ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ಮತ್ತೆ ಹರಿಹಾಯ್ದಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ), 'ಸಾವಿರಾರು ಪುಟಗಳ ವರದಿಯನ್ನು ಸಿದ್ದಪಡಿಸಲು ವ್ಯರ್ಥ ಕಾಲಹರಣ ಮಾಡುವ ಬದಲು, ಕೆಲಸ ಮಾಡಿ ತೋರಿಸಿ'ಎಂದು ತಾಕೀತು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್ಜಿಟಿ ಮುಂದೆ ಗುರುವಾರ ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೊಂದಿ ವಾದ ಮಂಡಿಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ವರದಿಯನ್ನು ಸಲ್ಲಿಸಿ, ಬೆಳ್ಳಂದೂರು ಕೆರೆಯ ಸುತ್ತ ಇರುವ 97 ಕೈಗಾರಿಕೆಗಳ ಪೈಕಿ 76 ಕೈಗಾರಿಕೆಗಳನ್ನು ಮುಚ್ಚಿಸಲಾಗಿದೆ ಎಂದು ಹೇಳಿದೆ. ಅದನ್ನು ಗಮನಿಸಿದ ನ್ಯಾಯಮಂಡಳಿ 'ಬೆಳ್ಳಂದೂರು ಕೆರೆಯ ಸುತ್ತ ಇರುವ ಕೈಗಾರಿಕೆಗಳು ನಿಜವಾಗಿಯೂ ಮುಚ್ಚಿವೆಯೋ,ಇಲ್ಲವೋ ಎಂಬುದನ್ನು ಸರಕಾರವೇ ಉತ್ತರಿಸಬೇಕು'ಎಂದು ಹೇಳಿತು.
ಎಸ್ಟಿಪಿ ಅಳವಡಿಕೆಗೆ ಸೂಚಿಸಿ: ಅಲ್ಲದೆ, ಕೆರೆಯ ಸುತ್ತಮುತ್ತ ಯಾವ್ಯಾವ ಕೈಗಾರಿಕೆಗಳು ತ್ಯಾಜ್ಯ ನೀರನ್ನು ಹೊರಹಾಕುತ್ತಿವೆಯೋ ಅವುಗಳಿಗೆ ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್ಟಿಪಿ) ಅಳವಡಿಸಿಕೊಳ್ಳುವಂತೆ ಮಾಲಿನ್ಯ ಮಂಡಳಿ, ಬೆಂಗಳೂರು ಜಲ ಮಂಡಳಿ ಹಾಗೂ ಬಿಡಿಎ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡ ನಿರ್ದೇಶನ ನೀಡಬೇಕು. ನಿಗದಿತ ಅವಧಿಯಲ್ಲಿ ಕೈಗಾರಿಕೆಗಳು ಎಸ್ಟಿಪಿ ಅಳವಡಿಸಿಕೊಳ್ಳದಿದ್ದರೆ ಅವುಗಳ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿ,ಅವುಗಳನ್ನು ಬಂದ್ ಮಾಡಿ ಎಂದು ಎನ್ಜಿಟಿ ಸೂಚನೆ ನೀಡಿದೆ.
ಜೊತೆಗೆ ಕೆರೆಯ ಸುತ್ತಮುತ್ತಲಿನ ಯಾವ ವಸತಿ ಸಂಕೀರ್ಣಗಳು ಎಸ್ಟಿಪಿ ಅಳವಡಿಸಿಕೊಳ್ಳುವುದಿಲ್ಲವೋ ಅವುಗಳ ವಿದ್ಯುತ್ ಮತ್ತು ನೀರಿನ ಸಂಪರ್ಕ ಕೂಡಲೇ ಸ್ಥಗಿತಗೊಳಿಸಿ ಎಂದೂ ನ್ಯಾಯಮಂಡಳಿ ಆದೇಶ ನೀಡಿದೆ.
ಅಲ್ಲದೆ, ಎಲ್ಲ ಎಸ್ಟಿಪಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ನೀಡಿ ಪರೀಕ್ಷಿಸಬೇಕು ಎಂದೂ ನಿರ್ದೇಶಿಸಲಾಗಿದೆ.
ಎನ್ಜಿಟಿ ಆದೇಶದ ಬಗ್ಗೆ ತಜ್ಞರಾದ ವಿ.ಬಾಲಸುಬ್ರಮಣಿಯನ್ 'ಎನ್ಜಿಟಿ ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳು, ವಸತಿ ಸಂಕೀರ್ಣಗಳು, ಎಸ್ಟಿಪಿ ಹಾಗೂ ಕಾಲುವೆಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿರುವ ಒಳ್ಳೆಯ ಬೆಳವಣಿಗೆ. ಸರಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಕೆಲಸವನ್ನು ಎನ್ಜಿಟಿ ಮಾಡಿಸುತ್ತಿದೆ.ಎನ್ಜಿಟಿ ಆದೇಶವನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸಬೇಕು 'ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಟಿಜನ್ ಆ್ಯಕ್ಷನ್ ಫೋರಂನ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ಮುಕುಂದ 'ಎನ್ಜಿಟಿ ಸರಕಾರ ಕೇವಲ ವರದಿಗಳನ್ನು ತಯಾರು ಮಾಡುವುದನ್ನು ಬಿಟ್ಟು,ನಿಜಕ್ಕೂ ಕೆಲಸ ಮಾಡಬೇಕು ಎಂದು
ತುಂಬಾ ಸ್ಪಷ್ಟವಾಗಿ ಹೇಳಿದೆ. ಸರಕಾರ ಬೆಂಗಳೂರಿನ ಎಲ್ಲ ಕೆರೆಗಳ ಸಂರಕ್ಷಣೆ ಕುರಿತಂತೆ ಕ್ರಿಯಾ ಯೋಜನೆ ರೂಪಿಸಬೇಕು. ಕೆರೆಗಳ ಸುತ್ತಲಿನ ಬಫರ್ ವಲಯ ನಿಗದಿ ಮಾಡಬೇಕು, ಒತ್ತುವರಿಗಳನ್ನು ತೆರವುಗೊಳಿಸಬೇಕು ಮತ್ತು ಕೆರೆ ಪ್ರದೇಶವನ್ನು ಸಂರಕ್ಷಿತ ಹಾಗೂ ಪಾರಂಪರಿಕ ಪ್ರದೇಶವೆಂದು ಘೋಷಿಸಬೇಕು 'ಎಂದು ಹೇಳಿದ್ದಾರೆ.
ಸಿವಿಕ್ ಕಾರ್ಯಕರ್ತ ಪ್ರಕಾಶ್ ಬೆಳವಡಿ 'ಎನ್ಜಿಟಿ ಸರಕಾರಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.ಜಲಮಂಡಳಿ ಮೊದಲು ಕೆರೆಗೆ ಹರಿದುಬರುತ್ತಿರುವ ಕಲುಷಿತ ನೀರನ್ನು ತಡೆಯಬೇಕು, ತ್ಯಾಜ್ಯ ನೀರನ್ನು ಸಂಸ್ಕರಿಸಲು ಕ್ರಮ ಕೈಗೊಳ್ಳಬೇಕು 'ಎಂದು ತಿಳಿಸಿದ್ದಾರೆ.
ಕೆರೆ ಪರಿಸರ ಸಮೀಕ್ಷೆಗೆ ಸೂಚನೆ
ಬೆಳ್ಳಂದೂರು ಕೆರೆಗೆ 17 ಕಡೆಯಿಂದ ಕಲುಷಿತ ನೀರು ಹರಿದುಬರುತ್ತದೆ. ಆ ಕಾಲುವೆಗಳ ವಿಸ್ತ್ರೀರ್ಣ, ನೀರಿನ ಪ್ರಮಾಣ, ಗುಣಮಟ್ಟವನ್ನು ಪರಿಶೀಲಿಸಬೇಕು. ಜೀವವೈವಿಧ್ಯ ಆಮ್ಲಜನಕ ಬೇಡಿಕೆ(ಬಿಒಡಿ) ವರದಿಯನ್ನು ಪರಿಶೀಲಿಸಬೇಕು. ಬೆಳ್ಳಂದೂರು ಕೆರೆ ಸುತ್ತಮುತ್ತ ಎಷ್ಟು ಕೈಗಾರಿಕೆಗಳಿವೆ, ಎಷ್ಟು ವಸತಿ ಸಂಕೀರ್ಣಗಳಿವೆ ಎಂಬುದರ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಎನ್ಜಿಟಿ ಸರಕಾರಕ್ಕೆ ನಿರ್ದೇಶನ ನೀಡಿದೆ. ಕೋರ್ಟ್ ಆದೇಶದಂತೆ ಕಲುಷಿತ ಕೈಗಾರಿಕೆಗಳನ್ನು ಮುಚ್ಚಬೇಕು ಮತ್ತು ಕೆರೆಯಿಂದ ಹೊರಹೋಗುತ್ತಿರುವ ನೀರಿನ ಪ್ರಮಾಣ, ಸಂಸ್ಕರಿಸುತ್ತಿರುವ ನೀರಿನ ಪ್ರಮಾಣ ದಾಖಲು ಮಾಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.