ಆ್ಯಪ್ನಗರ

ನಿಫಾ ಭೀತಿ: ಹಂದಿಗಳ ಸೆರೆಗೆ ಮುಂದಾದ ಬಿಬಿಎಂಪಿ

ನಿಫಾ ವೈರಸ್‌ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ನಗರದ ರಸ್ತೆಗಳಲ್ಲಿ ಅಡ್ಡಾಡುವ ಹಂದಿಗಳ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

Vijaya Karnataka Web 10 Jun 2018, 2:06 pm
ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್‌ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ನಗರದ ರಸ್ತೆಗಳಲ್ಲಿ ಅಡ್ಡಾಡುವ ಹಂದಿಗಳ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
Vijaya Karnataka Web pig


ನಗರದ ಹೊರವಲಯದ ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಹೆಸರಘಟ್ಟ, ಪೀಣ್ಯ, ಸುಂಕದಕಟ್ಟೆ , ಕೆಂಗೇರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಂದಿ ಸಾಕಾಣಿಕೆ ನಡೆಯುತ್ತಿದೆ. ಹಾಗೆಯೇ ತಳಿ ಸಂವರ್ಧನೆ ಮಾಡುತ್ತಿರುವ ಬಗ್ಗೆಯೂ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ದಾರೆ. ಬಾವಲಿಗಳು ತಿಂದು ಬಿಟ್ಟ ಆಹಾರವು ಹಂದಿಗಳ ಹೊಟ್ಟೆ ಸೇರುವುದರಿಂದ ನಿಫಾ ಸೋಂಕು ಹರಡುವ ಸಾಧ್ಯತೆಗಳಿವೆ.
‘‘ಹಂದಿಗಳ ಸೆರೆಗೆ ಏಪ್ರಿಲ್‌ನಲ್ಲೇ ಟೆಂಡರ್‌ ಕರೆಯಲಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಚುನಾವಣಾ ಮುಗಿದ ತಕ್ಷಣವೇ ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗುವುದು,’’ ಎಂದು ಪಾಲಿಕೆಯ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ಖಾನ್‌ ತಿಳಿಸಿದರು.

‘‘ಹಂದಿಗಳ ಸೆರೆಗೆ ಕರೆದಿದ್ದ ಟೆಂಡರ್‌ನಲ್ಲಿ ಮೂವರು ಗುತ್ತಿಗೆದಾರರು ಭಾಗವಹಿಸಿದ್ದರು. ಹಂದಿಗಳನ್ನು ಸೆರೆ ಹಿಡಿಯುವ ಗುತ್ತಿಗೆದಾರರಿಗೆ ತೂಕದ ಆಧಾರದ ಮೇಲೆ ಬಿಲ್‌ ಪಾವತಿ ಮಾಡಲಾಗುವುದು. ಪ್ರತಿ ಕೆ.ಜಿ ಗೆ 70 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಸೆರೆ ಹಿಡಿಯಲಾಗುವ ಹಂದಿಗಳನ್ನು ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ,’’ ಎಂದು ಪಶುಪಾಲನೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿ.ಆನಂದ್‌ ಹೇಳಿದರು.

‘‘ಹಂದಿ ಹಾವಳಿ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ಎಸ್‌.ಕೆ.ಗಾರ್ಡನ್‌, ತಾವರೆಕೆರೆಯಲ್ಲಿ ಹಂದಿಗಳ ಕಸಾಯಿಖಾನೆಗಳಿವೆ. ಇಲ್ಲಿ ಹಂದಿಗಳ ರಕ್ತ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಮಾಲಿನ್ಯವನ್ನುಂಟು ಮಾಡಲಾಗುತ್ತಿದೆ. ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ,’’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

‘‘ಜನರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಹಂದಿಗಳ ಕಸಾಯಿಖಾನೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಕುರಿತ ಪ್ರಸ್ತಾವನೆಗೆ ಆರೋಗ್ಯ ಸ್ಥಾಯಿ ಸಮಿತಿಯು ಒಪ್ಪಿಗೆ ನೀಡಿದೆ. ಈ ಬಗ್ಗೆ ಕೌನ್ಸಿಲ್‌ನಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು,’’ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ