ಆ್ಯಪ್ನಗರ

ಪೊಲೀಸ್ ಪೇದೆಗೆಳ ಗಾಂಜಾ ಮಾರಾಟ : ಇಬ್ಬರ ವಿರುದ್ಧ ಮತ್ತೊಂದು FIR, ಸಿಗರೇಟ್ ಸೇದಿದಕ್ಕೆ 1 ಲಕ್ಷ ದಂಡ

ಸಿಎಂ ನಿವಾಸದ ಭದ್ರತೆಗೆ ನಿಯೋಜನೆಗೊಂಡು ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ಪೊಲೀಸ್‌ ಪೇದೆಗಳ ವಿರುದ್ಧ ಇದೀಗ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಈ ಬಾರಿಯ ಕೇಸ್ ಏನು? ಇಲ್ಲಿದೆ ಈ ಬಗ್ಗೆ ಮಾಹಿತಿ.

Vijaya Karnataka Web 23 Jan 2022, 8:04 am

ಹೈಲೈಟ್ಸ್‌:

  • ಬೆಂಗಳೂರು ಪೊಲೀಸ್ ಪೇದೆಗೆಳ ಗಾಂಜಾ ಮಾರಾಟ ಪ್ರಕರಣ
  • ಗಾಂಜಾದೊಂದಿಗೆ ಸಿಗರೇಟ್ ಸೇದಿದಕ್ಕೆ 1 ಲಕ್ಷ ದಂಡ
  • ಗಾಂಜಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಕಾನ್‌ಸ್ಟೆಬಲ್‌ಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web download (84)
ಬೆಂಗಳೂರು : ಸಿಎಂ ನಿವಾಸದ ಭದ್ರತೆಗೆ ನಿಯೋಜನೆಗೊಂಡು ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ಪೊಲೀಸ್‌ ಪೇದೆಗಳ ವಿರುದ್ಧ ಇದೀಗ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಪೊಲೀಸ್‌ ಪೇದೆಗಳಾದ ಶಿವಕುಮಾರ್‌ ಮತ್ತು ಸಂತೋಷ್‌ ಇಬ್ಬರೂ ಈ ಹಿಂದೆ ಗಾಂಜಾ ತುಂಬಿದ್ದ ಸಿಗರೇಟ್‌ ಸೇವಿಸುತ್ತಿದ್ದ ಆಟೋ ಚಾಲಕ ಇಲಿಯಾಸ್‌ನನ್ನು ಬೆದರಿಸಿ ಒಂದು ಲಕ್ಷ ರೂ.ಗೆ ಬೇಡಿಕೆಯಿಟ್ಟು 5 ಸಾವಿರ ರೂ. ಲಂಚ ಪಡೆದಿದ್ದ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾನತುಗೊಂಡಿರುವ ಸಂತೋಷ್‌ ಹಾಗೂ ಶಿವಕುಮಾರ್‌ ಈ ಹಿಂದೆ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2021 ಅ.25ರಂದು ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್‌ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಸ್ನೇಹಿತ ಸೈಯದ್‌ ಜತೆ ಗಾಂಜಾ ಸೇವನೆ ಮಾಡುತ್ತಿದ್ದ.

ಆ ವೇಳೆ ಕರ್ತವ್ಯನಿರತ ಪೇದೆಗಳಾಗಿದ್ದ ಶಿವಕುಮಾರ್‌ ಮತ್ತು ಸಂತೋಷ್‌ ದಾಳಿ ನಡೆಸಿ ಇಬ್ಬರನ್ನು ಹಿಡಿದು, ಗಾಂಜಾ ತುಂಬಿದ್ದ ಸಿಗರೇಟ್‌ ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೇ, ಒಂದು ಲಕ್ಷ ರೂ. ಕೊಟ್ಟರೆ ಪ್ರಕರಣ ದಾಖಲಿಸುವುದಿಲ್ಲ, ಇಲ್ಲದಿದ್ದರೇ ಎನ್‌ಡಿಪಿಎಸ್‌ ಕಾಯಿದೆಯಡಿ ಗಾಂಜಾ ಮಾರಾಟ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಇದಕ್ಕೆ ಹೆದರಿದ ಆಟೋ ಚಾಲಕ ಇಲಿಯಾಸ್‌, ತನ್ನ ಬಳಿ ಕೇವಲ ಐದು ಸಾವಿರವಿರುವುದಾಗಿ ಹೇಳಿದಾಗ, ಅದನ್ನು ಪಡೆದು ಇಬ್ಬರನ್ನು ಬಿಟ್ಟು ಕಳುಹಿಸಿದ್ದರು.

ಮುಖ್ಯಮಂತ್ರಿಯ ಮನೆ ಭದ್ರತೆಗಿದ್ದ ಪೊಲೀಸರಿಂದಲೇ ಗಾಂಜಾ ಮಾರಾಟ!

ಇಲಿಯಾಸ್‌ ದೂರಿನನ್ವಯ ಪ್ರಕರಣ ದಾಖಲು:
ಲಂಚ ಪಡೆದಿದ್ದ ವೇಳೆಯಲ್ಲಿ ಈ ಇಬ್ಬರು ಪೊಲೀಸರು ಕರ್ತವ್ಯದಲ್ಲಿದ್ದರು. ಹಾಗಾಗಿ, ಪೊಲೀಸರ ವಿರುದ್ಧ ದೂರು ನೀಡಲು ಹೋದರೆ ಮತ್ತೆ ತನ್ನ ವಿರುದ್ಧವೇ ಇಲ್ಲದಿರುವ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬಹುದು ಎಂದು ಹೆದರಿ ಇಲಿಯಾಸ್‌ ದೂರು ನೀಡಿರಲಿಲ್ಲ. ಇದೀಗ, ಈ ಇಬ್ಬರು ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸಿ ಬಂಧಿಸಿರುವುದರಿಂದ ಧೈರ್ಯ ಮಾಡಿ ತಮ್ಮಿಂದ 5 ಸಾವಿರ ರೂ. ಲಂಚ ಪಡೆದಿದ್ದರ ವಿರುದ್ಧ ದೂರು ನೀಡಲಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರು ಪೆಡ್ಲರ್‌ಗಳು ವಶಕ್ಕೆ!

ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಇಬ್ಬರು ಡ್ರಗ್‌ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರ ರಾಜ್ಯಗಳು ಹಾಗೂ ರಾಜ್ಯದ ನಾನಾ ಭಾಗಗಳಿಂದ ಗಾಂಜಾ ತರಿಸಿಕೊಂಡು ಸರಬರಾಜು ಮಾಡುತ್ತಿದ್ದ ಅಖಿಲ್‌ ರಾಜ್‌ ಮತ್ತು ಅಮ್ಜದ್‌ ಖಾನ್‌ನನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆಯಲಾಗಿದೆ. ಇವರು ಎಲ್ಲಿಂದ ಗಾಂಜಾ ತರಿಸಿಕೊಳ್ಳುತ್ತಿದ್ದರು, ಅಮಾನತುಗೊಂಡಿರುವ ಇಬ್ಬರು ಪೊಲೀಸ್‌ ಪೇದೆಗಳಿಗೆ ಎಂದಿನಿಂದ ಗಾಂಜಾ ನೀಡುತ್ತಿದ್ದರು? ಇನ್ನು ಯಾರಾರ‍ಯರು ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಇನ್ಸ್‌ಪೆಕ್ಟರ್‌ ಗಾಂಜಾ ಪ್ರಕರಣ ಮೊದಲೇ ತಿಳಿದಿತ್ತಾ?
ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪೊಲೀಸ್‌ ಪೇದೆಗಳು ಈ ಹಿಂದೆಯೂ ಗಾಂಜಾ ಸರಬರಾಜು ಸಂಬಂಧ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಕೋರಮಂಗಲ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ಗೆ ಮೊದಲೇ ತಿಳಿದಿತ್ತು ಎನ್ನಲಾಗುತ್ತಿದೆ.

ಇಬ್ಬರು ಪೊಲೀಸ್‌ ಇಲಾಖೆಯಲ್ಲಿರುವುದರಿಂದ ಪ್ರಕರಣ ದಾಖಲಿಸದೇ ನೇರವಾಗಿ ಆರೋಪಿಗಳನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು ಎನ್ನಲಾಗುತ್ತಿದೆ. ಸಿಸಿಬಿ ಪೊಲೀಸರು ಈ ಇಬ್ಬರನ್ನು ವಿಚಾರಣೆ ನಡೆಸಿ ಪೊಲೀಸ್‌ ಇಲಾಖೆಯ ಗೌರವದ ಪ್ರಶ್ನೆ ಎಂದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸದೇ, ಮುಂದೇ ಯಾವುದೇ ಅಪರಾಧ ಪ್ರಕರಣಗಳಲ್ಲೂ ಭಾಗಿಯಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಇಬ್ಬರು ಪೊಲೀಸ್‌ ಪೇದೆಗಳ ಹಿನ್ನೆಲೆ ಠಾಣಾಧಿಕಾರಿಗೆ ತಿಳಿದಿದ್ದರೂ, ಮುಖ್ಯಮಂತ್ರಿಗಳ ನಿವಾಸ ಭದ್ರತೆಗೆ ನಿಯೋಜನೆ ಮಾಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ