ಆ್ಯಪ್ನಗರ

ರೋಡ್‌ ಶೋ ಮೂಲಕ ಮನಗೆಲ್ಲಲು ಪೈಪೋಟಿ

ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಮಂಗಳವಾರ ಇಡೀ ದಿನ ರೋಡ್‌ ಶೋ ನಡೆಸಿ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದರು.

Vijaya Karnataka 17 Apr 2019, 5:00 am
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಮಂಗಳವಾರ ಇಡೀ ದಿನ ರೋಡ್‌ ಶೋ ನಡೆಸಿ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದರು.
Vijaya Karnataka Web bangalore north road show
ರೋಡ್‌ ಶೋ ಮೂಲಕ ಮನಗೆಲ್ಲಲು ಪೈಪೋಟಿ


ಉತ್ತರ ಲೋಕಸಭೆ ಕ್ಷೇತ್ರಕ್ಕೆ ಒಳಪಡುವ ಎಲ್ಲ ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ರೋಡ್‌ ಶೋ ಮೂಲಕವೇ ಜನರನ್ನು ತಲುಪುವ ಯತ್ನ ಮಾಡಿದವು. ಒಂದೆಡೆ ಅಭ್ಯರ್ಥಿ, ಇನ್ನೊಂದೆಡೆ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಪ್ರಚಾರ ಕೈಗೊಂಡರು. ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಂಡರೂ, ಎರಡೂ ಪಕ್ಷಗಳ ಕಾರ್ಯಕರ್ತರು ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದು ಕಂಡು ಬಂದಿತು.

ಬೆಳಗ್ಗೆ 8.30ಕ್ಕೆ ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಅವರು ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಪ್ರಚಾರ ಆರಂಭಿಸಿದರು. ರೋಡ್‌ ಶೋ ಮೂಲಕವೇ ಹೆಚ್ಚಿನ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚಿಸಿದರು. ನಟ ಜಗ್ಗೇಶ್‌ ಕೂಡ ಜತೆಯಲಿದ್ದು, ಕೆಲವೆಡೆ ಸಿನೆಮಾ ಡೈಲಾಗ್‌ ಹೊಡೆದು ಮತ ಯಾಚಿಸಿದರು. ಮಧ್ಯಾಹ್ನ ಬ್ಯಾಟರಾಯನಪುರ ವ್ಯಾಪ್ತಿಯ ಜಕ್ಕೂರು ವಾರ್ಡ್‌ನಲ್ಲಿ ಪ್ರಚಾರ ನಡೆಸಿದರು. ಮಧ್ಯಾಹ್ನದ ಬಳಿಕ ವಿದ್ಯಾರಣ್ಯಪುರ, ಕುವೆಂಪುನಗರ ವಾರ್ಡ್‌ಗಳಲ್ಲಿ ಮತಯಾಚಿಸಿದರು. ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಜಮಾಯಿಸಿ ಪಕ್ಷದ ಪರ ಜಯಘೋಷ ಮೊಳಗಿಸಿದರು.

ಬಿರುಸಿನ ಪ್ರಚಾರಕ್ಕೆ ಮುಖಂಡರ ಸಾಥ್‌: ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಅವರು, ಬೆಳಗ್ಗೆ ಹೆಬ್ಬಾಳದ ಪಶುವೈದ್ಯ ಕಾಲೇಜ್‌ ಆವರಣದ ಪಾರ್ಕ್‌ನಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡಿ ಮತಯಾಚಿಸಿದರು. ನಂತರ ಶಾಸಕ ಬೈರತಿ ಸುರೇಶ್‌ ಜತೆ ಹೆಬ್ಬಾಳದ ಕೆಲ ಬಡಾವಣೆಗಳಲ್ಲಿ ಬಳಿಕ ಕೆ.ಆರ್‌.ಪುರಂ ವಿಧಾನಸಭೆ ಕ್ಷೇತ್ರದ ರಾಮಮೂರ್ತಿನಗರ ಸುತ್ತಲಿನ ಭಾಗದಲ್ಲಿ ಪ್ರಚಾರ ನಡೆಸಿದರು. ಪ್ರಚಾರದ ಮಧ್ಯೆ ಡಾ.ಅಂಬೇಡ್ಕರ್‌ ಹಾಗೂ ಕನಕದಾಸರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಹೆಬ್ಬಾಳ, ನಾಗೇನಹಳ್ಳಿಯಲ್ಲಿ ರೋಡ್‌ ಶೋ ನಡೆಸಿದರು. ಸಂಜೆ ಪ್ರಚಾರವನ್ನು ಅಂತ್ಯಗೊಳಿಸುವ ಮುನ್ನ ಅವರು ಮಲ್ಲೇಶ್ವರಂ ಹಾಗೂ ಬ್ಯಾಟರಾಯನಪುರ ವ್ಯಾಪ್ತಿಯ ಕೆಲವೆಡೆ ಪ್ರಚಾರ ಕೈಗೊಂಡರು, ಕಾರ್ಯಕರ್ತರ ಸಭೆ ನಡೆಸಿದರು.

ಕೇಂದ್ರ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಏನನ್ನೂ ನೀಡಿಲ್ಲ. ಇಲ್ಲಿನ ಸಂಸದರು ಮತದಾರರನ್ನು ಭೇಟಿ ಮಾಡಲು ನಿರಾಸಕ್ತಿ ವಹಿಸಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು.
- ಕೃಷ್ಣಬೈರೇಗೌಡ, ಮೈತ್ರಿ ಅಭ್ಯರ್ಥಿ
ಕಾಂಗ್ರೆಸ್‌ ಅಭ್ಯರ್ಥಿ ಬರಿ ಸುಳ್ಳುಗಳನ್ನೇ ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ನಾನು ಮಾಡಿದ ಸಾಧನೆ ಹಾಗೂ ಮೋದಿ ಸರಕಾರದ ಕೆಲಸ ಗಮನಿಸಿ ಮತದಾರರು ಮತ್ತೆ ಬಿಜೆಪಿಗೆ ಮತ ಹಾಕಲಿದ್ದಾರೆ.
- ಸದಾನಂದಗೌಡ, ಬಿಜೆಪಿ ಅಭ್ಯರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ