ಆ್ಯಪ್ನಗರ

ಫುಟ್‌ಪಾತ್‌ ಅಧ್ವಾನದ ಗಮನಸೆಳೆಯಲು ಭರತ ನಾಟ್ಯ ಮಾಡಿದ ಕಲಾವಿದರು

ಮಲ್ಲೇಶ್ವರದ 16ನೇ ಕ್ರಾಸ್‌ನ ನಿವಾಸಿಗಳೆಲ್ಲರೂ ಒಗ್ಗೂಡಿ 'ಮಲ್ಲೇಶ್ವರಂ ಸೋಷಿಯಲ್‌' ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ.

Vijaya Karnataka 24 Oct 2018, 8:15 am
ಬೆಂಗಳೂರು: ನಗರದಲ್ಲಿ ಅಧ್ವಾನಗೊಂಡಿರುವ ಫುಟ್‌ಪಾತ್‌ಗಳ ದುಸ್ಥಿತಿ ಕುರಿತಂತೆ ಸರಕಾರ ಹಾಗೂ ಬಿಬಿಎಂಪಿ ಗಮನಸೆಳೆಯಲು ಮಲ್ಲೇಶ್ವರಂ ಸೋಷಿಯಲ್‌ ತಂಡವು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಣಕು ಭರತ ನಾಟ್ಯದ ವಿಡಿಯೊ ವೈರಲ್‌ ಆಗಿದೆ. ಪಾದಚಾರಿ ಮಾರ್ಗಗಳಲ್ಲಿ ನಾಟ್ಯ ಮಾಡಿಕೊಂಡು ನಡೆದಾಡಬೇಕಾದ ಸ್ಥಿತಿ ಇದೆ ಎಂದು ಟೀಕಿಸುವುದು ಇವರ ಪ್ರಯತ್ನವಾಗಿದೆ.
Vijaya Karnataka Web image


ಮಲ್ಲೇಶ್ವರದ 16ನೇ ಕ್ರಾಸ್‌ನ ನಿವಾಸಿಗಳೆಲ್ಲರೂ ಒಗ್ಗೂಡಿ 'ಮಲ್ಲೇಶ್ವರಂ ಸೋಷಿಯಲ್‌' ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ತಂಡವು ಕಳೆದ ಒಂದು ವರ್ಷದಿಂದ ಫುಟ್‌ಪಾತ್‌ ಬೇಕು ಅಭಿಯಾನ ಆರಂಭಿಸಿದೆ. ಹೀಗಾಗಿ, ನಗರದಲ್ಲಿನ ಫುಟ್‌ಪಾತ್‌ಗಳ ಅವ್ಯವಸ್ಥೆಯ ಕುರಿತು ಭರತ ನಾಟ್ಯ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಹದಗೆಟ್ಟು ಹೋಗಿರುವ ಪಾದಚಾರಿಗಳ ಮಾರ್ಗವನ್ನು ಕಂಡ ತಕ್ಷಣವೇ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವ ಪ್ರೀತಿ ಸುಂದರರಾಜನ್‌ ಮತ್ತು ಸೌಮ್ಯ ತಂತ್ರಿ ಅವರು ಒಂದಷ್ಟು ದೂರದವರೆಗೆ ಭರತ ನಾಟ್ಯ ಮಾಡುತ್ತಾ ಸಾಗುತ್ತಾರೆ. ಇವರಿಗೆ ಶ್ರೀರಾಮ್‌ (ತಾಳ), ರಾಘವೇಂದ್ರ ಪೈ (ವೀಣೆ) ಮತ್ತು ಸುದರ್ಶನ್‌ (ಕೊಳಲು) ಸಾಥ್‌ ನೀಡಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿ 1 ನಿಮಿಷ 13 ಸೆಕೆಂಡ್‌ಗಳ ವಿಡಿಯೊ ಚಿತ್ರೀಕರಿಸಿದ್ದು, ಅ. 16ರಂದು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಈವರೆಗೆ 5 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಭರತ ನಾಟ್ಯದ ಮೂಲಕ ಫುಟ್‌ಪಾತ್‌ಗಳ ಅವ್ಯವಸ್ಥೆ ಬಗ್ಗೆ ಲೇವಡಿ ಮಾಡಲಾಗಿದೆ.

''ನಾವು ಕಳೆದ ಒಂದು ವರ್ಷದಿಂದ ಫುಟ್‌ಪಾತ್‌ ಬೇಕು ಅಭಿಯಾನ ಆರಂಭಿಸಿದ್ದೇವೆ. ಇದರ ಅಂಗವಾಗಿ ಭರತ ನಾಟ್ಯದ ದೃಶ್ಯಾವಳಿಯನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದೆವು. ನ. 1ರಂದು ಫುಟ್‌ಪಾತ್‌ಗಳ ಮೇಲೆ ಹಿರಿಯ ನಾಗರಿಕರ ನಡಿಗೆ ಎಂಬು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ,'' ಎಂದು ಮಲ್ಲೇಶ್ವರಂ ಸೋಷಿಯಲ್‌ ತಂಡದ ಸದಸ್ಯ ಧನುಷ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

''ಮಲ್ಲೇಶ್ವರದಲ್ಲಷ್ಟೇ ಅಲ್ಲ; ನಗರದೆಲ್ಲೆಡೆ ಫುಟ್‌ಪಾತ್‌ಗಳ ಸ್ಥಿತಿ ಅಧ್ವಾನವಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಪಾದಚಾರಿ ಮಾರ್ಗಗಳಲ್ಲಿ ನಡೆಯಲು ನೃತ್ಯ ಮಾಡಬೇಕಾಗಿದೆ. ನಗರದ ನಿವಾಸಿಗಳು ತಮ್ಮ ಮನೆಯ ಮುಂಭಾಗದಲ್ಲಿ ಸುಸಜ್ಜಿತವಾಗಿ ಫುಟ್‌ಪಾತ್‌ ನಿರ್ಮಿಸಲು ಅವಕಾಶ ಕೊಡುತ್ತಿಲ್ಲ. ಜನರು ಫುಟ್‌ಪಾತ್‌ಗಳಲ್ಲಿ ನಡೆಯಲು ಹೇಗೆ ಸರ್ಕಸ್‌ ಮಾಡುತ್ತಾರೆ ಎಂಬುದನ್ನು ತೋರಿಸುವ ಸಲುವಾಗಿ ಅಣಕು ಭರತ ನಾಟ್ಯದ ವಿಡಿಯೊ ಚಿತ್ರೀಕರಿಸಿದೆವು,'' ಎಂದು ಹೇಳಿದರು.

ಅಂಗಡಿ-ಮುಂಗಟ್ಟುಗಳು, ಬೀದಿ ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿದ್ದಾರೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕೂಡ ಪಾದಚಾರಿ ಮಾರ್ಗಗಳಲ್ಲೇ ಸುರಿಯಲಾಗಿದೆ. ಅದೇ ರೀತಿ ಬಹುತೇಕ ಪ್ರದೇಶಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗಿರುತ್ತದೆ. ಹೀಗಾಗಿ, ಜನರಿಗೆ ನಡೆದಾಡಲು ಜಾಗವೇ ಇಲ್ಲವಾಗಿದೆ. ಪರಿಣಾಮ, ವಾಹನಗಳೊಂದಿಗೆ ಪೈಪೋಟಿಗಿಳಿದು ರಸ್ತೆಯಲ್ಲಿ ಸಾಗಬೇಕಾಗಿದೆ. ಭರತ ನಾಟ್ಯದ ವಿಡಿಯೊ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಅಪ್‌ನಲ್ಲಿ ವೈರಲ್‌ ಆಗಿದ್ದು, ಹಲವರು ತಾವು ನಿತ್ಯ ಅನುಭವಿಸುತ್ತಿರುವ ಸಂಕಟಗಳನ್ನು ಟ್ವೀಟ್‌ ಮಾಡಿದ್ದಾರೆ.

'ಮರಗಳು, ವಿದ್ಯುತ್‌ ಕಂಬಗಳು, ಬಸ್‌ ಶೆಲ್ಟರ್‌, ಅಂಗಡಿ-ಮುಂಗಟ್ಟುಗಳ ನಾಮಫಲಕಗಳು, ದರ್ಶಿನಿಗಳ ಟೇಬಲ್‌ಗಳು ಫುಟ್‌ಪಾತ್‌ ಅನ್ನು ಆವರಿಸಿಕೊಂಡಿವೆ. ಇದರಿಂದ ಜನರ ಓಡಾಟಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿದೆ' ಎಂದು ಚಿಕ್ಕು ಎಂಬುವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ದಯವಿಟ್ಟು ಫುಟ್‌ಪಾತ್‌ಗಳನ್ನು ಕೇಳಬೇಡಿ. ಒಂದೊಮ್ಮೆ ಕೇಳಿದರೆ ಬಿಬಿಎಂಪಿ ಮೇಯರ್‌ ಫುಟ್‌ಪಾತ್‌ ತೆರಿಗೆ ಸಂಗ್ರಹಿಸಲು ಮುಂದಾಗುತ್ತಾರೆ. ಬಹುತೇಕ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆಯ ತಾಣಗಳಾಗಿವೆ,'' ಎಂದು ಸಿ.ಎನ್‌.ಕಿರಣ್‌ ಎಂಬುವರು ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ