ಆ್ಯಪ್ನಗರ

ಏರ್‌ಶೋಗೆ ಬೆಂಗಳೂರು ಸಜ್ಜು: ಸಿದ್ಧತೆ ಸಮಾಧಾನ ತಂದಿದೆ ಎಂದ ರಾಜ್‌ನಾಥ್ ಸಿಂಗ್‌

ಕಳೆದ ಸಲ ಸಂಭವಿಸಿದ ದುರಂತ ಮರುಕಳಿಸದಂತೆ ರಕ್ಷಣಾ ಸಚಿವಾಲಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಲವೂ ಏರ್‌ಶೋ ಯಶಸ್ವಿಯಾಗಿ ನಡೆಯುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಸಚಿವ ರಾಜನಾಥ ಸಿಂಗ್‌ ಸ್ಪಷ್ಟಪಡಿಸಿದರು.

Vijaya Karnataka Web 15 Jan 2021, 9:19 pm
ಬೆಂಗಳೂರು: ಮತ್ತೊಂದು ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ (ಏರ್‌ ಶೋ) ಬೆಂಗಳೂರು ಸಜ್ಜಾಗುತ್ತಿದೆ. ಯಲಹಂಕದಲ್ಲಿರುವ ವಾಯುಪಡೆ ನೆಲೆಯಲ್ಲಿ ಫೆಬ್ರವರಿ 3 ರಿಂದ 7ರವರೆಗೆ ನಿಗದಿಯಾಗಿರುವ ಏರ್‌ಶೋ ಸಿದ್ಧತೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
Vijaya Karnataka Web ಏರ್ ಶೋ
ಏರ್ ಶೋ


ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಹಾಗೂ ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳು ಭಾಗವಹಿಸಿ ವೈಮಾನಿಕ ಪ್ರದರ್ಶನಕ್ಕೆ ನಡೆದಿರುವ ಸಿದ್ಧತೆಗಳ ಪರಾಮರ್ಶೆ ನಡೆಸಿದರು. ಜತೆಗೆ ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ವ್ಯಾಪಕವಾಗಿ ಸಮಾಲೋಚಿಸಿದರು.

ಕೊರೊನಾದಿಂದಾಗಿ ವೈಮಾನಿಕ ಪ್ರದರ್ಶನವನ್ನು ರೂಪಾಂತರಗೊಳಿಸುವ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದು ಇದು ವಿಶ್ವದ ಮೊದಲ ಹೈಬ್ರಿಡ್‌ ಏರ್‌ಶೋ ಆಗಲಿದೆ ಎಂದು ವಿವರಿಸಿದರು.

ಬಾಹ್ಯಾಕಾಶ ಮತ್ತು ರಕ್ಷಣಾ ಇಲಾಖೆ ವರ್ಚುಯಲ್‌ ವಸ್ತು ಪ್ರದರ್ಶನ ನಡೆಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ಶೇ.40 ರಷ್ಟು ಚಟುವಟಿಕೆಗಳು ಕಡಿತಗೊಳ್ಳಲಿವೆ. ಪ್ರದರ್ಶನ ಮಳಿಗೆಗಳು ಸಹ ಕಡಿಮೆಯಾಗಲಿವೆ.

ಸಿದ್ಧತೆ ಸಮಾಧಾನ ತಂದಿದೆ: ಸಿಂಗ್‌


ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು, ಏರೋ ಇಂಡಿಯಾ ಪ್ರದರ್ಶನ ನಡೆಸುತ್ತಿರುವ ಬೆಂಗಳೂರಿಗೆ ಸಾಕಷ್ಟು ಅನುಭವವಿದೆ. ಈ ರೀತಿಯ ಅನುಭವ ಇತರೆ ಯಾವುದೇ ನಗರಕ್ಕೂ ಇಲ್ಲ. ಏರ್‌ಶೋಗೆ ನಡೆದಿರುವ ಸಿದ್ಧತೆಗಳು ಸಮಾಧಾನ ತಂದಿದೆ ಎಂದು ಹೇಳಿದರು.

ಕಳೆದ ಸಲ ಸಂಭವಿಸಿದ ದುರಂತ ಮರುಕಳಿಸದಂತೆ ರಕ್ಷಣಾ ಸಚಿವಾಲಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಲವೂ ಏರ್‌ಶೋ ಯಶಸ್ವಿಯಾಗಿ ನಡೆಯುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಸಚಿವ ರಾಜನಾಥ ಸಿಂಗ್‌ ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ 1996ರಿಂದಲೂ ಏರ್‌ಶೋ ನಡೆಸಲಾಗುತ್ತಿದೆ. ಪ್ರತಿ ಸಲದಂತೆ ಈ ವರ್ಷವೂ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಏರ್‌ಶೋ ನಡೆಸುವ ಅವಕಾಶವನ್ನು ಬೆಂಗಳೂರಿಗೆ ಕಲ್ಪಿಸಿದ್ದಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಸೇರಿ ಎಲ್ಲ ಸಿದ್ಧತೆಗಳಿಗೆ ರಾಜ್ಯ ಸರಕಾರ 30 ಕೋಟಿ ರೂ. ವೆಚ್ಚ ಮಾಡುತ್ತಿದೆ, ಪ್ರತಿ ಸಲದಂತೆ ಈ ವರ್ಷವೂ ಸರಕಾರ ತನ್ನ ಸಹಕಾರ ಮುಂದುವರಿಸಲಿದೆ. ವಿಮಾನಯಾನ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಏರ್‌ಶೋ ಬೆಂಗಳೂರಿನ ಪಾಲಿಗೆ ಅತ್ಯಂತ ಮಹತ್ವದ್ದು. ಮೂಲ ಸೌಕರ್ಯ, ಆರೋಗ್ಯ, ಭದ್ರತೆ ಪ್ರತಿಯೊಂದರಲ್ಲೂ ಸಿದ್ಧತೆಗಳು ನಡೆದಿವೆ ಎಂದು ವಿವರಿಸಿದರು.

ರಕ್ಷಣಾ ವಸ್ತು ಪ್ರದರ್ಶನ ಸಂಸ್ಥೆಯ ನಿರ್ದೇಶಕ ಅಚಲ್‌ ಮಲ್ಹೋತ್ರಾ ಹಾಗೂ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸೈನಿಕ ಶಾಲೆಗೆ ಬೇಡಿಕೆ

ರಾಜ್ಯಕ್ಕೆ ಇನ್ನೊಂದು ಸೈನಿಕ ಶಾಲೆ ಮಂಜೂರು ಮಾಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶುಕ್ರವಾರ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಕಾರಜೋಳ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಬರ ಮಾಡಿಕೊಂಡು ಸಲ್ಲಿಸಿದ ಬೇಡಿಕೆ ಪತ್ರದಲ್ಲಿಸೈನಿಕ ಶಾಲೆಯೂ ಸೇರಿದೆ. ಮಧ್ಯ ಕರ್ನಾಟಕದಲ್ಲಿ ಸೈನಿಕ ಶಾಲೆ ತೆರೆದರೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದ್ದು ರಾಜನಾಥ ಸಿಂಗ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ