ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಜಾಗೃತಿ ಸಂದೇಶಗಳೊಂದಿಗೆ ರಸ್ತೆಗಿಳಿಯಲು ಸಜ್ಜಾಗುತ್ತಿದೆ ಬಿಎಂಟಿಸಿ

ಲಾಕ್‌ಡೌನ್ ತೆರವುಗೊಂಡ ಬೆನ್ನಲ್ಲೆ ರಸ್ತೆಗೆ ಇಳಿಯಲು ಬಿಎಂಟಿಸಿ ಬಸ್‌ಗಳು ಸಜ್ಜಾಗುತ್ತಿವೆ. ಕೊರೊನಾ ಕುರಿತಾದ ಜಾಗೃತಿ ಫಲಕಗಳನ್ನು ಪ್ರತಿಯೊಂದು ಬಸ್‌ಗಳಲ್ಲಿ ಅಳವಡಿಸಲಾಗಿದ್ದು ಸಿಬ್ಬಂದಿಯ ಸುರಕ್ಷತೆಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ.

Vijaya Karnataka 15 May 2020, 5:07 pm
ಬೆಂಗಳೂರು: ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇದೀಗ ಮತ್ತೆ ಪುನರಾರಂಭಗೊಳ್ಳಲು ಸಜ್ಜಾಗುತ್ತಿವೆ. ಸಾರ್ವಜನಿಕ ಸೇವೆಗಾಗಿ ಬೆಂಗಳೂರು ನಗರದ ರಸ್ತೆಗಿಳಿಯಲು ಬಿಎಂಟಿಸಿ ಬಸ್‌ಗಳು ಸಜ್ಜಾಗುತ್ತಿದ್ದು ಪ್ರತಿ ಬಸ್‌ಗಳಲ್ಲಿ ಕೊರೊನಾ ಸೋಂಕು ಕುರಿತಾಗಿ ಜಾಗೃತಿ ಮೂಡಿಸುವ ಸಂದೇಶಗಳನ್ನು ನೀಡಿದ ಫಲಕಗಳನ್ನು ಅಳವಡಿಸಲಾಗಿದೆ.
Vijaya Karnataka Web bmtc bus


ಈಗಾಗಲೇ ತುರ್ತು ಸೇವೆಗಾಗಿ ಬೆಂಗಳೂರು ನಗರದಲ್ಲಿ ಸುಮಾರು 600 ಬಸ್‌ಗಳು ಓಡಾಡುತ್ತಿವೆ. ಸರ್ಕಾರದ ಆದೇಶ ಬಂದೊಡನೆ ನಗರದಲ್ಲಿ 6498 ಬಸ್‌ಗಳು ಕಾರ್ಯಾಚರಣೆಗಿಳಿಯಲು ಸಜ್ಜಾಗಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್ ಕಾರಣದಿಂದಾಗಿ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಇನ್ನೂ ಹಾಜರಾಗಿಲ್ಲ. ಬಿಎಂಟಿಸಿಯಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ ಸುಮಾರು 33,000 ನೌಕರರಿದ್ದಾರೆ. ಅವರಿಗೆಲ್ಲಾ ಕರ್ತವ್ಯಕ್ಕೆ ಹಾಜರಾಗಲು ಸಜ್ಜಾಗಿರುವಂತೆ ಸೂಚನೆಯನ್ನು ಈಗಾಗಲೇ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕೊರೊನಾ ಲಾಕ್‌ಡೌನ್: ಕೆಎಸ್‌ಆರ್‌ಟಿಸಿಗೆ ಆಗಿರುವ ನಷ್ಟದ ಪ್ರಮಾಣವೆಷ್ಟು?

ಕೊರೊನಾ ಮುಂಜಾಗರೂಕತಾ ಕ್ರಮವಾಗಿ ಪ್ರತಿಯೋರ್ವ ಸಿಬ್ಬಂದಿಯನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಹಾಗೂ ಪ್ರತಿಯೊಬ್ಬರಿಗೆ ಮಾಸ್ಕ್‌, ಗ್ಲೌಸ್‌,‌ ಹಾಗೂ ಸ್ಯಾನಿಟೈಸರ್‌ ನೀಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಪಿಎಂಎಲ್‌ ಕಾಯಿದೆ-2017ರಲ್ಲಿ ಏನೇನಿದೆ? ಇಲ್ಲಿವೆ 10 ಪ್ರಮುಖಾಂಶಗಳು

ಪ್ರತಿಯೊಂದು ಬಸ್‌ಗಳಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೂ ಕೊರೊನಾದಿಂದ ರಕ್ಷಣೆ ಪಡೆಯುವ ಕುರಿತಾಗಿ ಕೈಗೊಳ್ಳಬೇಕಾಗಿರುವ ಮುಂಜಾಗರೂಕತೆಗಳ ಬಗ್ಗೆ ಮಾಹಿತಿ ನೀಡುವ ಫಲಕವನ್ನು ಅಳವಡಿಸಲಾಗಿದೆ.

ಸದ್ಯ ಲಾಕ್‌ಡೌನ್ ಜಾರಿಯಲ್ಲಿದ್ದು ಯಾವುದೇ ಸರ್ಕಾರಿ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿಲ್ಲ. ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಬಿಎಂಟಿಸಿ ಕೂಡಾ ಸಜ್ಜಾಗುತ್ತಿದೆ.

ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದು ಈ ಅವಧಿಯಲ್ಲಿ ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತಗೊಂಡ ಪರಿಣಾಮ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಪ್ರತಿನಿತ್ಯ ಬಿಎಂಟಿಸಿಗೆ 3.5 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಲಾಕ್‌ಡೌನ್ ಅವಧಿಯಿಂದ 173. 34 ಕೋಟಿ ಅಂದಾಜು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ