ಆ್ಯಪ್ನಗರ

ಕ್ಷೌರಿಕರ ವಹಿವಾಟಿಗೆ ಬಿತ್ತು ಕೊರೊನಾ ಕತ್ತರಿ

ಮೊದಲೆಲ್ಲ ಹೇರ್‌ ಕಟಿಂಗ್‌ ಜತೆ ಶೇವಿಂಗ್‌, ಫೇಶಿಯಲ್‌, ಹೇರ್‌ ಕಲರ್‌, ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ಹೇರ್‌ ಕಟಿಂಗ್‌ ಮಾತ್ರ ಮಾಡಿಸಿಕೊಳ್ಳುತ್ತಾರೆ.

Vijaya Karnataka Web 22 May 2020, 2:22 pm
ಬೆಂಗಳೂರು: ಲಾಕ್‌ಡೌನ್‌ಗೆ ಕೊಂಚ ರಿಲೀಫ್‌ ನೀಡಿ ಅಂಗಡಿಗಳನ್ನು ತೆರೆಯಲು ಸರಕಾರ ಅವಕಾಶ ಮಾಡಿಕೊಟ್ಟಿದ್ದರೂ, ಹೇರ್‌ ಕಟಿಂಗ್‌, ಸಲೂನ್‌ ಹಾಗೂ ಸ್ಪಾಗಳ ಸ್ಥಿತಿ ಇನ್ನೂ ಚೇತರಿಕೆ ಕಂಡಿಲ್ಲ. ಕೊರೊನಾ ಭೀತಿಯಿಂದ ಗ್ರಾಹಕರು ಕ್ಷೌರದ ಅಂಗಡಿಗಳತ್ತ ಮುಖ ಮಾಡುತ್ತಿಲ್ಲ.
Vijaya Karnataka Web ಕಟಿಂಗ್‌
ಕಟಿಂಗ್‌


ಕ್ಷೌರದ ಅಂಗಡಿಗಳು ತೆರೆದು ಕಾರ್ಯ ಪ್ರಾರಂಭಿಸಿ ಹಲವು ದಿನಗಳಾದರೂ ಶೇ. 50 ರಷ್ಟು ಗ್ರಾಹಕರು ಕಟಿಂಗ್‌ ಶಾಪ್‌ಗಳ ಕಡೇ ಬರುತ್ತಿಲ್ಲ ಎನ್ನುವುದು ಕ್ಷೌರಿಕರ ಅಳಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಶಾಪ್‌ಗಳನ್ನು ತೆಗೆದಿದ್ದರೂ ಗ್ರಾಹಕರು ಬರುತ್ತಿಲ್ಲ. ಲಾಕ್‌ಡೌನ್‌ಗಿಂತ ಮುನ್ನ ನಿತ್ಯ 40 ರಿಂದ 50 ಜನರು ಬರುತ್ತಿದ್ದರು. ಇದೀಗ 5 ರಿಂದ 10 ಮಂದಿ ಬರುವುದೇ ಹೆಚ್ಚಾಗಿದೆ ಎನ್ನುತ್ತಾರೆ ಕ್ಷೌರಿಕರು.

ಮೊದಲೆಲ್ಲ ಹೇರ್‌ ಕಟಿಂಗ್‌ ಜತೆ ಶೇವಿಂಗ್‌, ಫೇಶಿಯಲ್‌, ಹೇರ್‌ ಕಲರ್‌, ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ಹೇರ್‌ ಕಟಿಂಗ್‌ ಮಾತ್ರ ಮಾಡಿಸಿಕೊಳ್ಳುತ್ತಾರೆ. ಕಟಿಂಗ್‌ಗೆ 70 ರೂ ಇದ್ದರೆ, ಕೂದಲಿಗೆ ಬಣ್ಣ ಹಚ್ಚಲು, ಫೇಷಿಯಲ್‌, ಮಸಾಜ್‌ ಎಲ್ಲಾ ಸೇರಿ 300 ರೂ. ನಿಂದ 400 ರೂ ಆಗುತ್ತಿತ್ತು. ಆದರೆ, ಗ್ರಾಹಕರು ಕಟಿಂಗ್‌ ಬಿಟ್ಟು ಮತ್ಯಾವ ಸೇವೆ ಪಡೆಯಲು ಸಿದ್ಧರಿಲ್ಲ ಎಂದು ಅಳಲು ತೋಡಿಕೊಂಡರು.

ರಾಜ್ಯದಲ್ಲಿ 3.5 ಲಕ್ಷ ಜನ ಕ್ಷೌರಿಕರಿದ್ದಾರೆ. ಈ ಪೈಕಿ ಒಂದು ಲಕ್ಷಕ್ಕೂ ಅಧಿಕ ಮಂದಿ ಬೆಂಗಳೂರಿನಲ್ಲೇ ವೃತ್ತಿ ಮಾಡುತ್ತಿದ್ದಾರೆ. ಸುಮಾರು 50 ರಿಂದ 60 ಲಕ್ಷ ರೂ. ಬಂಡವಾಳ ಹೂಡಿ ಸ್ಪಾಗಳನ್ನು ಪ್ರಾರಂಭಿಸಲಾಗಿದೆ. ತಿಂಗಳ ಬಾಡಿಗೆಯೇ 40 ರಿಂದ 50 ಸಾವಿರ ತೆರಬೇಕಿದೆ. ಹೊರ ರಾಜ್ಯಗಳ ಕಾರ್ಮಿಕರು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರಿಲ್ಲದೆ ಬಾಡಿಗೆ ಕಟ್ಟುವುದು, ಕಾರ್ಮಿಕರಿಗೆ ಸಂಬಳ ನೀಡುವುದೇ ಕಷ್ಟವಾಗಿದೆ ಎಂದು ರಾಜಾಜಿನಗರ ಸ್ಪಾ ಮಾಲೀಕ, ಹೇರ್‌ಸ್ಟೈಲ್‌ ಸೋಮಣ್ಣ ಹೇಳಿದರು.

ಬ್ಯೂಟಿ ಪಾರ್ಲರ್‌

''ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಗ್ರಾಹಕರು ಬರುತ್ತಿದ್ದಾರೆ. ಆದರೆ, ಮೊದಲಿನಷ್ಟು ಇಲ್ಲ. ಬಹುತೇಕ ಮಹಿಳೆಯರಲ್ಲಿ ಕೊರೊನಾ ಭೀತಿ ದೂರವಾಗಿಲ್ಲ. ಹೀಗಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ,'' ಎಂದು ಬ್ಯೂಟಿ ಪಾರ್ಲರ್‌ ಮಾಲೀಕರಾದ ಶಶಿಕಲಾ ತಿಳಿಸಿದರು.

''ಈ ಹಿಂದೆ ಬ್ಯೂಟಿ ಪಾರ್ಲರ್‌ನೊಳಗೆ ಸೇವೆ ನೀಡುವುದರ ಜತೆಗೆ ಮದುವೆ ಕಾರ್ಯಕ್ರಮಗಳಲ್ಲಿ ವಧು ಅಲಂಕಾರ ಮಾಡುವುದನ್ನು ಒಪ್ಪಿಕೊಂಡು ಹೋಗುತ್ತಿದ್ದೆವು. ಆದರೆ, ಇದೀಗ ಸರಳ ಮದುವೆಗಳು ನಡೆಯುವುದರಿಂದ ಆರ್ಡರ್‌ಗಳು ಸಿಗುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ