ಆ್ಯಪ್ನಗರ

ಗರುಡಾ ಮಾಲ್‌ನಲ್ಲಿ ಪುಸ್ತಕ ದಾನ ಅಭಿಯಾನಕ್ಕೆ ಚಾಲನೆ

ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವುದರಿಂದ ಸಿಗುವ ಆನಂದಕ್ಕೆ ಸರಿಸಾಟಿಯಿಲ್ಲ.

Vijaya Karnataka 6 Nov 2018, 10:50 am
ಬೆಂಗಳೂರು: ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂದು ಶಾಸಕ ಡಾ.ಉದಯ್‌ ಬಿ.ಗರುಡಾಚಾರ್‌ ವಿಷಾದ ವ್ಯಕ್ತಪಡಿಸಿದರು.
Vijaya Karnataka Web Pustaka Dana


ನಗರದ ಗರುಡಾ ಮಾಲ್‌ನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ನಗರ ಕೇಂದ್ರ ಗ್ರಂಥಾಲಯ ಸೋಮವಾರ ಹಮ್ಮಿಕೊಂಡಿದ್ದ 'ಪುಸ್ತಕ ದಾನ ಅಭಿಯಾನ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ''ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವುದರಿಂದ ಸಿಗುವ ಆನಂದಕ್ಕೆ ಸರಿಸಾಟಿಯಿಲ್ಲ,'' ಎಂದರು.

ಇದೇ ವೇಳೆ ಮಾತನಾಡಿದ ಸಾಹಿತಿ ಹಾಗೂ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಶೂದ್ರ ಶ್ರೀನಿವಾಸ್‌ ''ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪುಸ್ತಕ ಓದುವ ಸಂಸ್ಕೃತಿ ಅತ್ಯವಶ್ಯಕ. ಆದರೆ, ನಮ್ಮ ಶಾಲಾ ಶಿಕ್ಷಕರು ಪುಸ್ತಕ ಓದುವ ಸಂಸ್ಕೃತಿಯಿಂದ ದೂರಾಗುತ್ತಿದ್ದಾರೆ,'' ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್‌ ಎಸ್‌.ಹೊಸಮನಿ ಮಾತನಾಡಿ ''ಸಾರ್ವಜನಿಕರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಲು ಪುಸ್ತಕ ದಾನ ಅಭಿಯಾನವನ್ನು ನಡೆಸಲಾಗುತ್ತಿದೆ. ಬೆಂಗಳೂರು ನಗರದಲ್ಲಿರುವ ಶಾಪಿಂಗ್‌ ಮಾಲ್‌ಗಳಿಗೆ ಆಗಮಿಸುವ ಸಾರ್ವಜನಿಕರು, ಲೇಖಕರು, ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ದಾನ ಮಾಡುವ ಪುಸ್ತಕಗಳನ್ನು ಮಾಲ್‌ಗಳಲ್ಲಿ ಸಾರ್ವಜನಿಕರಿಗೆ ಒದಗಿಸಿ ಓದುವ ಹವ್ಯಾಸ ಬೆಳೆಸಲಾಗುವುದು,'' ಎಂದರು.

ನ.9ರಂದು ನಗರದ ಗೋಪಾಲನ್‌ ಆರ್ಕೆಡ್‌ ಮಾಲ್‌, ನ.13ರಂದು ಮಂತ್ರಿ ಮಾಲ್‌, ನ.15ರಂದು ಎಲಿಮೆಂಟ್‌ ಮಾಲ್‌ ಹಾಗೂ ನ.16ರಂದು ಫೋರಂ ಮಾಲ್‌ನಲ್ಲಿ ಪುಸ್ತಕ ದಾನ ಅಭಿಯಾನ ನಡೆಯಲಿದೆ. ಅಭಿಯಾನ ನಡೆಯುವ ಮಾಲ್‌ಗಳಲ್ಲಿ ಓದುಗರ ಕೊಠಡಿ (ರೀಡಿಂಗ್‌ ರೂಂ) ಶೀರ್ಷಿಕೆ ಇರುವ ದೊಡ್ಡ ಪೆಟ್ಟಿಗೆಯೊಂದನ್ನು ಇಡಲಾಗುತ್ತದೆ ಹಾಗೂ ಅದರಲ್ಲಿ ಕೃತಿಗಳನ್ನು ಹಾಕಬಹುದು.

ವಿಧಾನ ಪರಿಷತ್‌ ಸದಸ್ಯ ವಿ.ನಾರಾಯಣಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಶಾಲಿನಿ ರಜನೀಶ್‌, ಬಿಬಿಎಂಪಿ ಸದಸ್ಯ ಎಂ.ಡಿ.ದ್ವಾರಕನಾಥ್‌, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ.ಪಿ.ವೈ.ರಾಜೇಂದ್ರಕುಮಾರ್‌, ಸಾಹಿತಿ ರತ್ನ ಕಾಳೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಿಪ್ಪು ಜಯಂತಿ ವಿರೋಧಿಸುತ್ತೇನೆ: ಶಾಸಕ ಉದಯ್‌ ಗರುಡಾಚಾರ್‌

ಟಿಪ್ಪು ಬಗ್ಗೆ ವೈಯಕ್ತಿಕವಾಗಿ ನನಗೆ ಯಾವುದೇ ವಿರೋಧವಿಲ್ಲ. ಆದರೆ ಬಿಜೆಪಿ ಪಕ್ಷದ ಶಾಸಕನಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸರಕಾರದ ಕ್ರಮವನ್ನು ವಿರೋಧಿಸುತ್ತೇನೆ ಎಂದು ಶಾಸಕ ಡಾ.ಉದಯ್‌ ಬಿ.ಗರುಡಾಚಾರ್‌ ತಿಳಿಸಿದರು.

ಟಿಪ್ಪು ಜಯಂತಿ ಬಗ್ಗೆ ರಾಜ್ಯದಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸರಕಾರ ಸಮಗ್ರವಾಗಿ ಪರಿಶೀಲನೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆ ಮೂಲಕ ಯಾವುದೇ ಸಮುದಾಯದ ಹಿತಕ್ಕೆ ಧಕ್ಕೆಯಾಗುವಂತಹ ತೀರ್ಮಾನ ಕೈಗೊಳ್ಳಬಾರದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ