ಆ್ಯಪ್ನಗರ

ಬೆಂಗಳೂರಿನಲ್ಲಿ ರಸ್ತೆ ಅಗೆತಕ್ಕೆ ಬ್ರೇಕ್‌ ಹಾಕಿದ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ನವೆಂಬರ್ 10 ಡೆಡ್‌ಲೈನ್‌

ಬೆಂಗಳೂರು ರಸ್ತೆಗಳಲ್ಲಿ ರಸ್ತೆ ಅಗೆತವೇ ಒಂದು ದೊಡ್ಡ ಪ್ರಾಬ್ಲಂ. ಈ ಹಿನ್ನೆಲೆ ಕೊನೆಗೂ ಎಚ್ಚೆತ್ತುಕೊಂಡ ಬಿಬಿಎಂಪಿ ಇದಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ. ಇನ್ನೊಂದೆಡೆ ಪಾಲಿಕೆಯ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ನ.10ರವರೆಗೆ ಗಡುವು ನೀಡಲಾಗಿದೆ.

Vijaya Karnataka 23 Oct 2019, 1:00 pm
ಬೆಂಗಳೂರು: ನಗರದಲ್ಲಿ ರಸ್ತೆ ಅಗೆತಕ್ಕೆ ಕೊನೆ ಹಾಡಲು ಕೊನೆಗೂ ಬಿಬಿಎಂಪಿ ಮುಂದಾಗಿದೆ. ಹಾಲಿ ನಡೆದಿರುವ ರಸ್ತೆ ಅಗೆತ ಸೇರಿದಂತೆ ಅನುಮತಿ ಪಡೆದಿದ್ದ ಎಲ್ಲಾ ಬಗೆಯ ರಸ್ತೆ ಅಗೆತವನ್ನು ಮುಂದಿನ ಆದೇಶದ ತನಕ ಸ್ಥಗಿತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
Vijaya Karnataka Web road digging


ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಂಗಳವಾರ ಮಾತನಾಡಿ, ''ನಗರದ ರಸ್ತೆಗಳಲ್ಲಿ ಸಂಚಾರಕ್ಕೆ ಕಂಟಕವಾಗಿದ್ದ ರಸ್ತೆ ಅಗೆತಕ್ಕೆ ತಡೆ ನೀಡಲಾಗಿದೆ. ಈಗಾಗಲೇ ಅನುಮತಿ ಪಡೆದಿದ್ದರೂ, ಎಲ್ಲವನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ,'' ಎಂದರು.

6 ತಿಂಗಳಿಗೊಮ್ಮೆ ರಸ್ತೆ ಅಗೆತ: ಬೆಂಗಳೂರಿನ ವೈಟ್‌ಫೀಲ್ಡ್‌ ನಿವಾಸಿಗಳಿಗೆ ತಪ್ಪದ ಕಿರಿಕಿರಿ

ಮೇಯರ್‌ ಗೌತಮ್‌ಕುಮಾರ್‌ ಕೂಡ ತುರ್ತು ಸಭೆ ನಡೆಸಿ ಆಯುಕ್ತರೊಂದಿಗೆ ಚರ್ಚಿಸಿದರು. ರಸ್ತೆ ಅಗೆತದಿಂದ ಉಂಟಾಗುತ್ತಿರುವ ನಾನಾ ರೀತಿಯ ತೊಂದರೆ ಕಡಿವಾಣ ಹಾಕಲು ಇಂತಹ ತೀರ್ಮಾನ ಅಗತ್ಯವಿತ್ತು ಎಂದು ಅವರು ಆಯುಕ್ತರ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದರು.

''ಹವಾಮಾನ ಇಲಾಖೆಯು ನಗರಕ್ಕೆ ಯಲ್ಲೋ ಅಲರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿಭಾರಿ ಮಳೆಯನ್ನು ಎದುರಿಸಲು ಎಲ್ಲಾವಲಯಗಳಲ್ಲೂ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಇದಕ್ಕಾಗಿ ಪಾಲಿಕೆ ಅಧಿಕಾರಿಗಳು ಬಿಎಂಆರ್‌ಸಿಎಲ್‌ ಹಾಗೂ ಬೆಸ್ಕಾಂನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮೆಟ್ರೊ ಕಾಮಗಾರಿ ಸ್ಥಳಗಳಲ್ಲಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್‌ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು,'' ಎಂದು ಮೇಯರ್‌ ತಿಳಿಸಿದರು.

‘ಫಿಕ್ಸ್‌ ಮೈ ಸ್ಟ್ರೀಟ್‌ ಮೊಬೈಲ್‌ ಆ್ಯಪ್‌’ ಸೇವೆಗೆ ಮರುಚಾಲನೆ

ಪ್ರಹರಿ ವಾಹನಗಳ ಮರು ಹಂಚಿಕೆ

ಬಿಬಿಎಂಪಿಯ ನಿಯಂತ್ರಣ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಹರಿ ವಾಹನಗಳನ್ನು ಆಡಳಿತಾತ್ಮಕ ಕೆಲಸಕ್ಕೆ ಮರು ಹಂಚಿಕೆ ಮಾಡಲಾಗಿದೆ. ಪ್ರಹರಿ ವಾಹನ ಹಾಗೂ ಚಾಲಕರನ್ನು ಸಂಬಂಧಿಸಿದ ನಿಯಂತ್ರಣ ಕೊಠಡಿಗಳಿಗೆ ಬಿಡುಗಡೆ ಮಾಡಲು ವಲಯ ಹೆಚ್ಚುವರಿ/ಜಂಟಿ ಆಯುಕ್ತರ ಅಧೀನದಡಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

ದ್ವಿಚಕ್ರ ವಾಹನದಲ್ಲಿ ಸಂಚರಿಸಿ ರಸ್ತೆ ಗುಂಡಿ, ಕಸದ ಸಮಸ್ಯೆ ಪರಿಶೀಲಿಸಿದ ಮೇಯರ್‌

ರಸ್ತೆಗುಂಡಿ ಮುಚ್ಚಲು ನ.10ರ ಗಡುವು

ಸದ್ಯ ಮಳೆಯಾಗುತ್ತಿದ್ದರೂ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪಾಲಿಕೆಯ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ನ.10ರವರೆಗೆ ಗಡುವು ನೀಡಲಾಗಿದೆ. ಆಯಾ ವಲಯ, ವಿಭಾಗಗಳಲ್ಲಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವೆಡೆ ರಸ್ತೆಗಳನ್ನು ದುರಸ್ತಿ ಪಡಿಸಬೇಕು ಎಂದು ಮೇಯರ್‌ ಹಾಗೂ ಆಯುಕ್ತರು ಕೆಳ ಹಂತದ ಅಧಿಕಾರಿ ವರ್ಗಕ್ಕೆ ಕಟ್ಟಪ್ಪಣೆ ಮಾಡಿದ್ದಾರೆ.

ರಾಜಕಾಲುವೆಗಳ ಬಳಿ ಎಚ್ಚರಕ್ಕೆ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಇದೆ. ಈ ಪೈಕಿ 440 ಕಿ.ಮೀ. ವರೆಗೆ ತಡೆಗೋಡೆ ನಿರ್ಮಿಸಿದ್ದು, ಉಳಿದ 402 ಕಿ.ಮೀ. ಕಚ್ಚಾ ರಾಜಕಾಲುವೆಗಳಿವೆ. ಇಂತಹ ಕಡೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ನಿಮಿತ್ತ ತಾತ್ಕಾಲಿಕವಾಗಿ ಮರಳು ಮೂಟೆಗಳನ್ನು ಇರಿಸಬೇಕು. ಅಪಾಯ ಉಂಟು ಮಾಡುವ ರಾಜಕಾಲುವೆಗಳ ಬಳಿ ನೆಲಮಟ್ಟದಿಂದ ನಾಲ್ಕು ಅಡಿ ಎತ್ತರದ ತಡೆಗೋಡೆ ನಿರ್ಮಿಸಿ ಅದರ ಮೇಲೆ ಗ್ರಿಲ್‌ ಅಳವಡಿಸುವಂತೆ ಸೂಚಿಸಲಾಗಿದೆ.

ಮಳೆ ಅನಾಹುತ ಎದುರಿಸಲು ಮುಂಜಾಗ್ರತಾ ಕ್ರಮಗಳು

* ಎಲ್ಲಾ ವಲಯಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಕ್ರಮ

* ಪ್ರಹರಿ ವಾಹನಗಳಲ್ಲಿ ನೀರು ಹೊರ ಹಾಕುವ ಯಂತ್ರ ಬಳಕೆ

* 24/7ರಂತೆ ನಿಯಂತ್ರಣ ಕೊಠಡಿಗಳ ಕಾರ್ಯನಿರ್ವಹಣೆ, ರಾತ್ರಿ ಗಸ್ತು

* ಅಪಾಯ ಎದುರಿಸಲು ಎನ್‌ಡಿಆರ್‌ಎಫ್‌ ಸಹಿತ ಸಿವಿಲ್‌ ಡಿಫೆನ್ಸ್‌, ಆಗ್ನಿಶಾಮಕ ದಳ ನಿಯೋಜನೆ

* ತಗ್ಗು ಪ್ರದೇಶಗಳಲ್ಲಿರುವ ಶಾಲೆ, ಮನೆ ಒಳಗೊಂಡ ಪಟ್ಟಿ ಸಿದ್ಧಪಡಿಸುವಿಕೆ

* ಎಲ್ಲಾ ಮಾದರಿಯ ರಸ್ತೆಗುಂಡಿಗಳನ್ನು ತಕ್ಷಣವೇ ಮುಚ್ಚಲು ಕ್ರಮ

* ಕೆರೆಗಳ ಬಂಡು, ಕೋಡಿ ಸ್ಥಳದ ಪರಿಶೀಲನೆ, ಮುಂಜಾಗ್ರತೆಗೆ ಸೂಚನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ