋಟಿಸ್‌ ಕೊಟ್ಟು ನಮ್ಮ ಕಚೇರಿಗೆ ಒಂದು ಕಾಪಿಯನ್ನು ಕಳುಹಿಸಿ. ಈ ಕುರಿತು ವಿಚಾರಣೆ ನಡೆಸಲಾಗುತ್ತದೆ. ಕೆಲವೊಮ್ಮೆ ಕ್ರಿಮಿನಲ್‌ ಸ್ವರೂಪ ಇದ್ದಾಗ ಪೊಲೀಸರು ಮಧ್ಯಪ್ರವೇಶ ಮಾಡಿರುವ ಸಾಧ್ಯತೆ ಇದೆ'' ಎಂದು ಭಾಸ್ಕರ್‌ ರಾವ್‌ ತಿಳಿಸಿದರು.

ಭದ್ರತೆ ಸುಧಾರಣೆ
* ನಿರ್ಭಯಾ ಯೋಜನೆಯಡಿ 17 ಸಾವಿರ ಕ್ಯಾಮೆರಾ ಅಳವಡಿಸಲು ಶೀಘ್ರ ಟೆಂಡರ್‌.

* 317ರಷ್ಟಿರುವ ಹೊಯ್ಸಳ ವಾಹನಗಳನ್ನು 500ರಿಂದ 600ಕ್ಕೇರಿಸಲು ಸರಕಾರಕ್ಕೆ ಪ್ರಸ್ತಾವನೆ

* ಕರೆ ಮಾಡಿದರೆ ಹೊಯ್ಸಳ ವಾಹನ 6-7 ನಿಮಿಷಕ್ಕೆ ತಲುಪುತ್ತಿವೆ. ಬರುವ ದಿನಗಳಲ್ಲಿ3 ನಿಮಿಷದಲ್ಲಿ ತಲುಪುವ ಗುರಿ ಇದೆ.

* ರಾತ್ರಿ ಪಾಳಿಯಲ್ಲಿ ಭದ್ರೆತೆಗೆ ಇಬ್ಬರು ಡಿಸಿಪಿಗಳು, 25 ಇನ್ಸ್‌ಪೆಕ್ಟರ್‌ಗಳೂ ಸೇರಿದಂತೆ ಅಗತ್ಯ ಪೊಲೀಸರ ಕರ್ತವ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ