ಆ್ಯಪ್ನಗರ

ಬೆಂಗಳೂರು ವಿಷನ್‌ ಗ್ರೂಪ್‌ ರಚನೆ ರದ್ದು

ಸಂವಿಧಾನಬದ್ಧ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಅಸ್ತಿತ್ವದಲ್ಲಿರಬೇಕಾದರೆ ಮತ್ತೊಂದು ಪೂರಕ ಸಂಸ್ಥೆ ಬೆಂಗಳೂರು ವಿಷನ್‌ ಗ್ರೂಪ್‌ ರಚನೆ ಅಗತ್ಯವೇನಿತ್ತು ಎಂದು ಚಾಟಿ ಬೀಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಷನ್‌ ಗ್ರೂಪ್‌ ರದ್ದುಗೊಳಿಸಿದೆ.

Vijaya Karnataka 12 Jun 2018, 5:00 am
ಬೆಂಗಳೂರು: ಸಂವಿಧಾನಬದ್ಧ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಅಸ್ತಿತ್ವದಲ್ಲಿರಬೇಕಾದರೆ ಮತ್ತೊಂದು ಪೂರಕ ಸಂಸ್ಥೆ ಬೆಂಗಳೂರು ವಿಷನ್‌ ಗ್ರೂಪ್‌ ರಚನೆ ಅಗತ್ಯವೇನಿತ್ತು ಎಂದು ಚಾಟಿ ಬೀಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಷನ್‌ ಗ್ರೂಪ್‌ ರದ್ದುಗೊಳಿಸಿದೆ.
Vijaya Karnataka Web bangalore vision group canceled
ಬೆಂಗಳೂರು ವಿಷನ್‌ ಗ್ರೂಪ್‌ ರಚನೆ ರದ್ದು


ಈ ಕುರಿತಂತೆ ಅಧಿಕೃತ ಆದೇಶವನ್ನೂ ಹೊರಡಿಸಿರುವ ಸರಕಾರ, ಈ ಕುರಿತ ಮೆಮೋವನ್ನು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿತು.

ಸಂಸದ ರಾಜೀವ್‌ ಚಂದ್ರಶೇಖರ್‌ ಮತ್ತು ನಮ್ಮ ಬೆಂಗಳೂರು ಫೌಂಡೇಷನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸಿಜೆ ದಿನೇಶ್‌ ಮಹೇಶ್ವರಿ ಮತ್ತು ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಸರಕಾರಿ ವಕೀಲರು ಮೆಮೋ ಸಲ್ಲಿಸಿದರು. ಸರಕಾರಿ ಆದೇಶದ ಆಂಗ್ಲ ಅನುವಾದದ ಪ್ರತಿಯಲ್ಲಿ , 'ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ರದ್ದುಗೊಳಿಸಲಾಗಿದೆ' ಎಂದು ಉಲ್ಲೇಖಿಸಿದ್ದಕ್ಕೆ ಸಿಟ್ಟಿಗೆದ್ದ ಸಿಜೆ, ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

''ಹೈಕೋರ್ಟ್‌ ನಿರ್ದೇಶನ ನೀಡಿದೆಯೇ? ಏಕೆ ಹೀಗೆ ಮಾಡಿದ್ದೀರಿ? ನಾವು ಒಂದು ಸಮಿತಿ ಇರಬೇಕಾದರೆ ಮತ್ತೊಂದರ ಅಗತ್ಯವಿಲ್ಲ ಎಂದಷ್ಟೇ ಹೇಳಿದ್ದೇವೆ ? ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ? ಅಧಿಕಾರಿಗಳು ಎಲ್ಲವನ್ನೂ ಕೋರ್ಟ್‌ ಮೇಲೆ ಹಾಕಿ 'ಸ್ಮಾರ್ಟ್‌' ಆಗಲು ಯತ್ನಿಸುತ್ತಿದ್ದಾರೆಯೇ? ಯಾವ ಅಧಿಕಾರಿ ಆದೇಶ ಹೊರಡಿಸಿದ್ದು, ಅವರಿಗೆ ನೋಟಿಸ್‌ ಜಾರಿಗೊಳಿಸಬೇಕಾಗುತ್ತದೆ? ಅವರನ್ನು ಇಲ್ಲಿಗೆ ಕರೆಸಬೇಕಾಗುತ್ತದೆ ''ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿತು.

ಅಷ್ಟರಲ್ಲಿ ಮತ್ತೊಬ್ಬ ಸರಕಾರಿ ವಕೀಲರು ''ಆದೇಶ ಕನ್ನಡದಲ್ಲಿ ಸರಿ ಇದೆ, ಆದರೆ ಆಂಗ್ಲ ಭಾಷೆಗೆ ಅನುವಾದ ಮಾಡುವಾಗ ತಪ್ಪಾಗಿದೆ. ಕನ್ನಡದಲ್ಲಿ ಹೈಕೋರ್ಟ್‌ ಸೂಚನೆ ಮೇರೆಗೆ ಮರುಪರಿಶೀಲನೆ ನಡೆಸಿ ಗ್ರೂಪ್‌ ರದ್ದು ಮಾಡಲು ತೀರ್ಮಾನಿಸಲಾಗಿದೆ''ಎಂದು ಸಮಜಾಯಿಷಿ ನೀಡಿದರು.

ನ್ಯಾಯಪೀಠದಲ್ಲಿದ್ದ ನ್ಯಾ.ಎಸ್‌.ಕೃಷ್ಣದೀಕ್ಷಿತ್‌ ಮತ್ತು ಅರ್ಜಿದಾರರ ಪರ ವಾದ ಮಂಡನೆಗೆ ಹಾಜರಿದ್ದ ಹಿರಿಯ ನ್ಯಾಯವಾದಿ ಸಜ್ಜನ್‌ ಪೂವಯ್ಯ ಕೂಡ, ಕನ್ನಡದ ಆದೇಶ ಓದಿ ಸರಿ ಇದೆ. ಅನುವಾದದಲ್ಲಿ ದೋಷವಿದೆ''ಎಂದರು. ಆಗ ನ್ಯಾಯಾಧೀಶರು ಕೂಡಲೇ ಆಂಗ್ಲ ಅನುವಾದವನ್ನು ಸರಿಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸೂಚನೆ ನೀಡಿದರು. ಅಲ್ಲದೆ, ಅರ್ಜಿಯನ್ನು ಇತ್ಯರ್ಥಗೊಳಿಸಿ, ಬೆಂಗಳೂರು ನೀಲನಕ್ಷೆ ಕ್ರಿಯಾ ಸಮಿತಿ (ಬಿಬಿಪಿಎಜಿ) ಯಾವುದಾದರೂ ಯೋಜನೆಗಳ ಬಗ್ಗೆ ಮಾಹಿತಿಯನ್ನು ಅಥವಾ ಅಭಿಪ್ರಾಯವನ್ನು ಸಂಗ್ರಹಿಸಿದ್ದರೆ ಅವುಗಳೆಲ್ಲವನ್ನೂ ಬಿಎಂಪಿಸಿಗೆ ಸಲ್ಲಿಸಬೇಕು ಎಂದು ಆದೇಶಿಸಿತು.

ನ್ಯಾಯಪೀಠ''ಈ ರೀತಿ ಹತ್ತಾರು ಸಂಸ್ಥೆಗಳನ್ನು ಒಂದೇ ಕೆಲಸಕ್ಕೆ ರಚನೆ ಮಾಡುವುದನ್ನು ಮೊದಲು ನಿಲ್ಲಿಸಿ, ಸರಕಾರದ ಇಂತಹ ಲಾಜಿಕ್‌ ಅರ್ಥವಾಗುವುದಿಲ್ಲ. ಸರಕಾರ ಬೇಕಿದ್ದರೆ ಅಂತಹ ಸಂಸ್ಥೆಗಳ, ಪರಿಣಿತರ, ತಜ್ಞರ ಅಭಿಪ್ರಾಯಗಳನ್ನು ಪಡೆದು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ.ಮುಖ್ಯಮಂತ್ರಿಗಳ ನೇತೃತ್ವದ ಬಿಎಂಪಿಸಿಎಗಿಂತ ದೊಡ್ಡ ಸಂಸ್ಥೆ ಬೇಕಾ '' ಎಂದು ಪ್ರಶ್ನಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ