ಆ್ಯಪ್ನಗರ

ಪತಿಯ ಸ್ಮರಣಾರ್ಥ 73,000ಕ್ಕಿಂತ ಹೆಚ್ಚು ಮರ ಬೆಳೆಸಿದ ಪರಿಸರ ಪ್ರೇಮಿ

ಈಜಿಪುರ ಸಾಲುಮರದ ತಿಮ್ಮಕ್ಕ ಎಂದೇ ಹೆಸರಾಗಿರುವ ಜಾನೆಟ್ ಯಜ್ಞೇಶ್ವರನ್ ಅವರಿಗೆ ಈಗ 68 ವಯಸ್ಸು, ಪತಿಯ ನೆನಪಲ್ಲಿ ಅವರು ನೆಟ್ಟಿದ್ದು 73ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು.

TIMESOFINDIA.COM 5 Jun 2019, 2:24 pm
ಬೆಂಗಳೂರು: ನಾವು ಅತಿಯಾಗಿ ಪ್ರೀತಿಸುವವರನ್ನು ಕಳೆದುಕೊಂಡಾಗ ಅವರ ಸ್ಮರಣಾರ್ಥ ಏನಾದರು ಮಾಡಲು ಬಯಸುತ್ತೇವೆ. ಹೆಚ್ಚಿನವರು ನಿರ್ಮಿಸುವುದು ಸ್ಮಾರಕವನ್ನು. ಇವರು ಸಹ ಪತಿಯನ್ನು ಕಳೆದುಕೊಂಡಿ ಏಕಾಂಗಿ ಜೀವನವನ್ನು ನಡೆಸುತ್ತಿರುವವರು. ಪ್ರೀತಿಯ ಪತಿಯ ಸ್ಮರಣೆಯಲ್ಲಿ ಇವರು ಮಾಡಿದ್ದು ಮಾತ್ರ ಸಾಟಿ ಇಲ್ಲದ ಉನ್ನತ ಕಾರ್ಯ.
Vijaya Karnataka Web Janet


ಈಜಿಪುರ ಸಾಲುಮರದ ತಿಮ್ಮಕ್ಕ ಎಂದೇ ಹೆಸರಾಗಿರುವ ಜಾನೆಟ್ ಯಜ್ಞೇಶ್ವರನ್ ಅವರಿಗೆ ಈಗ 68 ವಯಸ್ಸು, ಪತಿಯ ನೆನಪಲ್ಲಿ ಅವರು ನೆಟ್ಟಿದ್ದು 73ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು.

ಜೂನ್ 5, 2006ರಲ್ಲಿ ಮೊದಲ ಬಾರಿಗೆ ಅವರು ತಮ್ಮ ಮನೆಯ ಹತ್ತಿರ ಹೊಂಗೆ ಗಿಡವನ್ನು ನೆಟ್ಟಿದ್ದರು. ಮತ್ತೀಗ ಬರೋಬ್ಬರಿ 13 ವರ್ಷಗಳಾಗಿದ್ದು, ಗಿಡ ಮರವಾಗಿ ನೆರಳು ಕೊಡುತ್ತಿದೆ. ಅಷ್ಟೇ ಅಲ್ಲ ಪರಿಸರಕ್ಕೆ ಶುದ್ಧ ಗಾಳಿಯನ್ನು ನೀಡುತ್ತಿದೆ.

ಇದೆಲ್ಲ ಶುರುವಾಗಿದ್ದು ಹೇಗೆ?

ಸಪ್ಟೆಂಬರ್ 2005ರಲ್ಲಿ ಜಾನೆಟ್ ತಮ್ಮ ಪತಿ ಆರ್ ಎಸ್. ಯಜ್ಞೇಶ್ವರನ್ ಅವರನ್ನು ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ನಡೆಯುತ್ತಿತ್ತು. ನಾನಿದಕ್ಕೆ ಬಹಳ ನೊಂದುಕೊಂಡಾಗ ಸ್ನೇಹಿತರು ಪ್ರತಿಭಟನೆ ಮಾಡೋಣ ಎಂದರು. ಆದರೆ ಅದಕ್ಕಿಂತ ಹೆಚ್ಚು ಉಪಯುಕ್ತವಾಗಿರುವುದನ್ನು ಮಾಡಬೇಕೆಂದು ಅನ್ನಿಸುತ್ತಿತ್ತು. ಹೀಗಾಗಿ ರಾಜನೆತ್ ಯಜ್ಞೇಶ್ವರನ್ ಚಾರಿಟೆಬಲ್ ಟ್ರಸ್ಟ್ ಆರಂಭಿಸಿ, ಅದರಡಿಯಲ್ಲಿ ಗಿಡ ನೆಡಲು ಆರಂಭಿಸಿದೆ.

ರಸ್ತೆಯಂಚು, ಕೆರೆ ದಡ, ಮಿಲಿಟರಿ ಪ್ರದೇಶ, ಶಿಕ್ಷಣ ಸಂಸ್ಥೆ, ಸಾಫ್ಟ್‌ವೇರ್ ಕಂಪನಿಗಳ ಆವರಣ, ಮನೆ ಹಾಗೂ ರೈತರ ಭೂಮಿಯಲ್ಲಿ ಹೊಂಗೆ, ಬೇವು, ಸಂಪಿಗೆ, ನೇರಳೆ, ಅತ್ತಿ, ಅರಳಿ ಸೇರಿದಂತೆ 73ಸಾವಿರಕ್ಕಿಂತ ಹೆಚ್ಚು ಸಸಿಗಳನ್ನು ನೆಟ್ಟಿರುವುದು ಜಾನೆಟ್‌ರ ಸಾಧನೆ.

ಪ್ರತಿ ವರ್ಷ 10 ಸಾವಿರ ಸಸಿ ನೆಡಬೇಕೆಂಬ ಉದ್ದೇಶ ಹೊಂದಿರುವ ಇವರು, ರಾಜ್ಯ ಹಾಗೂ ಹೊರ ರಾಜ್ಯದಿಂದ ಸಸಿ ತರಿಸಿಕೊಳ್ಳುತ್ತಾರೆ. ಕಸಿ ಮಾಡಿದ ಸಸಿಗಳನ್ನು ತೋಟಗಾರಿಕೆ ಇಲಾಖೆಯಿಂದಲೂ ಪಡೆಯುತ್ತಿದ್ದಾರೆ. ವಿದ್ಯುತ್ ತಂತಿ ಅಡ್ಡ ಬರದಂತೆ ಹಾಗೂ ಇತರ ಅಡಚಣೆಗಳಿಂದ ಮರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿ ನೆಡುತ್ತಾರೆ.

ಸರಕಾರದಿಂದ ಯಾವುದೇ ರೀತಿಯ ನೆರವಿಲ್ಲ. ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳ ಸ್ವಯಂ ಸೇವಕರು ಹಾಗೂ ಇತರ ಸಂಸ್ಥೆಗಳು ಹಣಕಾಸಿನ ನೆರವು ನೀಡುತ್ತಿದ್ದಾರೆ. ವಿವಾಹ ಹಾಗೂ ವಾರ್ಷಿಕೋತ್ಸವ, ಹುಟ್ಟುಹಬ್ಬ, ಹಬ್ಬ-ಹರಿದಿನಗಳಂದು ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಪರಿಸರ ದಿನದಂದು ನಿಜವಾದ ಪರಿಸರ ಪ್ರೇಮಿಗೆ ಸಲಾಂ ಎನ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ