ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆಗಳು ಗರಿಗೆದರಿರುವಾಗಲೇ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ರಮೇಶ್ ಅವರನ್ನು ಯತ್ನಾಳ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಮಹೇಶ್ ಕಮಟಳ್ಳಿ ಕೂಡಾ ಇದ್ದರು.
ಇನ್ನು ಭೇಟಿಯ ಸಂದರ್ಭದಲ್ಲಿ ನಡೆದ ಮಾತುಕತೆ ಬಗ್ಗೆ ಇಬ್ಬರೂ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಭೇಟಿ ಹಾಗೂ ಮಾತುಕತೆ ಕುರಿತಾಗಿ ಮಾತನಾಡಿದ ಶಾಸಕ ಯತ್ನಾಳ್,ನಾನು ರಮೇಶ ಜಾರಕಿಹೊಳಿ ಊಟಕ್ಕೆ ಸೇರಿದ್ದೆವು. ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು. ವಾರದೊಳಗೆ ಮಾಡಿದರೆ ಒಳ್ಳೆಯದು. ನಂತರ ಪುನಾರಚನೆಯಾದರೆ ಉಪಯೋಗ ಇಲ್ಲ ಎಂದರು.
ಯುಪಿಯಂತೆ ಅಧಿಕಾರ ಅನುಭವಿಸಿದ ನಂತರ ಹೋಗ್ತಾರೆ: ಯತ್ನಾಳ್ ಅಸಮಾಧಾನ
ಕರ್ನಾಟಕದಲ್ಲಿ ಕೆಲ ಮಂದಿ ಚುನಾವಣೆ ವೇಳೆ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರೀತಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಯತ್ನಾಳ್ ಅಸಮಾಧಾನ ಹೊರಹಾಕಿದರು. ಕೆಲವರು ಜಾತ್ರೆ ಮಾಡ್ಕೊಂಡು ಹೋಗ್ತಾರೆ. ಈಗಾಗಲೇ ಡಿಕೆ ಶಿವಕುಮಾರ್ ಜೊತೆಗೆ ಸೀಟ್ ಬಗ್ಗೆ ಮಾತಾನಾಡಿಕೊಂಡಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇದೆ. ಚುನಾವಣೆ ಘೋಷಣೆ ನಂತರ ರಾಜೀನಾಮೆ ಕೊಡ್ತಾರೆ. ರಾಜೀನಾಮೆ ಕೊಟ್ಟು ಬೇರೆಡೆಗೆ ಹೋಗ್ತಾರೆ. ನಂತರ ಯತ್ನಾಳ ಬೇಕು ಜಾರಕಿಹೊಳಿ ಬೇಕು ಅಂತ ಹುಡುಕಿದರೆ ಆಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಕೆಲವರಿಗೆ ಹತ್ತು ಓಟ್ ತರೋ ಯೋಗ್ಯತೆ ಇಲ್ಲ.ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ. ಅಂತಹವರನ್ನು ಮಂತ್ರಿ ಮಾಡಿದ್ದಾರೆ.ಇವರಿಂದ ಉಪಯೋಗ ಇಲ್ಲ.ಮೂರನೇ ಮಠ ಮಾಡೋಕೆ ಹೊರಟಿದ್ದಾರೆ ಎಂದು ಸಚಿವ ನಿರಾಣಿ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.