ಈ ಬಾರಿ 10 ಸಾವಿರ ಕೋಟಿ ಬಜೆಟ್
ಬಿಬಿಎಂಪಿಯ 2019-20ನೇ ಸಾಲಿನ ಆಯವ್ಯಯವು ಫೆ. 18ಕ್ಕೆ ಮಂಡನೆಯಾಗಲಿದ್ದು, ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಪಿ.ಹೇಮಲತಾ ಗೋಪಾಲಯ್ಯ ಬಜೆಟ್ ಮಂಡಿಸಲಿದ್ದಾರೆ.
Vijaya Karnataka 12 Feb 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
ಬಿಬಿಎಂಪಿಯ 2019-20ನೇ ಸಾಲಿನ ಆಯವ್ಯಯವು ಫೆ. 18ಕ್ಕೆ ಮಂಡನೆಯಾಗಲಿದ್ದು, ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಪಿ.ಹೇಮಲತಾ ಗೋಪಾಲಯ್ಯ ಬಜೆಟ್ ಮಂಡಿಸಲಿದ್ದಾರೆ.
''ಬಜೆಟ್ನ ಕರಡು ಪ್ರತಿ ಬಂದಿಲ್ಲ. ಆದರೆ, ಫೆ. 18ಕ್ಕೆ ಬಜೆಟ್ ಮಂಡನೆ ಮಾಡಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರವು 2300 ಕೋಟಿ ರೂ. ಅನುದಾನ ಘೋಷಿಸಿದೆ. ಆಸ್ತಿ ತೆರಿಗೆ, ಸುಧಾರಣಾ ವೆಚ್ಚದಿಂದ 3500 ಕೋಟಿ ರೂ. ನಿರೀಕ್ಷಿಸಲಾಗಿದೆ. ಸಂಗ್ರಹವಾಗುವ ಆದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಾಸ್ತವಕ್ಕೆ ಹತ್ತಿರವಾದ ಆಯವ್ಯಯ ಮಂಡಿಸಲಾಗುವುದು. ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು,'' ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು.
''ಕಳೆದ ಸಲ 10,300 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಲಾಗಿತ್ತು. ಈ ಬಾರಿ 10 ಸಾವಿರ ಕೋಟಿ ರೂ. ದಾಟದಂತೆ ವಾಸ್ತವಿಕ ಬಜೆಟ್ ಮಂಡಿಸಲಾಗುವುದು. ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಯೋಜನೆಯೊಂದನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ,'' ಎಂದು ಬಿಬಿಎಂಪಿ ಸದಸ್ಯರೊಬ್ಬರು ಹೇಳಿದರು.
''ಖಾಸಗಿ ಶಾಲೆಗಳಂತೆಯೇ ಪಾಲಿಕೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದ ಬ್ಲೇಜರ್ಸ್ಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, ಬಜೆಟ್ನಲ್ಲಿ ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಪೌಡರ್ ಅನ್ನು ನೀಡಲು ಉದ್ದೇಶಿಸಲಾಗಿದೆ. ಯೋಗ ತರಗತಿಗಳನ್ನು ಆರಂಭಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ನವೀಕರಣ ಮತ್ತು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಕೋರಲಾಗಿದೆ,'' ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.
''ಬಜೆಟ್ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಪ್ರತಿ ವಾರ್ಡ್ಗೆ 20 ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲು ಬಜೆಟ್ನಲ್ಲಿ 15 ಕೋಟಿ ರೂ. ಅನುದಾನ ಮೀಸಲಿಡುವಂತೆ ಕೋರಲಾಗಿದೆ,'' ಎಂದು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಸೌಮ್ಯ ಶಿವಕುಮಾರ್ ಮಾಹಿತಿ ನೀಡಿದರು.